ಯಾರಿಗೂ ಕೇರ್ ಮಾಡಲ್ಲ! ಸದನದಲ್ಲಿ ಹೆಚ್ಡಿಕೆ-ಸಿದ್ದರಾಮಯ್ಯ ವಾಗ್ವಾದ
ಬೆಂಗಳೂರು, ಜುಲೈ 6: ಗುರುವಾರ ಸದನದಲ್ಲಿ ಹಾಲಿ ಸಿಎಂ ಮತ್ತು ಮಾಜಿ ಸಿಎಂಗಳ ನಡುವೆ ಭಾರಿ ವಾಕ್ಸಮರ ನಡೆಯಿತು. ನಾಗಮಂಗಲ ಕೆಎಸ್ಆರ್ ಟಿಸಿ ಬಸ್ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರೂ ನಾಯಕರು ಯಾರಿಗೂ ಕೇರ್ ಮಾಡಲ್ಲ ಎಂದು ವಾಗ್ದಾಳಿ ನಡೆಸಿದರು.
ನಾಗಮಂಗಲ ಬಸ್ ಚಾಲಕನ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಚಲುವರಾಯ ಸ್ವಾಮಿ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ಅವರನ್ನು ವಜಾ ಮಾಡಬೇಕು ಎಂದು ಎಚ್ಡಿ ಕುಮಾರಸ್ವಾಮಿ ಸದನದಲ್ಲಿ ಒತ್ತಾಯಿಸಿದರು. ಈ ವೇಳೆ ಸಚಿವ ಚಲುವರಾಯಸ್ವಾಮಿ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಉತ್ತರ ಕೊಟ್ಟರು.

ಇದಕ್ಕೂ ನನಗೂ ಸಂಬಂಧವಿಲ್ಲ, ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಮೈಸೂರು, ಅಥವಾ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ. ಅವರು ಬೇರೆ ಆಸ್ಪತ್ರೆಗೆ ತೆರಳದಂತೆ ನೀವು ಸೂಚನೆ ನೀಡಿದ್ದೀರಾ ಆತ ಸತ್ತರೆ ರಾಜಕೀಯವಾಗಿ ಬಳಸಿಕೊಳ್ಳುವ ಉದ್ದೇಶ ನಿಮ್ಮದು ಎಂದು ಹೆಚ್ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದರು.
ಶೇಕ್ ಹ್ಯಾಂಡ್ ಕೊಟ್ಟ ಸಿಎಂ ವಿರುದ್ಧ ಕೆಂಡಾಮಂಡಲ
ಹೆಚ್ಡಿ ಕುಮಾರಸ್ವಾಮಿ ಆರೋಪಕ್ಕೆ ಉತ್ತರ ಕೊಟ್ಟ ಚಲುವರಾಯ ಸ್ವಾಮಿಗೆ ಸಿದ್ದರಾಮಯ್ಯ ಶೇಕ್ ಹ್ಯಾಂಡ್ ನೀಡುವ ಮೂಲಕ ಅಭಿನಂದಿಸಿದ್ದು ಕುಮಾರಸ್ವಾಮಿಯನ್ನು ಕೆರಳಿಸಿತು. ಬಹಳ ಚೆನ್ನಾಗಿ ಉತ್ತರ ಕೊಟ್ಟಿದ್ದಾರೆ, ಇದಕ್ಕೆ ಶೇಕ್ ಹ್ಯಾಂಡ್ ಬೇರೆ ಎಂದ ಹೆಚ್ಡಿಕೆ ಇದಕ್ಕೆಲ್ಲಾ ನಾನು ಕೇರ್ ಮಾಡಲ್ಲ, ಇದೆಲ್ಲಾ ಬಹಳ ನೋಡ್ಬಿಟ್ಟಿದಿವಿ, ನಾನು ಇದನ್ನೆಲ್ಲಾ ಗಮನಿಸ್ತಾ ಇರ್ತೇವೆ. ಈ ತರ ರಾಜಕಾರಣ ಶಾಶ್ವತವಲ್ಲ ಎಂದು ಹೇಳಿದರು.
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರೀ ಕುಮಾರಸ್ವಾಮಿಯವರೇ ನಾವು ನಿಮಗೆ ಹೆದರಿಕೊಳ್ತೀವಾ ಎಂದು ತಿರುಗೇಟು ನೀಡಿದರು. ನೀವು ಕೇರ್ ಮಾಡಿಲ್ಲ ಅಂದ್ರೆ ನಾವು ಕೇರ್ ಮಾಡಲ್ಲ, ನೀವು ಕೇರ್ ಮಾಡಿದ್ರೆ ನಾವು ಕೇರ್ ಮಾಡ್ತೀವಿ. ನಿಮ್ ಕಂಡ್ರೆ ಯಾರೂ ಹೆದರಿಕೊಳ್ಳುವವರಿಲ್ಲ ಎಂದರು.
ಕೆಲಸಕ್ ಬಾರದೇ ಇರೋದೆಲ್ಲಾ ಮಾತಾಡ್ತಾವರೆ, ನೀವು ಕೇರ್ ಮಾಡಲ್ಲ ಅಂದರೆ ನಾನು ಅದರ ಅಪ್ಪನಷ್ಟು ಕೇರ್ ಮಾಡಲ್ಲ ಎಂದು ಸಿದ್ದರಾಮಯ್ಯ ಏರುಧ್ವನಿಯಲ್ಲಿ ಗರಂ ಆಗಿ ಹೇಳಿದರು. ಇದಕ್ಕೆ ಉತ್ತರಿಸಿದ ಹೆಚ್ಡಿಕೆ "ನಾವು ಅದೇ ತರ, ನಾವೇನು ನಿಮ್ಮ ಮುಲಾಜಿನಲ್ಲಿ ಬಂದಿಲ್ಲ, ನಾನು ಕೇರ್ ಮಾಡಲ್ಲ" ಎಂದರು. ಇಬ್ಬರ ನಡುವೆಯೂ ವಾಕ್ಸಮರ ನಡೆಯಿತು.












Click it and Unblock the Notifications