ಕರ್ನಾಟಕ ಕರಾವಳ ಜಿಲ್ಲೆಗಳಲ್ಲಿ ಭಾರಿ ಮಳೆ: ಜೂ.25ರವರೆಗೆ ಆರೆಂಜ್ ಅಲರ್ಟ್
ಬೆಂಗಳೂರು ಜೂ. 21: ರಾಜ್ಯದ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆ ಅಬ್ಬರಿಸುವ ಮುನ್ಸೂಚನೆ ನೀಡಿದ್ದು, ಹವಾಮಾನ ಇಲಾಖೆ ಜೂ. 25ರವರೆಗೆ ಕರಾವಳಿಯ ಮೂರು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ' ಎಚ್ಚರಿಕೆ ನೀಡಿದೆ.
ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಮಾರುತಗಳು ಹೆಚ್ಚು ಸಕ್ರಿಯವಾಗಿದೆ. ಹೀಗಾಗಿ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಬಹುತೇಕ ಎಲ್ಲ ಕಡೆಗಳಲ್ಲಿ ಜೂ.25ರ ಶನಿವಾರವರೆಗೆ ಜೋರು ಮಳೆ ಬೀಳಲಿದೆ. ಈ ಭಾಗದಲ್ಲಿ ಗಾಳಿ ಪ್ರತಿ ಗಂಟೆಗೆ ಸುಮಾರು 50ಕಿ.ಮೀ. ವೇಗದಲ್ಲಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಮೂರು ಜಿಲ್ಲೆಗಳಿಗೆ ಐದು ದಿನ 'ಆರೆಂಜ್ ಅಲರ್ಟ' ಕೊಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಅಧಿಕಾರಿಗಳು ತಿಳಿಸಿದ್ದಾರೆ.
6 ಜಿಲ್ಲೆಗೆ 'ಯೆಲ್ಲೋ ಅಲರ್ಟ'
ಮುಂದಿನ ಐದು ದಿನ ಕರಾವಳಿ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಅಬ್ಬರ ತುಸು ಕಡಿಮೆ ಎನ್ನಬಹುದು. ಈ ಭಾಗದ ಚಿಕ್ಕಮಗಳೂರು, ಕೋಲಾರ, ಹಾಸನ, ಚಾಮರಾಜನಗರ, ಕೊಡಗು, ಶಿವಮೊಗ್ಗ, ತುಮಕೂರು ಜಿಲ್ಲೆಗಳ ಹಲವೆಡೆ ಧಾರಾಕಾರ ಮಳೆ ನಿರೀಕ್ಷೆ ಹಿನ್ನೆಲೆ ಈ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ' ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಹಗುರುದಿಂದ ಸಾಧಾರಣ ಮಳೆ ಆಗುವ ಲಕ್ಷಣಗಳಿವೆ. ಎಲ್ಲೆಡೆ ಮೋಡ ಮುಸುಕಿದ ತಂಪು ವಾತಾವರಣ ಕಂಡು ಬರಲಿದ್ದು, ತಾಪಮಾನದಲ್ಲಿ ತುಸು ಇಳಿಕೆ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರಡು ದಿನ ಭಾರಿ ಮಳೆ?
ಮುನ್ಸೂಚನೆ ಪ್ರಕಾರ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಜೂ. 24ರಿಂದ ಎರಡು ದಿನ ಜೋರು ಮಳೆ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಬಾಗಲಕೋಟೆ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ವಿವಿಧೆಡೆ ಗುಡುಗು ಸಹಿತ ಉತ್ತಮ ಮಳೆ ಆಗಬಹುದೆಂದು ಅಂದಾಜಿಸಲಾಗಿದೆ. ಈ ಎರಡು ಇಷ್ಟು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ನಿಗದಿತ ಜಿಲ್ಲೆ ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆ ನಿರೀಕ್ಷೆ ಇದೆ.
ಬೆಂಗಳೂರಿಗೆ ಮುನ್ಸೂಚನೆ:
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯದಿಂದ ಹಗುರ ಮಳೆ ಆಗಲಿದ್ದು, ಎಲ್ಲೆಡೆ ಮೋಡ ಮುಸುಕಿದ ವಾತಾವರಣ ಕಂಡು ಬರಲಿದೆ ಎಂದು ತಿಳಿದು ಬಂದಿದೆ.
ಕಲಬುರಗಿಯಲ್ಲಿ ಅಧಿಕ ತಾಪಮಾನ
ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಯಲ್ಲಿ ಕಲಬುರಗಿಯಲ್ಲಿ ಅತ್ಯಧಿಕ 35.2 ಡಿ.ಸೆ. ತಾಪಮಾನ ದಾಖಲಾಗಿದೆ. ಇನ್ನು ರಾಯಚೂರು (34.8ಡಿ.ಸೆ.), ಬೀದರ್ (33ಡಿ.ಸೆ.), ವಿಜಯಪುರ (33.5ಡಿ.ಸೆ.) ಗದಗ, ಗೋಕರ್ಣ ಮತ್ತು ಕಾರವಾರದಲ್ಲಿ (ತಲಾ 31ಡಿ.ಸೆ.) ಗರಿಷ್ಠ ತಾಪಮನಾ ದಾಖಲಿದೆ. ಬೆಂಗಳೂರಿನ ಜಿಕೆವಿಕೆ ಪ್ರದೇಶದಲ್ಲಿ 19.2ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.