Vande Bharat Express: ಈ ರೈಲಿಗಾಗಿ 'ನಿರ್ವಹಣಾ ಕೇಂದ್ರ' ಸ್ಥಾಪನೆ, ಎಲ್ಲಿ? ಅಂದಾಜು ವೆಚ್ಚದ? ವಿವರ
ಬೆಂಗಳೂರು, ಮಾರ್ಚ್ 11: ಕರ್ನಾಟಕದಲ್ಲಿ ಹೊಸ ವಂದೇ ಭಾರತ್ ರೈಲುಗಳು ಕಾರ್ಯಾಚರಣೆ ಮಾರ್ಚ್ 12 ರಿಂದ ಆರಂಭಗೊಳ್ಳಲಿದೆ. ಈ ವರ್ಷದ ಮಧ್ಯದಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳು ಹಳಿಗೆ ಇಳಿಯಲಿವೆ. ಈ ರೈಲುಗಳಿಗೆ ಅಗತ್ಯವಿರುವ 'ನಿರ್ವಹಣಾ ವಿಶೇಷ ಕೇಂದ್ರ' (ಡಿಪೋ) ಸ್ಥಾಪನೆಗೆ ರೂಪಾಯಿ 270 ಕೋಟಿ ರೂಪಾಯಿ ಮಂಜೂರಾಗಿದೆ.
ಈ ಕುರಿತು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್ ಪುರಿಯಾ ಅವರು ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ. ಈ ವರ್ಷದ ಮಧ್ಯ ಭಾಗದಲ್ಲಿ ಬೆಂಗಳೂರಿನ ಬಿಇಎಂಎಲ್ ತಯಾರಿಸಿರುವ ಸ್ಲೀಪರ್ ವ್ಯವಸ್ಥೆ ಹೊಂದಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಕರ್ನಾಟಕದಲ್ಲಿ ಕಾರ್ಯಾಚರಣೆ ಆರಂಭಿಸಲಿವೆ.

ಈ ಸ್ಲೀಪರ್ ವಂದೇ ಭಾರತ್ ರೈಲುಗಳ ನಿರ್ವಹಣೆಗಾಗಿ ವಿಶೇಷ ಕೇಂದ್ರದ ನಿರ್ಮಿಸುವ ಅಗತ್ಯತೆ ಇದೆ. ಹೀಗಾಗಿ ಬೆಂಗಳೂರಿನ ನಾಗವಾರದ ಸಮೀಪದ ಥಣಿಸಂದ್ರದ ಬಳಿ ಅಂದಾಜು ರೂಪಾಯಿ 270 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಇದಕ್ಕೆ ಅನುದಾನ ಮಂಜೂರಾತಿ ಸಿಕ್ಕಿದೆ. ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಟೆಂಡರ್ ಕಾರ್ಯ ಎಲ್ಲವು ಮುಗಿದ ಬಳಿಕ ಕೇಂದ್ರ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿಯವರೇ ಶಂಕುಸ್ಥಾಪನೆ ನೆರೆವೇರಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಗೋ ಟರ್ಮಿನಲ್-ಗೂಡ್ಶೆಡ್ ಅನಾವರಣ
ನೈರುತ್ಯ ರೈಲ್ವೆ ವಿಭಾಗ ವ್ಯಾಪ್ತಿಯ ದೊಡ್ಡಬಳ್ಳಾಪುರದ ವಡ್ಡರಹಳ್ಳಿ ಬಳಿ ಖಾಸಗಿ ಸ್ಥಳದಲ್ಲಿ ಮಲ್ಟಿ ಮಾಡಲ್ ಕಾರ್ಗೋ ಟರ್ಮಿನಲ್ ಅನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ ಪೆನುಕೊಂಡ ಸಮೀಪ ಅಂದಾಜು ರೂಪಾಯಿ 21 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾದ ಆಟೋಮೊಬೈಲ್ ಗೂಡ್ಶೆಡ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 12ರಂದು ಅನಾವರಣಗೊಳಿಸಲಿದ್ದಾರೆ.
ನೈಋತ್ಯ ರೈಲ್ವೆ ವಿಭಾಗ ವ್ಯಾಪ್ತಿಯಲ್ಲಿ ಈ ಕಾರ್ಗೋ ಟರ್ಮಿನಲ್ ಹಾಗೂ ಗೂಡ್ಶೆಡ್ ಗಳು ಸರಕು ಸಾಗಣೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಕರ್ನಾಟಕಕ್ಕೆ ಮತ್ತೆರಡು 'ವಿಬಿ' ರೈಲು
ಕರ್ನಾಟಕದ ಉದ್ದಗಲಕ್ಕೂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚರಿಸುತ್ತಿದ್ದು, ಇದೀಗ ಮತ್ತೆ ಎರಡು ರೈಲುಗಳು ಆಗಮಿಸುತ್ತಿವೆ. ಮೈಸೂರು-ಚೆನ್ನೈ ಎಕ್ಸ್ಪ್ರೆಸ್ ರೈಲು ಬಹುತೇಕ ತುಂಬುತ್ತಿದೆ. ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಕಾರಣ ಎರಡನೇ ವಂದೇ ಭಾರತ್ ರೈಲನ್ನು ಆರಂಭಿಸಲು ಭಾರತೀಯ ರೈಲ್ವೆ ಇಲಾಖೆ ಜಂಟಿ ತೀರ್ಮಾನಿಸಿದೆ.
ಒಂದು ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮೈಸೂರು ಚೆನ್ನೈ ಮಾರ್ಗದಲ್ಲಿ ಸಂಚರಿಸಿದರೆ, ಮತ್ತೊಂದು ರೈಲು ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕ ಭಾಗವಾದ ಕಲುಬುರಗಿಗೆ ಪ್ರಯಾಣ ಸೇವೆ ನೀಡಲಿವೆ. ಇವೆರಡು ರೈಲುಗಳಿಗೆ ಪ್ರಧಾನಿ ಮೋದಿಯವರು ಮಾಚ್ 12ರಂದು ಗ್ರೀನ್ ಸಿಗ್ನಲ್ ನೀಡಲಿದ್ದಾರೆ ಎಂದರು.
ಭಾರತೀಯ ರೈಲ್ವೆಯ ಮಹತ್ವದ 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಯಡಿ ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿ 40 ಮಳಿಗೆಗಳು ಸಹ ಇದೇ ವೇಳೆ ಉದ್ಘಾಟನೆಗೊಳ್ಳಲಿವೆ. ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ ಮತ್ತು ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ತಲಾ ಒಂದು ಪ್ರಧಾನಮಂತ್ರಿ ಜನೌಷಧಿ ಕೇಂದ್ರ ತೆರೆಯಲಾಗಿದೆ. ಇವುಗಳು ಮಂಗಳವಾರದಿಂದ ಮುಕ್ತಗೊಳ್ಳಲಿವೆ.
ಇನ್ನೂ ಬೆಂಗಳೂರಿನಲ್ಲಿ ವಂದೇ ಭಾರತ್ ಸ್ಲೀಪರ್ ರೈಲಿನ ಡಿಪೋ ನಿರ್ಮಾಣ ಆಗುವುದರಿಂದ ಈ ಭಾಗದಲ್ಲಿಯೇ ರೈಲುಗಳನ್ನು ನಿರ್ವಹಣೆ ಮಾಡಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications