ಸೋಲಿನ ಆತ್ಮಾವಲೋಕನ ಮಾಡಿಕೊಂಡ ಕಾಂಗ್ರೆಸ್
ಬೆಂಗಳೂರು, ಜೂ. 28 : "ಕಾಂಗ್ರೆಸ್ ಕಾರ್ಯಕರ್ತರು ವಿಶ್ವಾಸ ಕಳೆದುಕೊಳ್ಳುವ ಅಗತ್ಯವಿಲ್ಲ. ಕೇಂದ್ರದಲ್ಲಿ ಯುಪಿಎ ಸರ್ಕಾರ ಪುನಃ ಅಧಿಕಾರಕ್ಕೆ ಬರಲಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ಕಾಂಗ್ರೆಸ್ ಆತ್ಮಾವಲೋಕನ ಸಭೆ ಉದ್ದೇಶಿಸಿ ಮಾತನಾಡಿದ ಪರಮೇಶ್ವರ್, ಯುಪಿಎ ಮತ್ತೆ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಾರ್ಯಕರ್ತರು ವಿಶ್ವಾಸಕಳೆದುಕೊಳ್ಳುವ ಅಗತ್ಯವಿಲ್ಲ ಎಂದರು. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟಿಸೋಣ ಎಂದು ಕರೆ ನೀಡಿದರು.

ನರೇಂದ್ರ ಮೋದಿ ಅವರು, ಬೆಲೆ ಏರಿಕೆ ನಿಯಂತ್ರಣ ಮಾಡುವುದಾಗಿ ಹೇಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರು. ಆದರೆ, ಸದ್ಯ ಬೆಲೆಗಳನ್ನು ಏರಿಕೆ ಮಾಡುತ್ತಿದ್ದಾರೆ. ಕೇಂದ್ರದ ಎನ್.ಡಿ.ಎ ಸರ್ಕಾರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬೆಲೆ ಏರಿಕೆ ನಿಯಂತ್ರಣ ಮಾಡಿ ಜನ ಸಮಾನ್ಯರ ಹಿತ ಕಾಪಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಪರಮೇಶ್ವರ್ ದೂರಿದರು. [ಕಾಂಗ್ರೆಸ್ ಸೋಲಿಗೆ ಉಸ್ತುವಾರಿ ಸಚಿವರು ಕಾರಣವಂತೆ]
ಯುಪಿಎ ಸರ್ಕಾರ ಕೇಂದ್ರದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿಹಿಡಿಯಲಿದೆ. ಈ ಬಗ್ಗೆ ಯಾರೂ ವಿಶ್ವಾಸ ಕಳೆದುಕೊಳ್ಳುವುದು ಬೇಡ. ಪಕ್ಷದೊಳಗೆ ವೈಮನಸ್ಸು ಉಂಟಾಗದಂತೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದು ಪರಮೇಶ್ವರ್ ಸೂಚನೆ ನೀಡಿದರು. ಮಾಧ್ಯಮಗಳ ಜತೆ ಮಾತನಾಡುವಾಗ ಜಾಗ್ರತೆಯಿಂದಿರಿ. ಆಂತರಿಕ ಭಿನ್ನಾಭಿಪ್ರಾಯ ತರುವಂತೆ ಯಾರೂ ಮಾತನಾಡಬೇಡಿ ಎಂದು ಪರಮೇಶ್ವರ್ ಕಿವಿಮಾತು ಹೇಳಿದರು.
ಪ್ರಚಾರದ ಕೊರತೆಯಿಂದ ಸೋಲು : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಪ್ರಚಾರದ ಕೊರತೆಯೇ ಕಾರಣ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಆದ್ದರಿಂದ ನಮ್ಮ ವಿರುದ್ಧ ಸುಳ್ಳು ಹೇಳಿ ಅಧಿಕಾರ ಪಡೆದರು ಎಂದು ಆರೋಪಿಸಿದರು.
ಕೇಂದ್ರದ ಯುಪಿಎ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿತ್ತು. ಆದರೆ, ಮಾಧ್ಯಮಗಳು ಭ್ರಷ್ಟಾಚಾರ, ಹಗರಣ ಮುಂತಾದ ಉಹಾತ್ಮಕ ವಿಚಾರಗಳಿ ಹೆಚ್ಚು ಪ್ರಚಾರ ನೀಡಿದರು. ಯುಪಿಎ 2ಸಾಧನೆ ಬಗ್ಗೆ ಪ್ರಚಾರ ನೀಡಿಲಿಲ್ಲ ಎಂದು ದೂರಿದರು. ಕರ್ನಾಟಕ ರಾಜ್ಯದ ಮೇಲೆ ದೆಹಲಿಯ ನಾಯಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು, ಕಾರ್ಯಕರ್ತರು ಅದನ್ನು ಹುಸಿ ಮಾಡಬಾರದು ಸಿಂಗ್ ತಿಳಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವರಾದ ಆಸ್ಕರ್ ಫರ್ನಾಂಡೀಸ್, ಕರ್ನಾಟಕದ ಹಲವು ಸಚಿವರು, ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ಭಾಗವಹಿಸಿದ್ದರು.












Click it and Unblock the Notifications