KRS Dam: ಕೆಆರ್ಎಸ್ ಡ್ಯಾಂ ಮೂಲಕ ನಾಲೆಗಳಿಗೆ ನೀರು ಬಿಡುಗಡೆ!
ಕಾವೇರಿ ನದಿಯ ಪ್ರಮುಖ ಜಲಾಶಯ ಕೆಆರ್ಎಸ್ ಡ್ಯಾಂ ನಂಬಿ ಜೀವನ ನಡೆಸುವ ನಮ್ಮ ಕನ್ನಡ ನಾಡಿನ ಅನ್ನದಾತ ರೈತರಿಗೆ ಇದೀಗ ಖುಷಿ ಸುದ್ದಿ ಸಿಕ್ಕಿದೆ. ಕೆಆರ್ಎಸ್ ಡ್ಯಾಂ ಈಗ 104 ಅಡಿಗೆ ತಲುಪುತ್ತಿದ್ದಂತೆ ನಾಲೆಗಳಿಗೆ ನೀರು ಬಿಟ್ಟು, ಕೃಷಿ ಜಮೀನುಗಳನ್ನು ಹಸಿರಾಗಿಸಲು ಸರ್ಕಾರ ಮುಂದಾಗಿದೆ. ಹಾಗಾದ್ರೆ ಎಷ್ಟು ದಿನಗಳ ಕಾಲ ಕೆಆರ್ಎಸ್ ಡ್ಯಾಂ ಮೂಲಕ ಹೀಗೆ ನಾಲೆಗಳಿಗೆ ನೀರು ಹರಿಯಲಿದೆ? ಯಾವೆಲ್ಲ ನಾಲೆಗಳಿಗೆ ನೀರು ಬಿಟ್ಟಿದ್ದಾರೆ? ಬನ್ನಿ ತಿಳಿಯೋಣ.
ಕೆಆರ್ಎಸ್ ಡ್ಯಾಂನಲ್ಲಿ 49.45 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇದೆ. ಈಗ 26.40 ಟಿಎಂಸಿ ಅಡಿ ನೀರು ಇದೆ. ಕಳೆದ ವರ್ಷ ಈ ಸಮಯಕ್ಕೆ ಕೇವಲ 13 ಟಿಎಂಸಿ ಅಡಿ ನೀರು ಇತ್ತು. 6,146 ಕ್ಯುಸೆಕ್ ನೀರು ಕೆಆರ್ಎಸ್ ಡ್ಯಾಂಗೆ ಹರಿದು ಬರ್ತಿದೆ. ಮುಂದಿನ ಕೆಲ ದಿನಗಳ ಕಾಲ ಇದೇ ರೀತಿ ಭರ್ಜರಿ ಮಳೆ ನಿರೀಕ್ಷೆ ಇದ್ದು ಡ್ಯಾಂಗೆ ಮತ್ತಷ್ಟು ನೀರು ಹರಿದು ಬರುವ ಸಾಧ್ಯತೆ ಇದೆ. 124.80 ಅಡಿ ಎತ್ತರದ ಕೆಆರ್ಎಸ್ ಜಲಾಶಯದಲ್ಲಿ ಈಗ 104.30 ಅಡಿ ನೀರು ಸಂಗ್ರಹ ಆಗಿದೆ. ಹೀಗಾಗಿ KRS ಡ್ಯಾಂನಿಂದ ಇದೀಗ ನಾಲೆಗಳಿಗೆ ನೀರು ಬಿಡಲಾಗುತ್ತಿದೆ. ಹಾಗಾದ್ರೆ ಎಷ್ಟು ಸಾವಿರ ಕ್ಯುಸೆಕ್ ನೀರನ್ನು ನಾಲೆಗಳಿಗೆ ಬಿಡಲಾಗುತ್ತಿದೆ? ಮಾಹಿತಿ ಮುಂದೆ ಇದೆ.

ಮಂಡ್ಯ ಜಿಲ್ಲೆಯಲ್ಲಿ ಸಂಭ್ರಮ!
2024 ರಲ್ಲಿ ಮುಂಗಾರು ಮಳೆ ಶುರುವಾದ ನಂತರ ಇದೇ ಮೊದಲ ಬಾರಿಗೆ ಕೆಆರ್ಎಸ್ ಡ್ಯಾಂ ಗೇಟ್ ತೆಗೆದು ಇದೀಗ ಕಾವೇರಿ ನೀರನ್ನು ಕಾಲುವೆಗಳಿಗೆ ಹರಿಸಲಾಗುತ್ತಿದೆ. ಈಗ ವಿಶ್ವೇಶ್ವರಯ್ಯ ನಾಲೆ ಸೇರಿ ಎಲ್ಲಾ ಪ್ರಮುಖ ಕಾಲುವೆಗಳಿಗೆ ಕೆಆರ್ಎಸ್ ಡ್ಯಾಂ ಮೂಲಕ ನೀರನ್ನು ಬಿಡುಗಡೆ ಮಾಡಲಾಗಿದೆ. ಪ್ರತಿದಿನವು 3000 ಕ್ಯುಸೆಕ್ ನೀರನ್ನ ವಿಶ್ವೇಶ್ವರಯ್ಯ ನಾಲೆಗೆ ಹರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇಂದು ಬೆಳಗ್ಗೆ ಒಂದು ಗೇಟ್ ತೆರೆದು ವಿಶ್ವೇಶ್ವರಯ್ಯ ನಾಲೆಗೆ 500 ಕ್ಯೂಸೆಕ್ಸ್ ನೀರು ಬಿಡಲಾಯಿತು. ಅಲ್ಲಿಂದ ಮುಂದಕ್ಕೆ ನೀರಿನ ಪ್ರಮಾಣ ಹೆಚ್ಚಿಸಲಾಗಿದೆ.
ಕೆರೆಗಳಿಗೆ ಕೂಡ ಹರಿಯಲಿದೆ ನೀರು
ಇದೀಗ ನೀರು ಹರಿಸಿರುವುದು ರೈತರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ನಾಲೆಗಳಿಗೆ ನೀರು ಹರಿಸಿದ ಹಿನ್ನೆಲೆ ಕೆಆರ್ಎಸ್ ಜಲಾಶಯದ ಬಲದಂಡೆ, ಎಡದಂಡೆ & ನಂದಿ ಒಡ್ಡಿನ ನಾಲೆಗಳಾದ ವಿರಿಜಾ, ಚಿಕ್ಕದೇವರಾಯ ಸಾಗರ, ಬಂಗಾರ ದೊಡ್ಡಿ, ರಾಜಪರಮೇಶ್ವರಿ ನಾಲೆಗೆ ಈಗ ಜೀವ ಕಳೆ ಬಂದಿದೆ. ಅಲ್ಲದೆ ರೈತರ ಜಮೀನುಗಳಿಗೆ ಈ ನೀರು ಆಧಾರವಾಗಲಿದ್ದು, 15 ದಿನ ಕಾಲ ನಾಲೆಗೆ ನೀರು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಜುಲೈ 24 ರವರೆಗೆ ನಾಲೆಗಳಿಗೆ ನೀರು ಹರಿಯಲಿದ್ದು, ಇದರ ಜೊತೆ ಮಂಡ್ಯ ಜಿಲ್ಲೆಯಲ್ಲಿರುವ ಕೆರೆಗಳನ್ನ ಕೂಡ ತುಂಬಿಸಲು ನಿರ್ಧರಿಸಲಾಗಿದೆ.
ಯಾವ ಯಾವ ಜಿಲ್ಲೆಗೆ ಮಳೆ?
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿದಂತೆ ಬೆಳಗಾವಿ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 2 ದಿನ ಭಾರಿ ಮಳೆ ಬೀಳಲಿದೆ ಎಂಬ ಮುನ್ಸೂಚನೆಯ ನೀಡಲಾಗಿದೆ. ಹಾಗೇ ಇದರ ಜೊತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ, ದಾವಣಗೆರೆ ಸೇರಿ ಮೈಸೂರು, ಮಂಡ್ಯ, ಚಿತ್ರದುರ್ಗ, ತುಮಕೂರು, ಕಲಬುರಗಿ, ಬೀದರ್, ಕೋಲಾರದಲ್ಲೂ ಮಳೆ ಅಬ್ಬರ ಗ್ಯಾರಂಟಿ ಆಗಿದೆ. ಬೆಂಗಳೂರಲ್ಲಿ, 3-4 ದಿನ ಕಾಲ ಮೋಡ ಕವಿದ ವಾತವರಣ ಇರಲಿದ್ದು. ಜುಲೈ 12 ಹಾಗೂ 13 ರಂದು ಬಿರುಗಾಳಿ ಸಹಿತ ಭಾರಿ ಮಳೆ ಬೀಳುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ ಎಂದು ಮುನ್ಸೂಚನೆ ನೀಡಲಾಗಿದೆ.












Click it and Unblock the Notifications