ಯತ್ನಾಳ್ಗೆ ನೋಟಿಸ್ ಕೊಡಲು ತಾಕತ್ತಿಲ್ಲ ಎಂದ ರಾಜಣ್ಣ: ವಿಜಯೇಂದ್ರ ಏನಂದ್ರು?
ತುಮಕೂರು, ಫೆಬ್ರವರಿ 17: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ಗೆ ನೋಟಿಸ್ ಕೊಡಲು ತಾಕತ್ತು ಬಿಜೆಪಿ ರಾಜ್ಯಾಧ್ಯಕ್ಷರಿಗಿಲ್ಲ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಪ್ರತಿಕ್ರಿಯಿಸಿದ್ದು, ರಾಜಣ್ಣನವರು ನಮ್ಮ ಪಕ್ಷದವರೇ? ಅವರು ಕಾಂಗ್ರೆಸ್ ಪಕ್ಷದವರು. ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲು ಹೋಗುವುದಿಲ್ಲ ಎಂದು ತಿಳಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನದ ಕುರಿತ ಪ್ರಶ್ನೆಗೆ 20ರೊಳಗೆ ಉತ್ತರ ಲಭಿಸಲಿದೆ. ಜಿಲ್ಲಾಧ್ಯಕ್ಷರ ನೇಮಕಾತಿ ಆದ ಮೇಲೆ ರಾಜ್ಯಾಧ್ಯಕ್ಷರ ವಿಚಾರ ಗೊತ್ತಾಗಲಿದೆ. ದೆಹಲಿಯಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಸದ್ಯವೇ ಕೇಂದ್ರದ ವರಿಷ್ಠರು ರಾಜ್ಯಕ್ಕೆ ಬರಲಿದ್ದಾರೆ. ಎಲ್ಲ ಶಾಸಕರ ಜೊತೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಕೇಂದ್ರದ ಶಿಸ್ತು ಸಮಿತಿ ಯತ್ನಾಳರಿಗೆ ನೋಟಿಸ್ ಕೊಟ್ಟಿದೆ. 72 ಗಂಟೆಗಳ ಗಡುವು ಕೂಡ ಇತ್ತು. ಅದಾದ ಮೇಲೆ ಏನಾಗಿದೆ; ಏನಾಗುತ್ತಿದೆ ಎಂಬುದಕ್ಕೆ ಪ್ರತಿಕ್ರಿಯೆ ಕೊಡಲು ಹೋಗುವುದಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಕೇಂದ್ರದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸರಕಾರದ ನಿರ್ಧಾರ ಕುರಿತಂತೆ ಉತ್ತರ ನೀಡಿದ ಅವರು, ವಿಶ್ವವಿದ್ಯಾಲಯಗಳನ್ನು ಮುಚ್ಚುವುದು ದುರದೃಷ್ಟಕರ. ಬಿಜೆಪಿ ಸರಕಾರ ಇದ್ದಾಗ ತೆರೆದ ಹೊಸ ವಿವಿಗಳನ್ನು ಮುಚ್ಚುವ ಕೆಲಸವನ್ನು ಸರಕಾರ ಮಾಡುತ್ತಿದೆ. ಕಾರಣ ಏನು? ಇವುಗಳಿಗೆ 300 ಕೋಟಿ, 400 ಕೋಟಿ ಅನುದಾನ ಕೊಡಬೇಕಿದೆ. ಅನುದಾನ ಕೊಟ್ಟರೆ ವಿವಿಗಳು ಕೆಲಸ ಮಾಡಲು ಸಾಧ್ಯ ಮತ್ತು ಅದರಿಂದ ಬಡ ಮಕ್ಕಳಿಗೆ ಅನುಕೂಲ ಆಗುತ್ತದೆ. ಕಾಂಗ್ರೆಸ್ ಸರಕಾರದ ನಿರ್ಧಾರ ಶೋಭೆ ತರುವುದಿಲ್ಲ; ಇದರಿಂದ ಒಳಿತಾಗುವುದಿಲ್ಲ ಎಂದು ತಿಳಿಸಿದರು.
ಇದರಿಂದ ಮಕ್ಕಳಿಗೆ ಅನಾನುಕೂಲ ಆಗಲಿದೆ. ಮಕ್ಕಳಿಗೆ ಇವತ್ತು ಅನ್ಯಾಯ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇನ್ನಾದರೂ ರಾಜ್ಯ ಸರಕಾರ ಎಚ್ಚತ್ತುಕೊಂಡು ತನ್ನ ನಿರ್ಧಾರದಿಂದ ಹಿಂದೆ ಸರಿಯಲಿ ಎಂದು ಆಗ್ರಹಿಸಿದರು. ಇವರ ಗ್ಯಾರಂಟಿಗಳಿಂದ ಅನುದಾನ ಹೊಂದಿಸಲು ಸಾಧ್ಯವಾಗುತ್ತಿಲ್ಲ, ಪೆಟ್ರೋಲ್ ದರ ಏರಿಸಿದರು. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದರು. ಬೇರೆ ಬೇರೆ ಬೆಲೆ ಏರಿಕೆ ಆಗುತ್ತಿದೆ. ಅನುದಾನ ಕೊಡಲು ಆಗದೆ ಯುನಿವರ್ಸಿಟಿಗಳನ್ನು ಮುಚ್ಚಿಹಾಕುವ ಕೆಲಸವನ್ನು ರಾಜ್ಯ ಸರಕಾರ ಹೊರಟಿದೆ. ಇದನ್ನು ಖಂಡಿತವಾಗಿ ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಬಿ ವೈ ವಿಜಯೇಂದ್ರ ಅವರು ತಿಳಿಸಿದರು.












Click it and Unblock the Notifications