ತಣ್ಣಗಾಗದ ಬಿಜೆಪಿ ಬಂಡಾಯ, ಹೈಕಮಾಂಡ್ ಭೇಟಿಗೆ ಸಿದ್ದ ಎಂದ ರೇಣುಕಾಚಾರ್ಯ!
ಬೆಂಗಳೂರು, ಜೂ. 03: ಮಳೆ ನಿಂತರೂ ಮರದ ಹನಿ ನಿಲ್ಲುತ್ತಿಲ್ಲ ಎಂಬಂತೆ ಬಿಜೆಪಿ ಬಂಡಾಯ ಸಭೆಯ ಮುಗಿದರೂ ಬಿಜೆಪಿ ನಾಯಕರ ಹೇಳಿಕೆಗಳು ನಿಲ್ಲುತ್ತಿಲ್ಲ. ಬಂಡಾಯ ಸಬೆ ಮಾಡಿದವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿಯಿದೆ. ಮುಖ್ಯಮಂತ್ರಿ ಬಿ.ಎಸ್.ವೈ. ಜೊತೆಗೆ ಮಾಜಿ ಸಚಿವ ಉಮೇಶ್ ಕತ್ತಿ ಅವರು ಇವತ್ತು ಮಾತುಕತೆ ಮಾಡಿದ್ದಾರೆ.
ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಚರ್ಚೆ ನಡೆಸಿಲ್ಲ ಎಂದು ಬಂಡಾಯ ಸಭೆಯಲ್ಲಿದ್ದವರು ಸ್ಪಷ್ಟಪಡಿಸಿದ್ದಾರೆ. ಆದರೂ ಸಿಎಂ ಯಡಿಯೂರಪ್ಪ ಬೆಂಬಲಿಗರು, ಅತ್ಯಾಪ್ತರ ಹೇಳಿಕೆಗಳು ಮಾತ್ರ ನಿಲ್ಲುತ್ತಿಲ್ಲ. ಯಡಿಯೂರಪ್ಪ ಜೊತೆಗೆ ಪುತ್ರ ವಿಜಯೇಂದ್ರ ಅವರ ಪರವಾಗಿ ಹೇಳಿಕೆ ಕೊಡುತ್ತಲೇ ಇದ್ದಾರೆ. ಹೀಗೆ ನಿರಂತರವಾಗಿ ಒಬ್ಬ ವ್ಯಕ್ತಿಯನ್ನು ಚರ್ಚೆಯ ಕೇಂದ್ರ ಬಿಂದುವನ್ನಾಗಿಸುವುದು ಕೂಡ ಕೂಡ ರಾಜಕೀಯದಲ್ಲಿ ಒಳ್ಳೆಯದಲ್ಲ ಎಂಬುದು ಯಡಿಯೂರಪ್ಪ ಆಪ್ತರಿಗೆ ಗೊತ್ತಿಲ್ಲವಾ? ಅಥವಾ ಗೊತ್ತಿದ್ದೂ ಸುಮ್ಮನೆ ಎಳೆದು ತರುತ್ತಿದ್ದಾರೆಯೆ?

ವಿಜಯೇಂದ್ರ ಹೆಸರು ಪ್ರಸ್ತಾಪ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧದ ಆರೋಪ ನಿರಾಧಾರ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ವಿನಾಕಾರಣ ವಿಜಯೇಂದ್ರ ಅವರ ವಿರುದ್ಧ ಆರೋಪ ಮಾಡಲಾಗುತ್ತಿದೆ. ವಿಜಯೇಂದ್ರ ಆಡಳಿತದಲ್ಲಿ ಮಧ್ಯಪ್ರವೇಶ ಮಾಡಿಲ್ಲ. ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪವನ್ನು ಸಾಬೀತು ಪಡಿಸಲಿ ಎಂದು ಶಾಸಕ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ರೇಣುಕಾಚಾರ್ಯ ಅವರು ಯಾರಿಗೆ ಸವಾಲು ಹಾಕಿದ್ದಾರೆ ಎಂಬುದು ನಿಗೂಢವಾಗಿದೆ. ಯಾಕೆಂದರೆ ಸಭೆ ಸೇರಿದ್ದ ಯಾರೂ ಕೂಡ ವಿಜಯೇಂದ್ರ ಅವರ ಹೆಸರನ್ನು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಸಭೆಯ ಬಳಿಕ ಯಡಿಯೂರಪ್ಪ ಅವರ ಆಪ್ತರೆ ವಿಜಯೇಂದ್ರ ಅವರ ಹೆಸರನ್ನು ಪ್ರಸ್ತಾಪ ಮಾಡುತ್ತಿರುವುದು ಕುತೂಹಲ ಮೂಡಿಸಿದೆ.

ನಿರಾಣಿ ವಿರುದ್ಧ ಷಡ್ಯಂತ್ರ
ಇನ್ನು ಸಭೆಯಲ್ಲಿ ಭಾಗವಹಿಸಿಲ್ಲ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ ಮೇಲೆಯೂ ಅವರ ಹೆಸರನ್ನು ಎಳೆದು ತರಲಾಗುತ್ತಿದೆ. ನಿರಾಣಿ ಅವರನ್ನು ಸಮರ್ಥನೆ ಮಾಡಿಕೊಂಡಿರುವ ರೇಣುಕಾಚಾರ್ಯ ಅವರು, ಮುರುಗೇಶ್ ನಿರಾಣಿ ಆ ಸಭೆಗೆ ಹೋಗಲೇ ಇಲ್ಲ. ನಿರಾಣಿ ವಿರುದ್ಧ ಷಡ್ಯಂತ್ರ ನಡೆಯಿತು. ಯಾರೋ ಒಂದಿಬ್ಬರು ಬಂಡಾಯ ಸಭೆ ಮಾಡಿದರೆ ಅವರೇ ವಿಲನ್ ಆಗ್ತಾರೆ ಎಂದಿದ್ದಾರೆ.

ಯಡಿಯೂರಪ್ಪ ಆನೆ ಥರ
ಆನೆಗೆ ಇರೋ ತೂಕ ಆನೆಗೆ ಇದ್ದೇ ಇರುತ್ತದೆ. ಸಿಎಂ ಯಡಿಯೂರಪ್ಪ ಅವರು ಸಹ ಆನೆ ಇದ್ದ ಹಾಗೆ. ಅವರಿಗೆ ಇರುವ ಮೌಲ್ಯ ಯಾವಾಗಲೂ ಇದ್ದೇ ಇರುತ್ತದೆ. ಯಾರೋ ಕೆಲವರು ಯಡಿಯೂರಪ್ಪ ವಿರುದ್ಧ ಸಭೆ ಮಾಡಿದ್ದಾರೆ. ಅದನ್ನು ದೊಡ್ಡದಾಗಿ ಬಿಂಬಿಸಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಪ್ರಶ್ನಾತೀತ ನಾಯಕರು. ಅವರು ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸ್ತಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ಕೊಟ್ಟಿದ್ದಾರೆ.

ಬಿಎಸ್ವೈ ಪರವಾಗಿ ದೆಹಲಿಗೆ
ಬಂಡಾಯ ಸಭೆಯ ಹಿಂದೆ ಇರುವವರ ಮೇಲೆ ಪಕ್ಷ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಎಚ್ಚರಿಕೆ ಕೊಟ್ಟಿದ್ದಾರೆ. ಈಗಲೇ ನಮ್ಮ ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ವಿರುದ್ಧ ಬಂಡಾಯ ಸಬೆ ನಡೆಸಿದ್ದವರು ದೆಹಲಿಗೆ ಹೋದರೆ, ನಾವೂ ಯಡಿಯೂರಪ್ಪ ಪರವಾಗಿ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡುತ್ತೇವೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಆ ಮೂಲಕ ಬಿಜೆಪಿ ಬಂಡಾಯ ಇನ್ನೂ ತಣ್ಣಗಾಗಿಲ್ಲ ಎಂಬುದನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಸೂಚ್ಯವಾಗಿ ಹೇಳಿದ್ದಾರೆ.

ಸಿದ್ದರಾಮಯ್ಯ ಹಗಲು ಕನಸು
ಸಿದ್ದರಾಮಯ್ಯ ವಿರುದ್ಧವೂ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಹಗಲು ಕನಸು ಕಾಣೂವುದು ಬೇಡ. ಪಕ್ಷದಲ್ಲಿನ ಸಣ್ಣಪುಟ್ಟ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ನಮ್ಮ ಪಕ್ಷ ಸಶಕ್ತವಾಗಿದೆ, ಪಕ್ಷದಲ್ಲಿ ಒಗ್ಗಟ್ಟಿದೆ. ಭಿನ್ನಮತ, ಬಂಡಾಯ ನಮ್ಮಲ್ಲಿ ಇಲ್ಲ ಎಂದೂ ಹೇಳಿದ್ದಾರೆ.
ದೆಹಲಿಗೆ ಹೋಗುತ್ತೇವೆ ಎಂದಿರುವ ರೇಣುಕಾರ್ಯ ಅವರು ಬಂಡಾಯವಿಲ್ಲ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.












Click it and Unblock the Notifications