Karnataka weather: ಕರ್ನಾಟಕದ ಹಲವೆಡೆ ಉಷ್ಣಾಂಶದಲ್ಲಿ ಭಾರಿ ಇಳಿಕೆ, ಚಳಿ ಅಧಿಕ
ಬೆಂಗಳೂರು, ನವೆಂಬರ್ 17: ಕರ್ನಾಟಕ ಸಾಕಷ್ಟು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾಗುವ ಮೂಲಕ ಚಳಿ ಪ್ರಮಾಣದಲ್ಲಿ ಏರಿಕೆ ಆಗಿದೆ. ವಾಡಿಕೆ ಕನಿಷ್ಠ ತಾಪಮಾನಕ್ಕಿಂತಲೂ ಶೇ 2-8 ರಷ್ಟು ಕಡಿಮೆ ತಾಪಮಾನ ದಾಖಲಾಗಿದೆ ಎಂದು ಹವಾಮಾನ ತಜ್ಞ ಡಾ. ಪ್ರಸಾದ್ ಮಾಹಿತಿ ನೀಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ವರದಿ ಪ್ರಕಾರ, ಬಾದಾಮಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ 10ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಇದು ಈ ಪ್ರದೇಶದ ನಿರೀಕ್ಷಿತ ವಾಡಿಕೆ ಕನಿಷ್ಠ ತಾಪಮಾನಕ್ಕಿಂತ ಶೇ.8ರಷ್ಟು ಕಡಿಮೆ ಉಷ್ಣಾಂಶವಾಗಿದೆ.
ಅದೇ ರೀತಿ ಗದಗಿನಲ್ಲಿ ಕನಿಷ್ಠ ತಾಪಮಾನ 11.6 ಡಿಗ್ರಿ ಸೆಲ್ಸಿಯಸ್ (ಶೇ.-7ಕಡಿಮೆ) ದಾಖಲಾಗಿದೆ. ಬೆಳಗಾವಿಯಲ್ಲಿ ಕನಿಷ್ಠ 12.2ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ (ಶೇ.-4), ಚಿತ್ರದುರ್ಗ ಕನಿಷ್ಠ 14.5 ಡಿಗ್ರಿ ಸೆಲ್ಸಿಯಸ್ (ಶೇ.- 4), ರಾಯಚೂರು ಕನಿಷ್ಠ 15.4ಡಿಗ್ರಿ ಸೆಲ್ಸಿಯಸ್ ತಾಪಮಾನ (-4), ಹಂಪಿ 14.4ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ (ಶೇ.-4) ದಾಖಲಾಗುವುದ ಮೂಲಕ ಈ ಭಾಗದಲ್ಲಿ ನವೆಂಬರ್ 17ರಂದು ಅತ್ಯಧಿಕ ಚಳಿ ಹಾಗೂ ಮಂಜಿನ ವಾತಾವರಣ ಕಂಡು ಬಂದಿದೆ ಎಂದರು.

ಇದರೊಂದಿಗೆ ಹೊನ್ನಾವರ, ಕಲಬುರಗಿ, ಕಾರವಾರ, ಗೋಕರ್ಣ, ಮೈಸೂರು ಜಿಲ್ಲೆಗಳ ವ್ಯಾಪ್ತಿಯಲ್ಲೂ ವಾಡಿಕೆಗಿಂತಲೂ ಕಡಿಮೆ ತಾಪಮಾನ ದಾಖಲಾಗಿದೆ. ಇನ್ನೂ ಹೊನ್ನಾವರ ಹಾಗೂ ಕಾರವಾರದಲ್ಲಿ ರಾಜ್ಯದ ಗರಿಷ್ಠ ತಾಪಾಮಾನ (34.5ಡಿ.ಸೆ) ದಾಖಲಾಗಿದೆ.
ಮುಂದುವರಿದ ಹವಾಮಾನ ವೈಪರಿತ್ಯ
ಎರಡು ದಿನದ ಹಿಂದೆ ಬಂಗಾಳಕೊಲ್ಲಿ ಸಮುದ್ರದಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತವು ಈಶಾನ್ಯ ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರ ಭಾಗದಲ್ಲಿ ನೆಲೆಗೊಂಡಿದೆ. ಅಲ್ಲಿಂದ ಸಮುದ್ರ ಮಟ್ಟದಲ್ಲಿ 2.6 ಕಿಲೋ ಮೀಟರ್ ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿದೆ. ಇಷ್ಟೆ ಅಲ್ಲದೇ ಅರಬ್ಬಿ ಸಮುದ್ರದಲ್ಲಿ ಎದ್ದಿದ್ದ ಮೇಲ್ಮೈ ಸುಳಿಗಾಳಿ ಪಶ್ಚಿಮ ಭಾಗದತ್ತ ಸಾಗಿದೆ. ಈ ಎಲ್ಲ ಕಾರಣಗಳಿಂದ ರಾಜ್ಯದ ಕೆಲವು ಕಡೆಗಳಲ್ಲಿ ಮಳೆಯ ವಾತಾವರಣ ಉಂಟಾಗಿದೆ.
ಈ ಎಲ್ಲ ಹವಾಮಾನ ಬದಲಾವಣೆಗಳಿಂದ ಉತ್ತರ ಒಳನಾಡು ಮತ್ತು ಕರಾವಳಿಯಲ್ಲಿ ಮುಂದಿನ ನಾಲ್ಕು ದಿನ ಒಣಹವೆ ಕಂಡು ಬರಲಿದೆ. ದಕ್ಷಿಣ ಒಳನಾಡಿಗೆ ಮುಂದಿನ ಮೂರು ದಿನ ಒಣ ಹವೆ ಇರಲಿದೆ. ಈ ಒಣಹವೆ ನಿಗದಿತ ದಿನಗಳ ನಂತರದ ಎರಡು ದಿನ ಆಯಾ ಭಾಗದ ಕೆಲವು ಕಡೆಗಳಲ್ಲಿ ಹಗುರವಾಗಿ ಮಳೆ ಬರಬಹುದು ಎಂದು ಅಂದಾಜಿಸಲಾಗಿದೆ ಎಂದು ಹವಾಮಾನತಜ್ಞರು ಮಾಹಿತಿ ನೀಡಿದರು.












Click it and Unblock the Notifications