ಶಿವಮೊಗ್ಗದಲ್ಲಿ ಸಹೋದರರ ಸವಾಲ್; ಕುಮಾರ್ v/s ಮಧು ಬಂಗಾರಪ್ಪ
ಬೆಂಗಳೂರು, ಅಕ್ಟೋಬರ್ 10; "ಅವರು ಇಲ್ಲಿಯವರೆಗೂ ಎಷ್ಟು ಪಕ್ಷಗಳಲ್ಲಿ ಇದ್ದಾರೆ ಎಂಬುದನ್ನು ನೋಡಿಕೊಂಡರೆ ಒಳ್ಳೆಯದು. ಮಧು ಬಂಗಾರಪ್ಪ ಹೇಳಿಕೆಗಳು ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಆಗಿದೆ" ಎಂದು ಸೊರಬದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಸಹೋದರ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲೆಯ ಸೊರಬದ ಸಹೋದರರ ನಡುವೆ ಮತ್ತೆ ಸವಾಲು ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಮಕ್ಕಳು ಮತ್ತೆ ವಾಕ್ಸಮರ ಆರಂಭಿಸಿದ್ದಾರೆ. ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ನಡೆಸಿ ನೀಡಿದ ಹೇಳಿಕೆಗಳಿಗೆ ಶಿವಮೊಗ್ಗದಲ್ಲಿ ಕುಮಾರ್ ಬಂಗಾರಪ್ಪ ಸೋಮವಾರ ಪತ್ರಿಕ್ರಿಯೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ, "ಅವರು (ಮಧು ಬಂಗಾರಪ್ಪ) ಕೆಲವು ಮಾತುಗಳನ್ನು ಹುಂಬತನದಿಂದ ಆಡಿದ್ದಾರೆ ಎಂದು ಅನ್ನಿಸುತ್ತಿದೆ. ಎಷ್ಟು ಪಾರ್ಟಿಗಳನ್ನು ತೋಡೋ ಮಾಡಿಕೊಂಡು ಬಂದಿದ್ದಾರೆ ಎಂಬುದು ಗೊತ್ತಾದರೆ ಜೋಡೋ ಎಂಬುವುದು ಅರ್ಥವಾಗುತ್ತದೆ" ಎಂದು ಟೀಕಿಸಿದರು.

"ಎಲ್ಲದಕ್ಕಿಂತ ಹೆಚ್ಚಾಗಿ ಸಂಸಾರವನ್ನು ಹೇಗೆ ತೋಡೋ ಮಾಡಿದ್ದಾರೆ ಎಂಬುದು ಅರ್ಥ ಮಾಡಿಕೊಂಡಿದ್ದರೆ ಜೋಡಣೆ ಮಾಡುವ ಪದಕ್ಕೆ ಬೆಲೆ ಬರುತ್ತಿತ್ತು, ಅದನ್ನು ಮಾಡಲಿಲ್ಲ" ಎಂದು ಕುಮಾರ್ ಬಂಗಾರಪ್ಪ ಹೇಳಿದರು.
"ಜೆಡಿಎಸ್ನ ಯುವರಾಜ್ಯಾಧ್ಯಕ್ಷರಾದಾಗ ಇವರು ಯಾಕೆ ತೋಡೋ ಮಾಡಿಕೊಂಡು ಬಂದರು, ಒಡೆದುಕೊಂಡು ಬಂದರು ಎಂಬುದನ್ನು ಕುಮಾರಸ್ವಾಮಿ ಅವರು ಈಗಾಗಲೇ ಹೇಳಿದ್ದಾರೆ. ಯಾವ ಸ್ಥಾನಮಾನ ಕೊಟ್ಟಿದ್ದೆವು, ಹೇಗೆ ಚುನಾವಣೆ ಮಾಡಿಸಿದೆವು ಎಂದು ವಿವರಿಸಿದ್ದಾರೆ. ಎಲ್ಲವನ್ನು ಬಹಿರಂಗವಾಗಿ ಹೇಳಿದರೆ ಇವರಿಗೆ ತಡೆದುಕೊಳ್ಳಲು ಆಗುವುದಿಲ್ಲ ಎಂಬುದನ್ನು ಹೇಳಿದ್ದಾರೆ" ಎಂದರು.
ಕುಮಾರ್ ಬಂಗಾರಪ್ಪ ಪತ್ರಿಕಾಗೋಷ್ಠಿ ಮುಖ್ಯಾಂಶಗಳು
* ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಬಿ. ಬಿ. ಶಿವಪ್ಪ ಅವರ ಬಗ್ಗೆ ಮಧು ಬಂಗಾರಪ್ಪ ಹೇಳಿಕೆ ಖಂಡನೀಯ. ಹಿಂದೊಮ್ಮೆ ಅವರು ಬಿಜೆಪಿಯಲ್ಲಿದ್ದರು ಎಂಬುದನ್ನು ಮರೆಯಬಾರದು ಎಂದು ಕುಮಾರ್ ಬಂಗಾರಪ್ಪ ಹೇಳಿದರು.
* ಬಿಜೆಪಿ, ಸಮಾಜವಾದಿ ಪಕ್ಷ, ಜೆಡಿಎಸ್ ಬಳಿಕ ಅವರು ಕಾಂಗ್ರೆಸ್ ಸೇರಿದ್ದಾರೆ. ಜೆಡಿಎಸ್ ಅನ್ನು ಒಡೆದು ಯಾಕೆ ಕಾಂಗ್ರೆಸ್ ಸೇರಿದರು ಎಂದು ಕುಮಾರ್ ಬಂಗಾರಪ್ಪ ಪ್ರಶ್ನಿಸಿದರು.
* ಶೇ 101 ರಷ್ಟು ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷದಲ್ಲಿ ಉಳಿಯುವುದಿಲ್ಲ. ಮುಂದಿನ ಚುನಾವಣೆ ವೇಳಗೆ ಯಾವ ಪಕ್ಷವನ್ನು ಹುಡುಕುತ್ತಾರೋ? ಎಂದು ಕುಮಾರ್ ಬಂಗಾರಪ್ಪ ಹೇಳಿದರು.
ಶನಿವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ, "ಬಿಜೆಪಿಯವರು ಭ್ರಷ್ಟಾಚಾರ, ಪಾಪದ ಹಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅತ್ಯಂತ ಕೀಳು ಮಟ್ಟದ ನೀಚ ಜಾಹೀರಾತು ನೀಡುತ್ತಿದ್ದಾರೆ" ಎಂದು ಆರೋಪಿಸಿದ್ದರು.
"ಭಾರತ್ ಜೋಡೋ ಯಾತ್ರೆಯ ಹಿನ್ನಲೆಯಲ್ಲಿ ಬಿಜೆಪಿಯವರಿಗೆ 15 ಲಕ್ಷ, ಪೆಟ್ರೋಲ್ ಬೆಲೆ ಏರಿಕೆ, ಸಿಲಿಂಡರ್ ದರ ಏರಿಕೆ, ನಿರುದ್ಯೋಗದ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಇದಕ್ಕೆ ಉತ್ತರ ನೀಡಲು ಸಾಧ್ಯವಾಗದೇ ಪತ್ರಿಕೆಗಳಲ್ಲಿ ಭೂತದ ಬಾಯಲ್ಲಿ ಭಗವದ್ಗೀತೆ ಎಂದು ಜಾಹೀರಾತು ನೀಡಿದ್ದಾರೆ" ಎಂದು ದೂರಿದ್ದರು.
"ಬಿಜೆಪಿ ಅಧಿಕಾರಕ್ಕೆ ಬರುವ ಮಟ್ಟಿಗೆ ಬೆಳೆಸಿದಂತಹ ಹಿರಿಯ ನಾಯಕ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಗೋವಿಂದ ಆಚಾರ್ಯ ಈಗ ಎಲ್ಲಿದ್ದಾರೆ?. ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದ ಬಿ. ಬಿ. ಶಿವಪ್ಪ, ಎ. ಕೆ. ಸುಬ್ಬಯ್ಯರನ್ನು ಹೇಗೆ ನಡೆಸಿಕೊಂಡಿದ್ದಾರೆ?" ಎಂದು ಮಧು ಬಂಗಾರಪ್ಪ ಪ್ರಶ್ನಿಸಿದ್ದರು.
"ಯಾರು ತಮ್ಮನ್ನು ಬೆಳೆಸುತ್ತಾರೋ ಅವರನ್ನು ತುಳಿಯುವುದೇ ಬಿಜೆಪಿಯವರ ನೀಚಬುದ್ಧಿ ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದು ಯಾಕೆ?. ಅವರು ಕೆಜೆಪಿ ಕಟ್ಟಿದ್ದು ಯಾಕೆ?" ಎಂದು ಕೇಳಿದ್ದರು.












Click it and Unblock the Notifications