ಕಾಮರಾಜ ಸೂತ್ರ ಎಂದರೇನು? ಸಿಎಂ ಸಿದ್ದು ಅಳವಡಿಸಬಲ್ಲರೇ?
ಬೆಂಗಳೂರು, ಜೂನ್ 13: ಬಹುಕಾಲದಿಂದ ನೆನಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ ವಿಷಯ ಮತ್ತೊಮ್ಮೆ ಸಿದ್ದರಾಮಯ್ಯ ಅವರ ಮುಂದೆ ಬಂದು ಕುಳಿತಿದೆ. ಫಾರ್ಚೂನರ್ ಕಾರಿನ ಮೇಲೆ ಕೂತ ಕಾಗೆ ಓಡಿಸಿದಂತೆ ಸಚಿವ ಸ್ಥಾನ ಆಕಾಂಕ್ಷಿಗಳನ್ನು ಓಡಿಸಲು ಸಾಧ್ಯವಿಲ್ಲದ ಕಾರಣ, ಪರ್ಯಾಯ ಮಾರ್ಗವೊಂದೇ ದಾರಿ. ಕಷ್ಟಕಾಲ ಎದುರಿಸುತ್ತಿರುವ ಕಾಂಗ್ರೆಸ್ಸಿಗೆ ಈಗ 'ಕಾಮರಾಜ' ಮಾರ್ಗವೇ ಸೂಕ್ತ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಹಾಗಾದರೆ ಏನಿದು ಕಾಮರಾಜ ಸೂತ್ರ?
ದೇಶಕಂಡ ಉತ್ತಮ ರಾಜಕೀಯ ಮುತ್ಸದ್ಧಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಿಷ್ಠಾವಂತ ಕೆ ಕಾಮರಾಜ್ ಅವರು ಕಷ್ಟಕಾಲದಲ್ಲಿದ್ದ ಕಾಂಗ್ರೆಸ್ಸಿಗೆ ಹಾಕಿಕೊಟ್ಟ ಮಾರ್ಗವೇ ಕಾಮರಾಜಸೂತ್ರ ಮಾರ್ಗ.[ತುರ್ತು ಮಂತ್ರಿ ಪರಿಷತ್ ಸಭೆ ಕರೆದ ಸಿದ್ದರಾಮಯ್ಯ]

1963ರಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರನ್ನು ರಾಜೀನಾಮೆ ನೀಡುವಂತೆ ಸೂಚಿಸಿ, ಪಕ್ಷದ ಬಲವರ್ಧನೆ, ಸಂಘಟನೆಗೆ ಬಳಸಿಕೊಳ್ಳಲಾಯಿತು. ಈ ಮೂಲಕ ಸ್ವಜನ ಪಕ್ಷಪಾತ, ಅಧಿಕಾರ ದಾಹವನ್ನು ನೀಗಿಸಿ, ಪಕ್ಷ ನೀಡುವ ಯಾವುದೇ ಜವಾಬ್ದಾರಿ ವಹಿಸಿಕೊಳ್ಳಲು ಎಲ್ಲರೂ ಸಿದ್ಧರಾಗುವ ಪ್ರಕ್ರಿಯೆಯಾಗಿದೆ.
ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಕೂಡಾ ಈ ಯೋಜನೆಗೆ ತಲೆ ಬಾಗಿದ್ದರು. 6 ಕೇಂದ್ರ ಸಚಿವರು ಹಾಗೂ 6 ರಾಜ್ಯಗಳ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಪಕ್ಷಕ್ಕಾಗಿ ದುಡಿಯಲು ಮುಂದಾದರು.
ಲಾಲ್ ಬಹದ್ದೂರ್ ಶಾಸ್ತ್ರಿ, ಜಗಜೀವನ್ ರಾಮ್, ಮೊರಾರ್ಜಿ ದೇಸಾಯಿ, ಬಿಜು ಪಟ್ನಾಯಕ್ ಹಾಗೂ ಎಸ್ ಕೆ ಪಾಟೀಲ್ ಅವರು ರಾಜೀನಾಮೆ ನೀಡಿದ್ದರು. ನಂತರ ಎಐಸಿಸಿ ಅಧ್ಯಕ್ಷರಾದ ಕಾಮರಾಜ್ ಅವರು ನೆಹರೂ ನಿಧನ ನಂತರ ಉಂಟಾದ ರಾಜಕೀಯ ಅಸ್ಥಿರತೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು.
ಪ್ರಧಾನಿ ಹುದ್ದೆ ಹುಡುಕಿಕೊಂಡು ಬಂದರೂ ತಿರಸ್ಕರಿಸಿದ ಕಾಮರಾಜ್ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಇಂದಿರಾಗಾಂಧಿ ಅವರು ಪ್ರಧಾನಿಯಾಗಿ ಆಡಳಿತ ನಡೆಸಲು ಬೇಕಾದ ರಾಜಕೀಯ ಸ್ಥಿರತೆ ತಂದವರು.
ಕರ್ನಾಟಕದಲ್ಲಿ ಈ ಮುಂಚೆ 2012ರಲ್ಲಿ ಡಿವಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಕಾಮರಾಜ ಮಾರ್ಗ ಅನುಸರಿಸುವ ಬಗ್ಗೆ ಸಿಟಿ ರವಿ ಹಾಗೂ ಕೆಎಸ್ ಈಶ್ವರಪ್ಪ ಅವರು ಚಿಂತನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications