ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ 9 ವಾಟರ್ ಏರೋಡ್ರೋಮ್
ಬೆಂಗಳೂರು, ಜು 13: ಆಕಾಶದಲ್ಲಿ ಹಕ್ಕಿಗಳಂತೆ ಹಾರಾಟ ನಡೆಸುವ ವಿಮಾನಗಳು ಇನ್ನು ಮುಂದೆ ಕರ್ನಾಟಕದಲ್ಲಿ ನೀರಿನ ಮೇಲೂ ಹಾರಾಟ ನಡೆಸಲಿವೆ. ಅಂದರೆ, ರಾಜ್ಯದ 9ಕಡೆಗಳಲ್ಲಿ ವಾಟರ್ ಏರೋಡ್ರೋಮ್ ನಿರ್ಮಾಣವಾಗಲಿದೆ.
ಎಲ್ಲಾ ವಾಟರ್ ಏರೋಡ್ರೋಮ್ಗಳನ್ನು ವಿಮಾನ ನಿಲ್ದಾಣಗಳು ಎನ್ನಲಾಗುವುದಿಲ್ಲ. ಬದಲಿಗೆ ಸೇನೆ, ವಾಣಿಜ್ಯ ಇಲ್ಲವೇ ಪ್ರವಾಸೋದ್ಯಮ ಬಳಕೆಗೆ ಏರೋಡ್ರೋಮ್ ನಿರ್ಮಿಸಲಾಗಿರುತ್ತದೆ. ಆಯಾ ಅಗತ್ಯತೆಗೆ ತಕ್ಕಂತೆ ಇದು ಬಳಕೆ ಆಗುತ್ತವೆ. ಇದೊಂದು ವಿಮಾನಯಾನ ಸೇವೆಯೂ ಆಗಿದೆ.
ಕರ್ನಾಟಕದಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ಇಂತಹ ವಾಟರ್ ಏರೋಡ್ರೋಮ್ಗಳನ್ನು 9 ಕಡೆಗಳಲ್ಲಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಈ ಮೂಲಕ ಆರ್ಥಿಕ ಪುನಶ್ಚೇತನವು ಆಗುತ್ತದೆ ಎಂದು ವಸತಿ ಹಾಗೂ ಮೂಲ ಸೌಕರ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
ದೇಶದಲ್ಲೇ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬುಧವಾರ 'ಕರ್ನಾಟಕದ ಸಮಗ್ರ ನಾಗರಿಕ ವಿಮಾನಯಾನ ನೀತಿ ರೂಪಣೆ' ಕುರಿತು ರಾಜ್ಯಮಟ್ಟದ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಸಚಿವ ವಿ. ಸೋಮಣ್ಣ, "ರಾಜ್ಯದ ಪ್ರವಾಸಿ ಸ್ಥಳಗಳಾದ 'ಕಾಳಿ ನದಿ, ಬೈಂದೂರು, ಮಲ್ಪೆ, ಮಂಗಳೂರು, ತುಂಗಭದ್ರಾ, ಕೆಆರ್ಎಸ್, ಲಿಂಗನಮಕ್ಕಿ, ಆಲಮಟ್ಟಿ ಮತ್ತು ಹಿಡಕಲ್ ಜಲಾಶಯಗಳಲ್ಲಿ ವಾಟರ್ ಏರೋಡ್ರೋಮ್ ಅಭಿವೃದ್ಧಿಪಡಿಸಲು ಜಾಗ ಗುರುತಿಸಲಾಗಿದೆ" ಎಂದರು.
"ರಾಜ್ಯದ ಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸಮಗ್ರ ನಾಗರಿಕ ವಿಮಾನಯಾನ ನೀತಿ ರೂಪಿಸುವುದು ಅಗತ್ಯ. ಈ ನೀತಿಯು ರಾಜ್ಯದ ವಿವಿಧ ಭಾಗಗಳ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಸಹಕಾರಿ ಆಗಲಿದೆ. ವಾಣಿಜ್ಯ, ಕೈಗಾರಿಕೆ, ಪ್ರವಾಸೋದ್ಯಮ, ತೋಟಗಾರಿಕೆ ಹಾಗೂ ಕೃಷಿ ಉತ್ಪನ್ನಗಳ ರಪ್ತು, ತುರ್ತು ವೈದ್ಯಕೀಯ ಸೇವೆ, ಶೈಕ್ಷಣಿಕ ವಲಯಗಳ ಸಂಪರ್ಕ ಅಭಿವೃದ್ಧಿಗೆ ನಾಗರಿಕ ವಿಮಾನಯಾನ ಸೇವೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಸಮಾಲೋಚನಾ ಕಾರ್ಯಾಗಾರದಲ್ಲಿ ಸಿಗುವ ಸಲಹೆ ಮತ್ತು ಅಭಿಪ್ರಾಯಗಳು ನೀತಿ ರೂಪಿಸಲು ಸಹಕಾರಿಯಾಗಲಿವೆ" ಎಂದು ಸಚಿವರು ವಿವರಿಸಿದರು.
ಹೆಲಿಪೋರ್ಟ್ ನಿರ್ಮಾಣ: ಮಡಿಕೇರಿ, ಚಿಕ್ಕಮಗಳೂರು ಮತ್ತು ಹಂಪಿಯಲ್ಲಿ ಹೆಲಿಪೋರ್ಟ್ಗಳನ್ನು ಸ್ಥಾಪಿಸಲು ಕಾರ್ಯ ಸಾಧ್ಯತೆ ವರದಿ ಪಡೆಯಲಾಗುತ್ತಿದೆ. ಆ ಬಗ್ಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಸೂಚಿಸಲಾಗಿದೆ. ಸರ್ಕಾರವು ಚಿಕ್ಕಮಗಳೂರು, ಹರಿಹರ, ಕುಶಾಲನಗರ ಮತ್ತು ಅಥಣಿಯಲ್ಲಿ ಕಿರು ವಿಮಾನ ನಿಲ್ದಾಣ ಸ್ಥಾಪಿಸುವ ಚಿಂತನೆ ಹೊಂದಿದೆ ಎಂದರು.
"ಮೈಸೂರು ವಿಮಾನ ನಿಲ್ದಾಣದ ರನ್ವೇ ವಿಸ್ತರಣೆ ಮತ್ತು ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಸುಮಾರು 240 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಕ್ರಮಕೈಗೊಳ್ಳಲಾಗುತ್ತಿದೆ" ಎಂದು ಸಚಿವ ಸೋಮಣ್ಣ ತಿಳಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ; "ಬಹು ನಿರೀಕ್ಷಿತ ಶಿವಮೊಗ್ಗ ವಿಮಾನ ನಿಲ್ದಾಣ ಈ ವರ್ಷದ ಅಂತ್ಯದೊಳಗೆ ಲೋಕಾರ್ಪಣೆ ಆಗುವ ಸಾಧ್ಯತೆ ಇದೆ. ಈಗಾಗಲೇ ಅಂತಿಮ ಹಂತದ ಕೆಲಸಗಳು ಪ್ರಗತಿಯಲ್ಲಿವೆ. ಇದಲ್ಲದೇ, ವಿಜಯಪುರ ಮತ್ತು ಹಾಸನ ಜಿಲ್ಲೆಗಳಲ್ಲಿ ವಿಮಾನ ನಿಲ್ಧಾಣಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮುಂಬರುವ ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಮೈಸೂರು, ಹುಬ್ಬಳ್ಳಿ, ವಿದ್ಯಾನಗರ (ತೋರಣಗಲ್), ಬೆಳಗಾವಿ, ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳಿಂದ 'ಉಡಾನ್ 'ಯೋಜನೆಯಡಿ ಕಾರ್ಯಾಚರಣೆ ಮಾಡುತ್ತಿರುವ ವಿಮಾನಯಾನ ಸಂಸ್ಥೆಗಳಿಗೆ ರಾಜ್ಯ ಸರ್ಕಾರದ ಪಾಲಿನ ಶೇ. 20ರಷ್ಟು ವಯಾಬಿಲಿಟಿ ಗ್ಯಾಪ್ ಫಂಡಿಂಗ್ ಭರಿಸಲಾಗುತ್ತಿದೆ. ಜೊತೆಗೆ ವಿಮಾನ ನಿಲ್ದಾಣದ ರಕ್ಷಣೆ, ಭದ್ರತೆ ಮತ್ತು ಅಗ್ನಿಶಾಮಕ ಸೇವಾ ಶುಲ್ಕವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ.