ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸ್ವಾಮೀಜಿ ಹೇಳಿದ ಬುದ್ದಿಮಾತೇನು?
Recommended Video
ಯಾರ ಸಂಧಾನಕ್ಕೂ ಜಗ್ಗದ 'ಏಕಾಂಗಿ' ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ಸದ್ಯ ಸಮ್ಮಿಶ್ರ ಸರಕಾರ ಅಲುಗಾಡಿಸುವ ಕೆಲಸಕ್ಕೆ ಕೈಹಾಕದೇ ಸುಮ್ಮನಾಗಿದ್ದಾರೆ. ಕಾರಣ, ಆಪರೇಶನ್ ಕಮಲಕ್ಕೆ ಮುಂದಾಗಬಾರದು ಎಂದು ವರಿಷ್ಠರು ರಾಜ್ಯ ಬಿಜೆಪಿ ನಾಯಕರುಗಳಿಗೆ ನೀಡಿರುವ ಸೂಚನೆ.
ಲೋಕಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದು ಬೀಗುತ್ತಿದ್ದ ರಾಜ್ಯ ಬಿಜೆಪಿ ನಾಯಕರು ಫಲಿತಾಂಶದ ಮರುದಿನವೇ ಕುಮಾರಸ್ವಾಮಿ ಸರಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ವರಿಷ್ಠರ ಫರ್ಮಾನು ಒಂದೆಡೆ, ಬಿಜೆಪಿ ಮುಖಂಡರ ಆಸೆಗೆ ತಣ್ಣೀರು ಎರಚಿದರೆ, ರಮೇಶ್ ಜಾರಕಿಹೊಳಿ ಕೂಡಾ ಸುಮ್ಮನಾಗುವಂತೆ ಮಾಡಿತ್ತು.
ಅಸಲಿಗೆ, ಜಾರಕಿಹೊಳಿ ಏನು ಬಯಸುತ್ತಿದ್ದಾರೆ ಅವರ ಉದ್ದೇಶ ಏನು ಎನ್ನುವುದು ಅಂದಿನಿಂದ ಇಂದಿನವರೆಗೂ ಗೊಂದಲದಿಂದ ಕೂಡಿದೆ. ಹಾಗಾಗಿ, ಅವರನ್ನು ಮನವೊಲಿಸುವ ಕೆಲಸಕ್ಕೆ ಸದ್ಯ ಯಾರೂ ಮುಂದಾಗುತ್ತಿಲ್ಲ.
ಮೂಲಗಳ ಪ್ರಕಾರ, ರಾಜ್ಯದ ವಾಲ್ಮೀಕಿ ಪೀಠದ ಸ್ವಾಮೀಜಿಯೊಬ್ಬರು ರಮೇಶ್ ಜಾರಕಿಹೊಳಿಯನ್ನು ಅವರ ನಿವಾಸದಲ್ಲಿ ಭೇಟಿಯಾಗಿ, ಬುದ್ದಿವಾದ ಹೇಳಿ ಬಂದಿದ್ದಾರೆ. ಸಚಿವ ಸಂಪುಟ ವಿಸ್ತರಣೆಯ ಸಾಧ್ಯತೆಯ ನಡುವೆ, ಸ್ವಾಮೀಜಿ ಜೊತೆಗಿನ ಜಾರಕಿಹೊಳಿ ಭೇಟಿ ಮಹತ್ವ ಪಡೆದುಕೊಂಡಿದೆ.

ಯಡಿಯೂರಪ್ಪ ಕೂಡಾ ಅಷ್ಟಾಗಿ ರಮೇಶ್ ಜಾರಕಿಹೊಳಿಯನ್ನು ನಂಬುವ ಸ್ಥಿತಿಯಲ್ಲಿಲ್ಲ
ಮೊದಲ ಎರಡು ಆಪರೇಶನ್ ಕಮಲ ವಿಫಲವಾದ ನಂತರ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡಾ ಅಷ್ಟಾಗಿ ರಮೇಶ್ ಜಾರಕಿಹೊಳಿಯನ್ನು ನಂಬುವ ಸ್ಥಿತಿಯಲ್ಲಿಲ್ಲ. ಜೊತೆಗೆ, ಎರಡನೇ ಅವಧಿಗೆ ಮೋದಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಅಮಿತ್ ಶಾ ತೋರಿಸುತ್ತಿದ್ದ ಉತ್ಸಾಹ, ಈಗ ತೋರದೇ ಇರುವುದು, ಸಮ್ಮಿಶ್ರ ಸರಕಾರದ ಭವಿಷ್ಯಕ್ಕೆ ಸದ್ಯಕ್ಕೆ ತೊಂದರೆಯಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ವಾಲ್ಮೀಕಿ ಪೀಠದ ಬ್ರಹ್ಮಾನಂದ ಸ್ವಾಮೀಜಿ
ಈ ನಡುವೆ, ವಾಲ್ಮೀಕಿ ಪೀಠದ ಬ್ರಹ್ಮಾನಂದ ಸ್ವಾಮೀಜಿ, ರಮೇಶ್ ಜಾರಕಿಹೊಳಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿರುವುದರಿಂದ, ಈ ಸಮಯದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಳ್ಳುವಂತೆ, ಸಲಹೆ ಜೊತೆಗೆ ಆಶೀರ್ವಾದ ಮಾಡಿ ಬಂದಿದ್ದಾರೆಂದು ತಿಳಿದು ಬಂದಿದೆ.

ಯಾವುದೇ ಹೆಜ್ಜೆಯಿಟ್ಟರೂ ಧೃಡವಾದ ಮನಸ್ಸಿನಿಂದ ರಾಜಕೀಯ ಹೆಜ್ಜೆಯನ್ನಿಡಿ
ಗೊಂದಲದ ನಿರ್ಧಾರವನ್ನು ತೆಗೆದುಕೊಳ್ಲಬೇಡಿ, ರಾಜಕೀಯವಾಗಿ ಯಾವುದೇ ಹೆಜ್ಜೆಯಿಟ್ಟರೂ ಧೃಡವಾದ ಮನಸ್ಸಿನಿಂದ ನಿರ್ಧರಿಸಿ, ಮುಂದಕ್ಕೆ ಹೋಗಿ. ಸಮುದಾಯದ ದೊಡ್ಡ ನಾಯಕರಾಗಿ ಹೊರಹೊಮ್ಮುವ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬಂದಿದೆ ಎಂದು ಸ್ವಾಮೀಜಿ, ಜಾರಕಿಹೊಳಿಗೆ ಬುದ್ದಿಮಾತನ್ನು ಹೇಳಿದ್ದಾರೆ ಎನ್ನುವ ಮಾಹಿತಿಯಿದೆ.

ನಿಮಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವಂತಾಗಲಿ ಎಂದು ಬ್ರಹ್ಮಾನಂದ ಸ್ವಾಮೀಜಿ
ಸಂಪುಟ ವಿಸ್ತರಣೆಯ ವೇಳೆ ನಿಮಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವಂತಾಗಲಿ ಎಂದು ಬ್ರಹ್ಮಾನಂದ ಸ್ವಾಮೀಜಿ, ರಮೇಶ್ ಜಾರಕಿಹೊಳಿಯನ್ನು ಆಶೀರ್ವದಿಸಿದ್ದಾರೆ. ಜಾರಕಿಹೊಳಿಗೆ ಡಿಸಿಎಂ ಹುದ್ದೆ ಕೊಟ್ಟರೂ, ಅದನ್ನು ನಿಭಾಯಿಸುವ ಶಕ್ತಿ ಅವರಿಗಿದೆ ಎಂದು ಒಂದು ದಿನದ ಹಿಂದೆಯಷ್ಟೇ ಅಥಣಿ ಶಾಸಕ ಮಹೇಶ್ ಕುಮುಠಳ್ಳಿ ಹೇಳಿದ್ದರು.

ರಾಮಲಿಂಗರೆಡ್ಡಿ ತಮ್ಮದೇ ಪಕ್ಷದ ಕೆಲವು ಹಿರಿಯ ಮುಖಂಡರ ವಿರುದ್ದ ಅಪಸ್ವರ
ಹಿರಿಯ ಕಾಂಗ್ರೆಸ್ ಮುಖಂಡ ರಾಮಲಿಂಗರೆಡ್ಡಿ ತಮ್ಮದೇ ಪಕ್ಷದ ಕೆಲವು ಹಿರಿಯ ಮುಖಂಡರ ವಿರುದ್ದ ಅಪಸ್ವರ ಎತ್ತಿದ್ದಾರೆ. ಹೊಸಬರಿಗಾಗಿ ಕೆಲವರು ಪದತ್ಯಾಗ ಮಾಡಲು ಅಪಸ್ವರ ಎತ್ತಿರುವುದರಿಂದ, ಖಾಲಿಯಿರುವ ಹುದ್ದೆ ಭರ್ತಿ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನುವ ಸುದ್ದಿಯ ನಡುವೆ, ಜಾರಕಿಹೊಳಿ ಮುಂದಿನ ನಡೆ, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.












Click it and Unblock the Notifications