ಶವ ಇಟ್ಟು ಪ್ರತಿಭಟನೆ ಮಾಡಿ ಸ್ಮಶಾನಕ್ಕೆ ಜಾಗ ಪಡೆದರು
ಚಿಕ್ಕಬಳ್ಳಾಪುರ, ನವೆಂಬರ್ 23 : ಚಿಕ್ಕಬಳ್ಳಾಪುರ ಜಿಲ್ಲೆ ಕಸಬಾ ತಾಲ್ಲೂಕಿನ ಈರೇನಹಳ್ಳಿಯ ಗ್ರಾಮಸ್ಥರು ಬಹಳ ಕಾಲದಿಂದ ಸ್ಮಶಾನದ ಭೂಮಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಲೆ ಇದ್ದರು ಆದರೆ ಆ ಹೋರಾಟಕ್ಕೆ ಮುಕ್ತಿ ದೊರಕಿಸಿದ್ದು ಅದೇ ಊರಿನ ಮೃತ ವ್ಯಕ್ತಿ.
ಹೌದು, ಊರಿನ ಮೃತ ವ್ಯಕ್ತಿಯ ಶವ ಇಟ್ಟು ಪ್ರತಿಭಟನೆ ನಡೆಸಿ ಕೊನೆಗೂ ಊರಿನ ಗ್ರಾಮಸ್ಥರು ಸ್ಮಶಾನಕ್ಕೆ ಜಾಗ ಪಡೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈರೇನಹಳ್ಳಿಯಲ್ಲಿ ಗ್ರಾಮದಲ್ಲಿ ಸೋಮವಾರ (ನವೆಂಬರ್ 20)ದಂದು ಮುನಿಸ್ವಾಮಿ ಎಂಬುವವರು ಮೃತಪಟ್ಟಿದ್ದರು. ಅವರ ಶವ ಹೂಳಲು ಜಾಗವಿಲ್ಲದ ಕಾರಣಕ್ಕೆ ಗ್ರಾಮಸ್ಥರು ಮಂಗಳವಾರ (ನವೆಂಬರ್ 21)ರ ಬೆಳಿಗ್ಗೆಯಿಂದಲೇ ಶವದೊಂದಿಗೆ ಪ್ರತಿಭಟನೆ ಆರಂಭಿಸಿದರು.
ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡು ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳು ಗ್ರಾಮಕ್ಕೆ ಕಂದಾಯ ನಿರೀಕ್ಷಕ ಮತ್ತು ಸರ್ವೇಯರ್ ಅವರನ್ನು ಕಳುಹಿಸಿ ಕೊಟ್ಟರು.
ಈ ಇಬ್ಬರು ಅಧಿಕಾರಿಗಳು ಗ್ರಾಮದ ಹೊರವಲಯದಲ್ಲಿದ್ದ ಸರ್ಕಾರಿ ಜಮೀನಿನಲ್ಲಿ ಒಂದು ಎಕರೆ ಜಾಗವನ್ನು ಸ್ಮಶಾನಕ್ಕಾಗಿ ತಕ್ಷಣ ಗುರುತಿಸಿ ಕೊಟ್ಟರು. ಆ ಜಾಗಕ್ಕೆ ಶವದೊಂದಿಗೆ ಸಾಗಲು ಸರಿಯಾದ ದಾರಿ ಇಲ್ಲದ್ದನ್ನು ಮನಗಂಡು ತಾಲ್ಲೂಕು ಆಡಳಿವೇ ಜೆಸಿಬಿ ತರಿಸಿ ದಾರಿಸಿ ನಿರ್ಮಿಸಿ ಕೊಟ್ಟಿತು. ಬಳಿಕ ಗ್ರಾಮಸ್ಥರು ತಮ್ಮ ಪ್ರತಿಭಟನೆ ಹಿಂಪಡೆದು ಸ್ಮಶಾನಕ್ಕೆ ಗುರುತಿಸಿದ ಜಾಗದಲ್ಲಿ ಮುನಿಸ್ವಾಮಿ ಅವರ ಅಂತ್ಯಸಂಸ್ಕಾರ ಮಾಡಿದರು.