ಕರ್ನಾಟಕ ಬಂದ್ : 'ಸಾಹಿತಿಗಳೆಲ್ಲಾ ಮಲಗಿ ಬಿಟ್ಟಿದ್ದಾರೆ'
ಬೆಂಗಳೂರು, ಏ. 17 : 'ಕರ್ನಾಟಕದ ನೆಲ, ಜಲ, ಭಾಷೆಯ ವಿಷಯದಲ್ಲಿ ಬೆಂಬಲ ನೀಡಬೇಕಾದ ರಾಜ್ಯದ ಸಾಹಿತಿಗಳೆಲ್ಲಾ ಮಲಗಿ ಬಿಟ್ಟಿದ್ದಾರೆ' ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಬಂದ್ಗೆ ಪೂರ್ವಭಾವಿಯಾಗಿ ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, 'ಇದು ಕುಡಿಯುವ ನೀರಿಗಾಗಿ ನಡೆಸುತ್ತಿರುವ ಹೋರಾಟ. ಕರ್ನಾಟಕ ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾಟವಲ್ಲ' ಎಂದು ಸ್ಪಷ್ಟನೆ ನೀಡಿದರು. [ಬಂದ್ : ಪೊಲೀಸರ ಬಂದೋಬಸ್ತ್ ಹೇಗಿದೆ?]

'ಶನಿವಾರ ನಡೆಯುವ ಬಂದ್ ಕನ್ನಡಿಗರ ಶಕ್ತಿ ಪ್ರದರ್ಶನವಾಗಬೇಕು ಮತ್ತು ತಮಿಳುನಾಡಿಗೆ ಎಚ್ಚರಿಕೆಯ ಸಂದೇಶವಾಗಬೇಕು. ಕನ್ನಡ ನಾಡಿನ ನೆಲ, ಜಲ, ಭಾಷೆಯ ವಿಚಾರದಲ್ಲಿ ಬೆಂಬಲ ನೀಡಬೇಕಾದ ಸಾಹಿತಿಗಳೆಲ್ಲಾ ಮಲಗಿಬಿಟ್ಟಿದ್ದಾರೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. [ಕರ್ನಾಟಕ ಬಂದ್: ಸಾರ್ವಜನಿಕರಿಗೆ ಗೈಡ್ ಲೈನ್ಸ್]
ಹಿರಿಯ ಪತ್ರಕರ್ತ, ಸಾಹಿತಿ ಪಾಟೀಲ ಪುಟ್ಟಪ್ಪ, ಚಂದ್ರಶೇಖರ್ ಪಾಟೀಲ್, ನಟರಾದ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ನೆನಪಿರಲಿ ಪ್ರೇಮ್ ಕರ್ನಾಟಕ ಬಂದ್ಗೆ ಬೆಂಬಲ ಘೋಷಿಸಿದ್ದಾರೆ ಎಂದು ವಾಟಾಳ್ ನಾಗರಾಜ್ ಹೇಳಿದರು. ಶಾಂತಿಯುತವಾಗಿ ಬಂದ್ ಆಚರಣೆ ಮಾಡಿ ಶೀಘ್ರವೇ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಎಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಲಾಗುತ್ತದೆ ಎಂದರು. [ಬಂದ್ : 500 ಸಂಘಟನೆಗಳ ಬೆಂಬಲ]
ವಿವಿಧ ಕನ್ನಡ ಪರ ಸಂಘಟನೆಗಳ ಸದಸ್ಯರು ಟೌನ್ಹಾಲ್ ಮುಂಭಾಗದಿಂದ ಫ್ರೀಡಂಪಾರ್ಕ್ ತನಕ ಪಾದಯಾತ್ರೆ ನಡೆಸಲಿದ್ದೇವೆ. ನಂತರ ವಿವಿಧ ಸಂಘಟನೆಗಳ ಮುಖಂಡರ ಜೊತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ ಮಾಡಲಾಗುತ್ತದೆ ಎಂದು ವಾಟಾಳ್ ಹೇಳಿದರು.












Click it and Unblock the Notifications