ಇಲ್ಲಿದೆ ದಿನೇಶ್ ಕಲ್ಲಹಳ್ಳಿ ಯುಟರ್ನ್ ಹೊಡೆದ ಹಿಂದಿನ ಅಸಲಿ 'ಸಿಡಿ' ಕಹಾನಿ!
ಬೆಂಗಳೂರು, ಮಾ. 07: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕುತೂಹಲಕಾರಿ ಬೆಳವಣಿಗೆಯಲ್ಲಿ ಸಂತ್ರಸ್ತ ಯುವತಿಯ ಕುಟುಂಬಸ್ಥರ ಪರವಾಗಿ ದೂರು ಸಲ್ಲಿಸಿದ್ದಾಗಿ ಹೇಳಿಕೊಂಡಿದ್ದ ದಿನೇಶ್ ಕಲ್ಲಹಳ್ಳಿ ಯುಟರ್ನ್ ಹೊಡೆದಿದ್ದಾರೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕೊಟ್ಟಿದ್ದ ದೂರನ್ನು ವಾಪಾಸ್ ಪಡೆಯುವುದಾಗಿ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ರಾಮನಗರ ಜಿಲ್ಲೆಯ ತಮ್ಮೂರು ಕಲ್ಲಹಳ್ಳಿಯಲ್ಲಿ ಹೇಳಿದ್ದಾರೆ.
ದೂರು ವಾಪಾಸ್ ಪಡೆಯಲು ಪೊಲೀಸರಿಗೆ ಬರೆದಿರುವ ಅರ್ಜಿಯನ್ನು ಅದಕ್ಕೂ ಮೊದಲೇ ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಸಂಶಯ ಮೂಡಿಸಿದ್ದಾರೆ. ಜೊತೆಗೆ ತಮ್ಮ ವಕೀಲರ ಮೂಲಕ ಇಂದು ಸಂಜೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ಕಾನೂನಾತ್ಮಕವಾಗಿ ದೂರು ವಾಪಾಸ್ ಪಡೆಯುವ ಬಗ್ಗೆ ವಾಟ್ಸಪ್ನಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೊತೆಗೆ ತಾವು ದೂರು ವಾಪಾಸ್ ಪಡೆಯುವ ಮೊದಲೇ ಎಲ್ಲವನ್ನೂ ಮಾಧ್ಯಮಗಳಿಗೆ ಒದಗಿಸುವ ಮೂಲಕ ಅಚ್ಚರಿಯ ನಡೆಯನ್ನು ದಿನೇಶ್ ಕಲ್ಲಹಳ್ಳಿ ಅವರು ಪ್ರದರ್ಶಿಸಿದ್ದಾರೆ. ಅಷ್ಟಕ್ಕೂ ದಿನೇಶ್ ಕಲ್ಲಹಳ್ಳಿ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಾತಿನಿಂದ ನೊಂದು ದೂರನ್ನು ವಾಪಾಸ್ ಪಡೆಯಲು ಮುಂದಾಗಿರುವುದಾಗಿ ತಿಳಿಸಿದ್ದಾರೆ. ಆದರೆ ಅವರು ದೂರು ವಾಪಾಸ್ ಪಡೆಯುವುದಕ್ಕೆ ನಿಜವಾಗಿಯೂ ಇರುವ ಕಾರಣಗಳು ಬೇರೆ ಎನ್ನುತ್ತಿವೆ ಮಾಹಿತಿಗಳು.

ಮಾಜಿ ಸಿಎಂ ಕುಮಾರಸ್ವಾಮಿ ಕಾರಣವಂತೆ!
ದೂರು ವಾಪಾಸ್ ಪಡೆಯಲು ಮುಂದಾದ ದಿನೇಶ್ ಕಲ್ಲಹಳ್ಳಿ ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. ಪೊಲೀಸರಿಗೆ ಬರೆದಿರುವ 5 ಪುಟಗಳ ಅರ್ಜಿಯಲ್ಲಿ ತಾವು ದೂರು ಪಡೆಯಲು ಇರುವ ಕಾರಣಗಳನ್ನೂ ವಿವರಿಸಿದ್ದಾರೆ. ಅವುಗಳ್ಲೊಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಂದ ಎದುರಾಗಿರುವ ಆರೋಪ. 'ಸಿಡಿ' ಬಿಡಗಡೆ ಪ್ರಕರಣದಲ್ಲಿ 5 ಕೋಟಿ ರೂಪಾಯಿಗಳ 'ಡೀಲ್' ಆಗಿದೆ ಎಂದು ಕುಮಾರಸ್ವಾಮಿ ಹೇಳಿದ್ದರು. ಅದನ್ನೇ ಪ್ರಮುಖವಾಗಿ ದಿನೇಶ್ ಉಲ್ಲೇಖಿಸಿದ್ದಾರೆ.

ಸಂಪರ್ಕಕ್ಕೆ ಸಿಗುತ್ತಿಲ್ಲ 'ಯುವತಿ'
ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಡಿರುವ ಆರೋಪದಿಂದ ತಾವು ದೂರು ವಾಪಾಸ್ ಪಡೆಯುತ್ತಿರುವುದಾಗಿ ದಿನೇಶ್ ಹೇಳಿದ್ದಾರೆ. ಆದರೆ ಈಗಾಗಲೇ ದಿನೇಶ್ ದೂರು ಕೊಟ್ಟು 6 ದಿನಗಳಾಗಿವೆ. ತಾಂತ್ರಿಕ ಕಾರಣಗಳಿಂದ ದೂರು ದಾಖಲಿಸಿಕೊಳ್ಳಲು ಪೊಲೀಸರಿಗೂ ಆಗಿಲ್ಲ. ಸಂತ್ರಸ್ತ ಯುವತಿಯ ಪತ್ತೆಗೆ ಪೊಲೀಸರು ಸತತ ಪ್ರಯತ್ನ ನಡೆಸಿದ್ದಾರೆ. ಆದರೂ ಆ ಯುವತಿ ಸಿಕ್ಕಿಲ್ಲ ಎಂಬ ಮಾಹಿತಿ ಇದೆ. ಈ ಮಧ್ಯೆ ದಿನೇಶ್ ದೂರು ವಾಪಾಸ್ ಪಡೆಯಲು ಮುಂದಾಗಿರುವುದು ಆಶ್ಚರ್ಯ ಮೂಡಿಸಿದೆ.

ಆರ್.ಆರ್. ನಗರದ 48 'ಪಿಜಿ'ಗಳಲ್ಲಿ ಹುಡುಕಾಟ
ಸಂತ್ರಸ್ತ ಯುವತಿಯನ್ನು ಪತ್ತೆ ಮಾಡಲು ಪೊಲೀಸರು ಬೆಂಗಳೂರಿನ ಆರ್.ಆರ್. ನಗರ ಹಾಗೂ ಸುತ್ತಲಿನ ಸುಮಾರು 48ಕ್ಕೂ ಹೆಚ್ಚು ಪಿಜಿಗಳನ್ನು ಜಾಲಾಡಿದ್ದಾರೆ. ಜೊತೆಗೆ ಆರ್ ಆರ್ ನಗರದ ಸುತ್ತಲಿನ ಪಿಜಿಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಉತ್ತರ ಕರ್ನಾಟಕ ಮೂಲದವರು ಎಂಬ ಮಾಹಿತಿ ಇರುವ ಆ ಸಂತ್ರಸ್ತ ಯುವತಿ ಪೊಲೀಸರಿಗೆ ಸಿಗುತ್ತಿಲ್ಲ. ಇದು ಕೂಡ ದಿನೇಶ್ ಕಲ್ಲಹಳ್ಳಿ ದೂರು ವಾಪಾಸ್ ಪಡೆಯಲು ಒಂದು ಕಾರಣ ಎನ್ನಲಾಗುತ್ತಿದೆ. ಆದರೆ ಅದಕ್ಕಿಂತ ದೊಡ್ಡ ಆರೋಪ ದಿನೇಶ್ ಮೇಲೆ ಬಂದಿದೆ.
Recommended Video

ಕೈಕೊಟ್ಟರಾ 'ಸಿಡಿ' ಕರ್ತರು?
ಮತ್ತೊಂದೆಡೆ 'ಸಿಡಿ' ಕೊಟ್ಟವರು ದಿನೇಶ್ ಕಲ್ಲಹಳ್ಳಿ ಅವರಿಗೆ 'ಕೈ' ಕೊಟ್ಟಿದ್ದಾರೆ ಎಂಬ ಮಾಹಿತಿಯೂ ಬರುತ್ತಿದೆ. ಹೀಗಾಗಿ ಕಂಗಾಲಾಗಿರುವ ದಿನೇಶ್ ದೂರು ವಾಪಾಸ್ ಪಡೆಯಲು ಮುಂದಾಗಿದ್ದಾರೆ ಎಂಬ ವರದಿಗಳಿವೆ. 'ಸಿಡಿ'ಯಲ್ಲಿರುವ ಯುವತಿ ಈವರೆಗೆ ದಿನೇಶ್ ಕಲ್ಲಹಳ್ಳಿ ಅವರಿಗೂ ಸಿಕ್ಕಿಲ್ಲ. ಜೊತೆಗೆ ಸಿಡಿ ಕೊಟ್ಟವರು ದಿನೇಶ್ ಕಲ್ಲಹಳ್ಳಿ ಅವರಿಗೆ ಸಂಪೂರ್ಣ ಮಾಹಿತಿ ಕೊಟ್ಟಿಲ್ಲ. ಹೀಗಾಗಿ ಅವರೂ ಕೂಡ ಈ ಪ್ರಕರಣದಲ್ಲಿ ದಾರಿ ತಪ್ಪಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ಇದೆ.
ಹೀಗಾಗಿ ದಿನೇಶ್ ಕಲ್ಲಹಳ್ಳಿ ಅವರು ದೂರು ಹಿಂಪಡೆಯುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ. ನಾಳೆ ಈ ಪ್ರಕರಣ ಮತ್ತೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.












Click it and Unblock the Notifications