Breaking:ಕರ್ನಾಟಕಕ್ಕೆ ಅತ್ಯಧಿಕ ಭಾರಿ ಮಳೆ ನಿರೀಕ್ಷೆ: ಕರಾವಳಿಗೆ 'ರೆಡ್ಅಲರ್ಟ್'
ಬೆಂಗಳೂರು ಆಗಸ್ಟ್ 02: ಕರ್ನಾಟಕ ರಾಜ್ಯದಲ್ಲಿ ಮುಂದಿನ ನಾಲ್ಕು ದಿನದಲ್ಲಿ ಮುಂಗಾರು ಮಳೆ ಅತ್ಯಧಿಕವಾಗಿ ಸುರಿಯುವ ಸಾಧ್ಯತೆ ಇದ್ದು, ಆರು ಜಿಲ್ಲೆಗಳಿಗೆ ರಾಜ್ಯ ಹವಾಮಾನ ಇಲಾಖೆ 'ರೆಡ್ ಅಲರ್ಟ್'ನ ಎಚ್ಚರಿಕೆ ಘೋಷಿಸಿದೆ.
ಕರಾವಳಿ ಹಾಗೂ ಮಲೆನಾಡಿನ ಮೂರು ಜಿಲ್ಲೆಗಳಿಗೆ ಗುಡುಗು, ಗಾಳಿ ಸಹಿ ಅತ್ಯಧಿಕ ಮಳೆ ದಾಖಲಾಗಲಿದೆ. ಈ ಸಂಬಂಧ ಆಗಸ್ಟ್ 3ರಿಂದ ಆಗಸ್ಟ್ 6ರವರೆಗೆ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ನಿರಂತರವಾಗಿ ಬಿಟ್ಟುಬಿಡದೇ ನಾಲ್ಕು ದಿನ ಮಳೆ ಸುರಿಯಲಿದೆ. ಅದೇ ರೀತಿ ಆಗಸ್ಟ್ 3ರಿಂದ 6ರವರೆಗೆ ಮಲೆನಾಡಿನ ಕೊಡಗು ಚಿಕ್ಕಮಗಳೂರು ಜಿಲ್ಲೆಗಳ ಬಹುತೇಕ ಎಲ್ಲ ಕಡೆಗಳಲ್ಲಿ ಮಳೆ ಬೀಳಲಿದೆ. ಶಿವಮೊಗ್ಗದಲ್ಲಿ ಆಗಸ್ಟ್ 6ರಂದು ಮಾತ್ರ ಅತೀ ಮಳೆ ಬರುವ ನಿರೀಕ್ಷೆ ಇದೆ. ಈ ಕಾರಣಗಳಿಂದ ಇಷ್ಟು ಜಿಲ್ಲೆಗಳಿಗೆ ಆಯಾ ದಿನ 'ರೆಡ್ ಅರ್ಲರ್ಟ್' ಘೋಷಿಸಿರುವುದಾಗಿ ರಾಜ್ಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ಅತ್ಯಧಿಕ ಮಳೆ ಸೂಚಿತ ಪ್ರದೇಶಗಳಲ್ಲಿ ನಿತ್ಯ ಸುಮಾರು 20ಸೆಂ.ಮೀ.ಗಿಂತಲೂ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ. ಸಮುದ್ರ ತೀರದಲ್ಲಿ ಈ ವೇಳೆ ಗಾಳಿ ವೇಗ ಪ್ರತಿ ಗಂಟೆಗೆ ಸುಮಾರು 50ಕಿ.ಮೀ ಇರಲಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.
ಉತ್ತರ ಒಳನಾಡಿಗೂ ಭಾರಿ ಮಳೆ ಸಾಧ್ಯತೆ
ಅದೇ ರೀತಿ ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ಬೀದರ್, ಕಲಬುರಗಿ, ಹಾವೇರಿ, ಗದಗ, ರಾಯಚೂರು, ಕೊಪ್ಪಳ, ವಿಜಯಪುರ, ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳ ಅನೇಕ ಕಡೆಗಳಲ್ಲಿ ಭಾರಿಯಿಂದ ಅತೀ ಭಾರಿ ಮಳೆ ಬೀಳುವ ಸಂಭವವಿದೆ. ದಿನ ಬಿಟ್ಟು ದಿನ ಆಗಾಗ ಭಾರಿ ಮಳೆ ಸಂಭವವಿದ್ದು, ಎಲ್ಲ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಇನ್ನು ದಕ್ಷಿಣ ಒಳನಾಡಿನ ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ ಮೈಸೂರು ಒಂದು ದಿನಗಳ ಅಂತರದಲ್ಲಿ ಧಾರಾಕಾರವಾಗಿ ಮಳೆ ಬೀಳಲಿದ್ದು, ಈ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಎಚ್ಚರಿಕೆ ಕೋಡಲಾಗಿದೆ. ಈ ಅವಧಿಯಲ್ಲಿ ಈ ಭಾಗದಲ್ಲಿ ಸುಮಾರು 11.5ಸೆಂ.ಮೀ.ನಿಂದ 20ಸೆಂ.ಮೀ.ವರೆಗೆ ಮಳೆ ಬರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅತ್ಯಧಿಕ ಭಾರಿ ಪ್ರಮಾಣ ಮಳೆ ದಾಖಲಾಗಿದೆ. ಇದರ ಜತೆಗೆ ರಾಜ್ಯದ ಬಹುತೇಕ ಎಲ್ಲ ಕಡೆಗಳಲ್ಲಿ ಉತ್ತಮ ಮಳೆ ಸುರಿದಿದೆ. ಈ ಪೈಕಿ ಶಿರಾಲಿಯಲ್ಲಿ 29ಸೆಂ.ಮೀ. ಮಳೆ ಆಗಿದೆ. ಉಳಿದಂತೆ ಸುಬ್ರಹ್ಮಣ್ಯ 22ಸೆಂ.ಮೀ., ಬಸರಾಳು 15ಸೆಂ.ಮೀ., ಪಾಂಡವಪುರ, ಲಿಂಗನಮಕ್ಕಿಯಲ್ಲಿ ತಲಾ 13ಸೆಂ.ಮೀ, ಭಾಗಮಂಡಲ 12ಸೆಂ.ಮೀ., ಕಾರವಾರ, ನಾಗಮಂಗಲ, ರಾಮನಗರದಲ್ಲಿ ತಲಾ 11ಸೆಂ.ಮೀ.ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.