'ರಾಹುಲ್ ಗಾಂಧಿ ದೇಗುಲ ದರ್ಶನ ಹಿಂದೆ ರಾಜಕೀಯ ಇಲ್ಲ'!
ಬೆಂಗಳೂರು, ಫೆಬ್ರವರಿ 10 : ಎಐಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕರ್ನಾಟಕದ ನೆಲದ ಮೇಲೆ ಕಾಲಿಡುತ್ತಿರುವ ರಾಹುಲ್ ಗಾಂಧಿ ಅವರ ಭೇಟಿಯ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಲರವದ ಧೂಳೆದ್ದಿದೆ. ರಾಹುಲ್ ಅವರು ಶನಿವಾರ ವಿಧಾನಸಭೆ ಚುನಾವಣೆಗೆ ಭವ್ಯ ಚಾಲನೆ ನೀಡಲಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ (182ರಲ್ಲಿ 80 ಸ್ಥಾನ), ರಾಜಸ್ತಾನದಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರಿರುವ ಕಾಂಗ್ರೆಸ್, ಕರ್ನಾಟಕದಲ್ಲಿಯೂ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸ ಹೊಂದಿದೆ. ಸೋನಿಯಾ ಗಾಂಧಿ ಅವರು ಕೂಡ ಕರ್ನಾಟಕ ಅತ್ಯಂತ ಮಹತ್ವದ್ದು ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ರಾಜ್ಯ ಪ್ರವಾಸ : ಕಾರ್ಯಕ್ರಮಗಳ ಪಟ್ಟಿ
ರಾಫೇಲ್ ಯುದ್ಧ ವಿಮಾನ ಖರೀದಿ, ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ಸನ್ನು ತೀವ್ರವಾಗಿ ಟೀಕಿಸಿದ್ದು, ಭಾಷಣದಲ್ಲಿ ರೇಣುಕಾ ಚೌಧರಿ ಅವರ ಅಟ್ಟಹಾಸದ ನಗುವನ್ನು ಮೋದಿ ಅಪಹಾಸ್ಯ ಮಾಡಿದ್ದು ರಾಹುಲ್ ಗಾಂಧಿಯವರನ್ನು ಕೆರಳಿಸಿದ್ದು, ಈ ಹಿನ್ನೆಲೆಯಲ್ಲಿ ಅವರು ಏನು ಭಾಷಣ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಬೆಂಗಳೂರಿನಲ್ಲಿ ಮೋದಿ : ಮೋದಿಯ ಟಾಪ್ 10 ಹೇಳಿಕೆಗಳು!
ಫೆಬ್ರವರಿ 4ರಂದು ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ನಿರ್ಗಮನದ ದಾರಿ ಹಿಡಿದಿದೆ. ಜನರು ಸಿದ್ದರಾಮಯ್ಯ ಸರಕಾರಕ್ಕೆ ಟಾಟಾಬೈಬೈ ಹೇಳಲು ಸಿದ್ಧರಾಗಿದ್ದಾರೆ ಎಂದು ಘಂಟಾಘೋಷವಾಗಿ ಸಾರಿದ್ದರು. ಇದಕ್ಕೆ ಕರ್ನಾಟಕ ನೆಲದಲ್ಲಿಯೇ ರಾಹುಲ್ ಅವರು ಏನು ಉತ್ತರ ನೀಡಲಿದ್ದಾರೆ?
ಗುಜರಾತ್ ನಂತರ ಕರ್ನಾಟಕದಲ್ಲಿ ರಾಹುಲ್
ಗುಜರಾತ್ ನಲ್ಲಿ ಪ್ರಸಿದ್ಧ ಸೋಮನಾಥ್ ದೇಗುಲ ಸೇರಿದಂತೆ ಹಲವಾರು ಮಂದಿರಗಳಿಗೆ ಭೇಟಿ ನೀಡಿ, ಹಿಂದೂ ಮತಗಳನ್ನು ಸಳೆಯಲು ಯತ್ನಿಸಿದ್ದ ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಕೂಡ, ಪ್ರಚಾರದೊಂದಿಗೆ ಹಲವಾರು ಧರ್ಮಗಳ, ಹಲವಾರು ದೇಗುಲಗಳಿಗೆ ಭೇಟಿ ನೀಡಿ ಹಿಂದೂ ಮತಗಳನ್ನು ಸಳೆಯಲು ಎಲ್ಲ ಯತ್ನ ನಡೆಸಲಿದ್ದಾರೆ.
ಹುಲಿಗಿ ಗ್ರಾಮದಲ್ಲಿರುವ ಸುಪ್ರಸಿದ್ಧ ಹುಲಿಗೆಮ್ಮ ದೇವಿ
ಹನ್ನೆರಡು ಗಂಟೆಗೆ ಹೊಸಪೇಟೆಯಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ನಂತರ ಅವರು, ಹೊಸಪೇಟೆ ತಾಲೂಕಿನ ಮುನಿರಾಬಾದ್ ಬಳಿಯಿರುವ ಹುಲಿಗಿ ಗ್ರಾಮದಲ್ಲಿರುವ ಸುಪ್ರಸಿದ್ಧ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ರಾಹುಲ್ ಅವರು ಮಧ್ಯಾಹ್ನ 3.30ರ ಸುಮಾರಿಗೆ ಭೇಟಿ ನೀಡಲಿದ್ದಾರೆ.
ಕೊಪ್ಪಳದ ಗವಿ ಸಿದ್ದೇಶ್ವರ ಮಠಕ್ಕೂ ರಾಹುಲ್ ಭೇಟಿ
ಫೆಬ್ರವರಿ 11ರಂದು ಕೊಪ್ಪಳದಲ್ಲಿ ಭಾರೀ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ನಂತರ, ಜಿಲ್ಲೆಯಲ್ಲಿರುವ ಕರ್ನಾಟಕ ಅತ್ಯಂತ ಪುರಾತನ, ಗವಿಮಠವೆಂದೇ ಹೆಸರಾಗಿರುವ ಗವಿ ಸಿದ್ದೇಶ್ವರ ಮಠಕ್ಕೂ ಭೇಟಿ ನೀಡಲಿದ್ದಾರೆ. ಲಿಂಗಾಯತ ಮತಗಳನ್ನು ಬಿಜೆಪಿಯಿಂದ ಕಿತ್ತುಕೊಳ್ಳಲು ಕಾಂಗ್ರೆಸ್ ಭಾರೀ ಹರಸಾಹಸ ಮಾಡುತ್ತಿರುವುದು ಗುಟ್ಟಾಗೇನು ಉಳಿದಿಲ್ಲ.
ಕಲಬುರಗಿ ಖ್ವಾಜಾ ಬಂದೇ ನವಾಜ್ ದರ್ಗಾ
ಫೆಬ್ರವರಿ 12ರಂದು ಕಲಬುರಗಿಯಲ್ಲಿ ಸಮಾವೇಶವದಲ್ಲಿ ಭಾಗವಹಿಸಿದ ನಂತರ, ಕಲಬುರಗಿ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೂ ಅವರು ಭೇಟಿ ನೀಡಲಿದ್ದಾರೆ. ಫೆಬ್ರವರಿ 13ರಂದು ಬೀದರ್ ಜಿಲ್ಲೆಯಲ್ಲಿರುವ ಬಸವ ಕಲ್ಯಾಣ ಅನುಭವ ಮಂಟಪಕ್ಕೂ ರಾಹುಲ್ ಗಾಂಧಿ ಅವರು ಭೇಟಿ ನೀಡಲಿರುವುದು ಖಚಿತವಾಗಿದೆ.
ಸುಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡುವುದು ವಾಡಿಕೆ
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ರಾಹುಲ್ ಗಾಂಧಿಯವರು ಹಿಂದೂ, ಮುಸ್ಲಿಂ, ಲಿಂಗಾಯತ ಮೂರು ಪಂಗಡಗಳಿಗೆ ಸೇರಿದ ಪ್ರಾರ್ಥನಾ ಸ್ಥಳಗಳಿಗೆ ಭೇಟಿ ನೀಡುತ್ತಿರುವುದು. ಆದರೆ, ಈ ದೇಗುಲ ಭೇಟಿಯ ಹಿಂದೆ ಯಾವುದೇ ರಾಜಕೀಯವಿಲ್ಲ. ಹೋದಲ್ಲೆಲ್ಲ ರಾಹುಲ್ ಅವರು ಅಲ್ಲಿಯ ಸುಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡುವುದು ವಾಡಿಕೆ ಎಂದು ಕಾಂಗ್ರೆಸ್ ವಕ್ತಾರರು ಹೇಳಿಕೆ ನೀಡಿದ್ದಾರೆ.
ಆರೋಪ ನಿರಾಕರಿಸಿದ ನಿವೇದಿತ್ ಆಳ್ವಾ
ರಾಹುಲ್ ಅವರು ಹಿಂದೂ ದೇವಸ್ಥಾನಗಳಿಗೆ ಅಥವಾ ಬೇರೆ ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡುತ್ತಿರುವುದು ಹಿಂದೂಗಳನ್ನು ವೊಲಿಸಿಕೊಳ್ಳಲಾಗಲಿ ಅಲ್ಲ. ಇದು ನಮ್ಮ ದೇಶಕ್ಕಾಗಿ ನಾವು ಜಾತ್ಯತೀತ ನಿಲುವು ತಳೆದಿರುವ ಸಂಕೇತ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ನಿವೇದಿತ್ ಆಳ್ವಾ ಅವರು ಸ್ಪಷ್ಟನೆ ನೀಡಿದ್ದಾರೆ.