ಸದನ ಸ್ವಾರಸ್ಯ : ನಾವೂ ಟೈಂಗೆ ಸರಿಯಾಗಿ ಬಂದಿದ್ದೇವೆ ನಮ್ಮ ಹೆಸರು ಏಕಿಲ್ಲ?
ಬೆಳಗಾವಿ, ಡಿಸೆಂಬರ್ 07: ಗುರುವಾರ ಸದನ ಆರಂಭ ಆಗುತ್ತಿದ್ದಂತೆ ಸದನಕ್ಕೆ ಸರಿಯಾದ ಸಮಯಕ್ಕೆ ಬಂದ ಸದಸ್ಯರ ಹೆಸರನ್ನು ಸ್ಪೀಕರ್ ಯು ಟಿ ಖಾದರ್ ಓದಿ ಹೇಳಿದರು. ಆದರೆ ಇದಕ್ಕೆ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸದನಕ್ಕೆ ನಾವೂ ಬೇಗ ಬಂದಿದ್ದೇವೆ, ನಮ್ಮನ್ನೇಕೆ ಗುರುತಿಸಲ್ಲ ? ಎಂದು ಪ್ರಶ್ನಿಸಿದರು.
ನಾವೂ ಟೈಂಗೆ ಸರಿಯಾಗಿ ಬಂದಿದ್ದೇವೆ ನಮ್ಮ ಹೆಸರು ಏಕಿಲ್ಲ? ಎಂದು ಆರಗ ಜ್ಞಾನೇಂದ್ರ ಸೇರಿದಂತೆ ಇತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸ್ಪೀಕರ್ ಖಾದರ್ ಸ್ಪಷ್ಟನೆ ನೀಡಿ, ಕೋರಂ ಭರ್ತಿಗೆ ಮೊದಲ 25 ಸದಸ್ಯರನ್ನು ಅಧಿಕಾರಿಗಳು ಗುರುತಿಸುತ್ತಾರೆ. ಸಿಸಿ ಕ್ಯಾಮೆರಾ ಇದೆ, ಏನಾದರೂ ಸಂಶಯ ಇದ್ದರೆ ನಿಮ್ಮನ್ನು ಕರೆಸಿ ಚೆಕ್ ಮಾಡ್ತೇವೆ. ಅನ್ಯಾಯ ಆದರೆ ನ್ಯಾಯ ಕೊಡ್ತೇವೆ ಎಂದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಪೀಕರ್ ಆಗಬೇಕು ಎಂಬ ನಿಮ್ಮ ಮಾತನ್ನು ನಾನು ಅನುಮೋದಿಸುತ್ತೇನೆ ಎಂದು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಕಾಲೆಳೆದರು. ಗುರುವಾರ ಸದನ ಆರಂಭವಾಗುತ್ತಿದ್ದಂತೆ ಸಮಯಕ್ಕೆ ಸರಿಯಾಗಿ ಬಂದ ಸದಸ್ಯರ ಹೆಸರನ್ನು ಸ್ಪೀಕರ್ ಯು.ಟಿ ಖಾದರ್ ಓದಿ ಹೇಳಿದಾಗ ನಡೆದ ಚರ್ಚೆಯ ಸಂದರ್ಭದಲ್ಲಿ ಸ್ಪೀಕರ್ ಮಾತಿಗೆ ದನಿಗೂಡಿಸಿದ ಸುನೀಲ್ ಕುಮಾರ್ ವಿರೋಧ ಪಕ್ಷದ ನಾಯಕ ಅಶೋಕ್ ಕುರಿತಾಗಿ ಈ ರೀತಿ ಕಾಲೆಳೆದರು.
ಈ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಧ್ಯಪ್ರದೇಶ ಮಾಡಿ, ಕೋರಂ ಆಗುವವರೆಗೆ ಬರುವ ಸದಸ್ಯರನ್ನು ಮಾತ್ರ ಲೆಕ್ಕ ಹಾಕಲಾಗುತ್ತದೆ.ನಂತರ ಬರುವವರನ್ನು ಪರಿಗಣಿಸುತ್ತಿಲ್ಲ. ಕೋರಂ ಬಿಟ್ಟು ತಾವು ಸದನಕ್ಕೆ ಬರುವ ಮೊದಲು ಯಾರೇ ಬಂದರು ಪರಿಗಣಿಸಿ ಎಂದು ಮನವಿ ಮಾಡಿದರು.
ಇದಕ್ಕೆ, ನೀವು ಸ್ಪೀಕರ್ ಆದಾಗ ಇದನ್ನು ಮಾಡಿ ಎಂದು ಅಶೋಕ್ ಗೆ ಖಾದರ್ ಕಿಚಾಯಿಸಿದರು. ಈ ವೇಳೆ ಅಶೋಕ್ ಕಾಲೆಳೆದ ಸುನೀಲ್ ಕುಮಾರ್, ನಿಮ್ಮ ಹಾಗೂ ಅಶೋಕ್ ಗೆಳೆತನ ಚೆನ್ನಾಗಿದೆ ಎಂಬುದು ಇವಾಗ ಬಹಿರಂಗವಾಯಿತು. ಅಶೋಕ್ ಸ್ಪೀಕರ್ ಆಗಬೇಕು ಎಂದು ನೀವು ಹೇಳಿದ್ದನ್ನು ಅನುಮೋದಿಸುತ್ತೇನೆ ಎಂದರು.












Click it and Unblock the Notifications