Mekedatu: ಮೇಕೆದಾಟು ವಿಷಯದಲ್ಲಿ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ ನಿಲುವೇನು? : ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ
ಬೆಂಗಳೂರು, ಜೂನ್ 01: ಮೇಕೆದಾಟು ಯೋಜನೆ ವಿಚಾರವಾಗಿ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್ ಮತ್ತು ಇತರ ಮುಖಂಡ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ಹಿಂದೆ ಮೇಕೆದಾಟು ಯೋಜನೆ ವಿಚಾರವಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸಿದ್ದು, ಮೇಕೆದಾಟು ಸಂಬಂಧ ತಮಿಳುನಾಡಿನ ಸಚಿವ ದೊರೆಮುರುಗನ್ ಅವರು ಆಕ್ರಮಣಕಾರಿ ವರ್ತನೆ ಕೈಬಿಡಿ ಎಂದಿದ್ದಾರೆ. ಹಿಂದೆ ಬಿಜೆಪಿ ಸರಕಾರ ಇದ್ದಾಗ ಹೋರಾಟ ಮಾಡಿದ್ದ ಕಾಂಗ್ರೆಸ್ಸಿಗರು ಈಗ ತಮ್ಮ ನಿಲುವನ್ನು ತಿಳಿಸಲಿ ಎಂದು ಒತ್ತಾಯಿಸಿದ್ದಾರೆ.

ಇನ್ನೂ ದೇಶಕ್ಕೆ ಅವಮಾನ ಮಾಡಿದ, ನಿಂದಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ಸಿನಿಂದ ಉಚ್ಚಾಟಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಪತ್ರ ಮೂಲಕ ಒತ್ತಾಯಿಸುವುದಾಗಿ ತಿಳಿಸಿದರು.
ರಾಹುಲ್ ಗಾಂಧಿಯವರು ವಿದೇಶಿ ನೆಲದಲ್ಲಿ ನಿಂತು ಭಾರತದ ಅಪಮಾನ ಮಾಡಿದ್ದನ್ನು ಮತ್ತೆ ಖಂಡಿಸಿದ ಅವರು, ಎಲ್ಲ ವಿರೋಧ ಪಕ್ಷಗಳು ಕಾಂಗ್ರೆಸ್ ಜೊತೆ ಸೇರಿ 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂಬ ಕರೆಯ ಕುರಿತು ಮಾತನಾಡಿದರು. ಎಲ್ಲ ವಿರೋಧ ಪಕ್ಷಗಳು ಕಾಂಗ್ರೆಸ್ ಜೊತೆ ಯಾಕೆ ಸೇರಬೇಕು? ಬಿಜೆಪಿ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ಕಾಂಗ್ರೆಸ್ ದುರಾಡಳಿತ, ದುರ್ನಡತೆ ವಿರುದ್ಧ ಜನ್ಮ ತಾಳಿವೆ ಎಂದರು.

ಕಾಂಗ್ರೆಸ್ ಪಕ್ಷ ಬಿಜೆಪಿಗೆ ಸರಿಸಾಟಿಯಲ್ಲ. 1980ರ ದಶಕದಲ್ಲಿ ಭಾರತದಲ್ಲಿ ದಲಿತರು ಆತಂಕದ ಪರಿಸ್ಥಿತಿ ಎದುರಿಸುತ್ತಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ, ಅವರು ಅದನ್ನು ವಿದೇಶಿ ನೆಲದಲ್ಲಿ ಹೇಳಬಾರದಿತ್ತು ಎಂದರಲ್ಲದೆ, ಆಗ ಇಲ್ಲಿ ಇಂದಿರಾ ಗಾಂಧಿಯವರ ಸರಕಾರ ಅಧಿಕಾರದಲ್ಲಿತ್ತು ಎಂದು ವಿವರಿಸಿದರು. ನಂತರ ರಾಜೀವ್ ಗಾಂಧಿಯವರ ಸರಕಾರ ಇತ್ತಲ್ಲವೇ ಎಂದು ಪ್ರಶ್ನಿಸಿದರು.
1980ರ ದಶಕದ ದಲಿತರ ಪರಿಸ್ಥಿತಿಯನ್ನು ಇಲ್ಲಿ ಈಗ ಮುಸ್ಲಿಮರು ಎದುರಿಸುತ್ತಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿದರು. ಯಾವ ಮುಸ್ಲಿಮರೂ ಈಗ ಸಂಕಷ್ಟ, ಆತಂಕದ ಪರಿಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದರು. ಒಂದು ಸಮುದಾಯ ಓಲೈಸಲು ಮತ್ತು ಎತ್ತಿಕಟ್ಟಲು ರಾಹುಲ್ ಗಾಂಧಿ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications