ಸಿರಿಧಾನ್ಯ ಬೆಳೆಯುವ ರೈತರಿಗೆ ರೈತಸಿರಿ ಯೋಜನೆ ಮೂಲಕ ಪ್ರೋತ್ಸಾಹ!
ಧಾರವಾಡ: ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಸುಮಾರು 800 ರಿಂದ 1000 ಹೆಕ್ಟೇರ್ ಪ್ರದೇಶದಲ್ಲಿ ಈಗ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಕೃಷಿ ಇಲಾಖೆಯ ರೈತಸಿರಿ ಯೋಜನೆ ಮೂಲಕ, ಸಿರಿಧಾನ್ಯ ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ್ ತಿಳಿಸಿದರು.
ಇಂದು ಕೃಷಿ ಇಲಾಖೆಯಿಂದ ಸಿರಿಧಾನ್ಯ ಬಳಕೆಯ ಕುರಿತು ಜಾಗೃತಿ ಮೂಡಿಸಲು ಸಿರಿಧಾನ್ಯಗಳ ಜಾಗೃತಿ ವಾಕ್ಥಾನ್ಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಿರಿ ಧಾನ್ಯಗಳು ಅಂದ್ರೆ ರಾಗಿ ಸೇರಿ, ಹಾರಕ, ನವಣೆ, ಸಾಮೆ, ಬರಗು, ಕೊರಲೆ ಊದಲು, ಸಜ್ಜೆ & ಜೋಳದ ಸಮೂಹ. ಇವು ಸುಮಾರು 5 ಸಾವಿರ ವರ್ಷ ಬೇಸಾಯದ ಇತಿಹಾಸ ಹೊಂದಿವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ್ ಹೇಳಿದರು.

ಸಿರಿಧಾನ್ಯಗಳು ಪ್ರಸ್ತುತ ಸನ್ನಿವೇಶದಲ್ಲಿ ಪ್ರಮುಖ ಆಹಾರ ಬೆಳೆ ಆಗುತ್ತಿವೆ. ಅತೀ ಕಡಿಮೆ ಮಳೆ ಇರುವ ಪ್ರದೇಶದಲ್ಲಿ, ಶುಷ್ಕ, ಒಣ ಸ್ಥಿತಿಯಲ್ಲಿ ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲೂ ಸಹ ಬೆಳೆಯ ಬಹುದಾಗಿದೆ ಅಂತ ಡಾ.ಕಿರಣಕುಮಾರ್ ಅವರು ಮಾಹಿತಿ ನೀಡಿದರು. ಈ ವೇಳೆ ಸಿರಿಧಾನ್ಯ ಬೆಳೆಯುವ ರೈತರಿಗೆ ಇರುವ ಲಾಭ ಹಾಗೂ ಸರ್ಕಾರದ ಬೆಂಬಲ ಬೆಲೆ ಬಗ್ಗೆಯು ಅವರು ತಿಳಿಸಿದರು.
800 ರಿಂದ 1,000 ಹೆಕ್ಟೇರ್ ಸಿರಿಧಾನ್ಯ
ರಾಜ್ಯ ಸರ್ಕಾರವು ಸಿರಿಧಾನ್ಯಗಳ ಬೆಳೆಯನ್ನ ಉತ್ತೇಜಿಸುತ್ತಿದ್ದು, ಹಲವಾರು ಕಾರ್ಯಕ್ರಮಗಳ ಮೂಲಕ ಸಿರಿಧಾನ್ಯಗಳ ಕ್ಷೇತ್ರ ಹೆಚ್ಚಿಸುವುದರ ಜೊತೆ ಬೆಳೆದ ಸಿರಿಧಾನ್ಯಕ್ಕೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮತ್ತೆ ಅಂತರಾಷ್ಟ್ರೀಯ ಮೇಳಗಳು ಸೇರಿ ಎಲ್ಲಾ ಹಂತದಲ್ಲೂ ಸಿರಿಧಾನ್ಯ ಮೇಳ ಆಯೋಜಿಸುವ ಮೂಲಕ ರೈತರಿಗೆ, ಉದ್ದಿಮೆದಾರರಿಗೆ & ಗ್ರಾಹಕರಿಗೆ ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ ಎಂದರು. ಧಾರವಾಡ ಜಿಲ್ಲೆಯಲ್ಲಿ 800 ರಿಂದ 1,000 ಹೆಕ್ಟೇರ್ ಕ್ಷೇತ್ರದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ ಎಂದರು.

ರೈತರಿಗೆ ಸಿಗಲಿದೆ ಸೂಕ್ತ ಸಹಾಯಧನ
ಕೃಷಿ ಇಲಾಖೆ ಸಿರಿಧಾನ್ಯ ಬೆಳೆಯುವ ರೈತರನ್ನ ಪ್ರೋತ್ಸಾಹಿಸಲು ಹಲವಾರು ಯೋಜನೆ ಜಾರಿಗೆ ತಂದಿದೆ. ಇವುಗಳಲ್ಲಿ ರೈತ ಸಿರಿ ಪ್ರಮುಖ ಯೋಜನೆ. ಯೋಜನೆ ಅಡಿ ಜಿಲ್ಲೆಯಲ್ಲಿ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ.
ಈ ಬೆಳೆ ಬೆಳೆದ ರೈತರಿಗೆ ಪ್ರತಿ ಹೆಕ್ಟೆರ್ಗೂ 10,000 ರೂಪಾಯಿ ನೇರ ನಗದು ವರ್ಗಾವಣೆ ಅಂದ್ರೆ, ಡಿಬಿಟಿ ಮೂಲಕ ಪ್ರೋತ್ಸಾಹ ಧನ ಗರಿಷ್ಠ 2 ಹೆಕ್ಟೇರ್ಗೆ ಸೀಮಿತವಾಗುವಂತೆ ನೀಡಲಾಗುತ್ತಿದೆ ಎಂದರು. ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ, ಕೃಷಿ ಮಹಾ ವಿದ್ಯಾಲಯದ ಡೀನ್ ಡಾ. ಹೆಚ್.ಬಿ. ಬಬಲಾದ ಸೇರಿದಂತೆ ಮತ್ತಿರರು ಹಾಜರಿದ್ದರು.












Click it and Unblock the Notifications