ವಿನಯ್ ಅಪಹರಣ ಪ್ರಕರಣ : ಬಿಎಸ್ವೈಗೆ ಶೋಭಾ ಪತ್ರ
ಬೆಂಗಳೂರು, ನವೆಂಬರ್ 30 : 'ಸಂತೋಷ್ ನನ್ನ ಪತಿಯ ಹತ್ಯೆಗೆ ಸಂಚು ರೂಪಿಸಿದ್ದಾನೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಶೋಭಾ ವಿನಯ್ ಪತ್ರ ಬರೆದಿದ್ದಾರೆ.
ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕರಾಗಿದ್ದ ವಿನಯ್ ಅಪಹರಣ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಯಡಿಯೂರಪ್ಪ ಆಪ್ತ ಸಹಾಯಕ ಎನ್.ಆರ್.ಸಂತೋಷ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.

ಶೋಭಾ ವಿನಯ್ ಅವರು ನ.29ರಂದು ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. 'ನಿಮ್ಮ ಸಂತೋಷ್ ನಿಯತ್ತು ಇಲ್ಲದ ವ್ಯಕ್ತಿ. ಅವರ ಪರವಾಗಿ ನೀವು ನಿಂತಿದ್ದೀರಿ. ಇದು ಸರಿಯೇ?. ನೆನಪಿರಲಿ ಇವನಿಂದಾಗಿ ನಿಮಗೂ ತೊಂದರೆ ತಪ್ಪಿದ್ದಲ್ಲ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರದಲ್ಲಿ ಏನಿದೆ?
* ನಾನು ನನ್ನ ಪತಿ ಇಬ್ಬರು ಅವಳಿ ಹೆಣ್ಣು ಮಕ್ಕಳ ಜೊತೆ ಬೆಂಗಳೂರಿನಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ. ನನ್ನ ಯಾಜಮಾನರು ಬಿಜೆಪಿಯಲ್ಲಿ ಅನೇಕ ವರ್ಷಗಳಿಂದ ದುಡಿಯುತ್ತಿದ್ದಾರೆ. ಸಂತೋಷ್ ಎಂಬ ಕ್ರಿಮಿನಲ್ ನನ್ನ ಗಂಡನ ಸ್ನೇಹ ಗಳಿಸಿ ಇವರ ಹಿಂದೆ ತಿರುಗುತ್ತಿದ್ದ.
* ಅಲ್ಲದೆ ನಮ್ಮ ಮನೆಗೆ ಬಂದು ತಿಂಡಿ ಮಾಡಿಕೊಡಿ ಎಂದು ಕೇಳಿ ತಿಂಡಿ ತಿನ್ನುತ್ತಿದ್ದ. ನನ್ನ ಪತಿ ಜೊತೆ ಕೆಲಸ ಮಾಡಿ ಈಗ ನನ್ನ ಪತಿ ಹತ್ಯೆಗೆ ಸಂಚು ರೂಪಿಸಿದ್ದಾನೆ. ಇದು ಅತ್ಯಂತ ದುಃಖದ ವಿಚಾರ. ಸಂತೋಷ್ ನಿಯತ್ತು ಇಲ್ಲದ ವ್ಯಕ್ತಿ.
* ಅನ್ನ ತಿಂದ ಮನೆಗೆ ದ್ರೋಹ ಬಗೆದವರ ಪರ ನೀವು ನಿಂತಿದ್ದೀರಿ. ಇದು ಸರಿಯೇ?, ನಿಮಗೂ ಒಂದಲ್ಲ ಒಂದು ದಿನ ಇವರಿಂದ ತೊಂದರೆ ತಪ್ಪಿದ್ದಲ್ಲ. ನೀವು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ನಿಮಗೂ ಮೂವರು ಹೆಣ್ಣು ಮಕ್ಕಳು ಇದ್ದಾರೆ. ನಿಮ್ಮ ಮಕ್ಕಳಿಗೆ ಕಷ್ಟ ಬಂದರೆ ಏನು ಮಾಡುತ್ತೀರಿ?
* ಸಂತೋಷ್ ನನ್ನು ಪೊಲೀಸರು ಹಿಡಿಯಲು ಬಂದಾಗ ನಿಮ್ಮ ಪ್ರಭಾವ ಬಳಸಿ ಆತನನ್ನು ಕಾಪಾಡಿದ್ದೀರಿ. ಇದು ನೀವು ಕಾನೂನಿಗೆ ಕೊಡುವ ಗೌರವವೇ?












Click it and Unblock the Notifications