ಪಂಚಾಯತ್ ವಿಕೇಂದ್ರೀಕರಣ ಸೂಚ್ಯಂಕದಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆಯಲು ಕಾರಣವೇನು?
ಬೆಂಗಳೂರು, ಫೆಬ್ರವರಿ 22: ಪಂಚಾಯತಿ ವಿಕೇಂದ್ರಿಕರಣ ಕುರಿತು ದೇಶದ ಎಲ್ಲಾ ರಾಜ್ಯಗಳಲ್ಲಿ ನಡೆಸಿರುವ ಅಧ್ಯಯನ ವರದಿಯನ್ನು ಕೇಂದ್ರದ ಪಂಚಾಯತ್ ರಾಜ್ ಸಚಿವಾಲಯ ಬಿಡುಗಡೆಗೊಳಿಸಿದ್ದು, ಸೂಚ್ಯಂಕದ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಈ ಬಗ್ಗೆ ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಈ ಸ್ಥಾನ ಗಳಿಸಲು ತಾವು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ್ದಾರೆ.
ಪಂಚಾಯತ್ ರಾಜ್ ವ್ಯವಸ್ಥೆಯು ಪ್ರಜಾಪ್ರಭುತ್ವಕ್ಕೆ ಮುಕುಟವಿದ್ದಂತೆ. ಅಧಿಕಾರದ ವಿಕೇಂದ್ರಿಕರಣದ ಮೂಲಕ 'ಸ್ಥಳೀಯ ಸರ್ಕಾರ' ಎಂಬ ಪರಿಕಲ್ಪನೆಯ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಅಭಿವೃದ್ಧಿ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನ ಮಾಡಬೇಕು ಎನ್ನುವುದು ಈ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಾಗ ನಾನು ಕೈಗೊಂಡ ನಿರ್ಧಾರ ಎಂದು ಸಚಿವರು ಹೇಳಿದ್ದಾರೆ.

ಈ ಇಲಾಖೆಯ ಹೊಣೆ ನನ್ನ ಹೆಗಲಿಗೆ ಬಂದ ಕ್ಷಣದಿಂದಲೇ ಲೋಪದೋಷಗಳೇನಿದೆ, ಪರಿಹಾರ ಸೂತ್ರಗಳೇನಿದೆ, ಸವಾಲುಗಳೇನಿದೆ, ಸಾಧ್ಯತೆಗಳೇನಿದೆ ಎಂಬ ಚಿಂತನ ಮಂಥನ ನಡೆಸಿ, ಸ್ಪಷ್ಟ ರೂಪುರೇಷೆಯೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಶ್ರದ್ದೆಯಿಂದ ಕೆಲಸ ಮಾಡಿದೆ, ನನ್ನ ಚಿಂತನೆಗಳಿಗೆ, ಉತ್ಸಾಹಕ್ಕೆ ಅಧಿಕಾರಿಗಳ ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಹಕಾರವೂ ಪ್ರಮುಖ ಪಾತ್ರ ವಹಿಸಿದೆ ಎಂದರು.
ಗ್ರಾಮ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸುವುದು, ಗ್ರಾಮೀಣ ಜನರ ಅಭ್ಯುದಯಕ್ಕಾಗಿರುವ ಅರಿವು ಕೇಂದ್ರ, ಕೂಸಿನ ಮನೆ, ನರೇಗಾದಂತಹ ಯೋಜನೆಗಳನ್ನು ಸಮರ್ಥವಾಗಿ ಜಾರಿಗೊಳಿಸುವುದು. ತಂತ್ರಜ್ಞಾನವನ್ನು ಬಳಸಿ ಸೇವೆಗಳನ್ನು ಸರಳೀಕರಣಗೊಳಿಸುವುದು ಸೇರಿದಂತೆ ಪಂಚಾಯತ್ ರಾಜ್ ವ್ಯವಸ್ಥೆಯ ಯಂತ್ರವನ್ನು ಚುರುಕುಗೊಳಿಸಲಾಯಿತು. 15ನೇ ಹಣಕಾಸು ಆಯೋಗದ ಅನುದಾನವನ್ನು ಸಮರ್ಥವಾಗಿ ಬಳಸಳಾಯಿತು, ಗ್ರಾಮ ಪಂಚಾಯಿತಿಗಳ ಆಸ್ತಿ ಸಂರಕ್ಷಣಾ ಕ್ರಮಗಳೊಂದಿಗೆ, ಈ ವರ್ಷ ದಾಖಲೆ ಮಟ್ಟದ ತೆರಿಗೆ ಸಂಗ್ರಹವಾಗಿರುವುದು ಕೂಡ ಸಂತಸದ ವಿಷಯವಾಗಿದೆ ಎಂದರು.

ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯದ ಪಂಚಾಯತ್ ವಿಕೇಂದ್ರಿಕರಣ ಸೂಚ್ಯಾಂಕದಲ್ಲಿ ಕರ್ನಾಟಕವು ಅಗ್ರ ಸ್ಥಾನ ಪಡೆದಿರುವುದು ನಮ್ಮ ಶ್ರದ್ಧೆ ಹಾಗೂ ಶ್ರಮಕ್ಕೆ ಸಂದಿರುವ ಪ್ರತಿಫಲ. ಸಿಎಂ ಸಿದ್ದರಾಮಯ್ಯ, ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಪಂಚಾಯತ್ ರಾಜ್ ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ಇಚ್ಚಾಶಕ್ತಿ ದೃಢವಾಗಿದೆ. ಮಹಾತ್ಮ ಗಾಂಧಿಯವರ ಗ್ರಾಮ ರಾಜ್ಯದ ಆಶಯಗಳನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.












Click it and Unblock the Notifications