ಬಣಕಲ್ ಬಳಿ ಉಣ್ಣಕ್ಕಿ ಜಾತ್ರೆ ಸಂದರ್ಭದಲ್ಲಿ ಅಲುಗಾಡುವ ಹುತ್ತ
ಬಣಕಲ್ (ಚಿಕ್ಕಮಗಳೂರು), ಅಕ್ಟೋಬರ್ 30: ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಗ್ಗಸಗೋಡು ಗ್ರಾಮದಲ್ಲಿರುವ ಉಣ್ಣಕ್ಕಿ ಹುತ್ತ ಪ್ರತಿ ವರ್ಷ ಮಕ್ಕಳ ಹುಣ್ಣಿಮೆಯ ಹಿಂದಿನ ಗುರುವಾರ ಅಥವಾ ಭಾನುವಾರ ರಾತ್ರಿ ನಡೆಯುವ ಮಂಗಳಾರತಿ ಸಮಯದಲ್ಲಿ ಅಲುಗಾಡುವ ವಿಸ್ಮಯದ ಕಾರಣದಿಂದಾಗಿ ವಿಜ್ಞಾನಲೋಕಕ್ಕೆ ಸವಾಲಾಗಿದೆ.
ಮೂಡಿಗೆರೆ ವಿದ್ಯಾರ್ಥಿನಿ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ
ಮುನ್ನೂರು ವರ್ಷಗಳ ಇತಿಹಾಸವಿರುವ ಈ ಹುತ್ತ 16 ಅಡಿಯಷ್ಟು ಎತ್ತರವಿದ್ದು ನೈಸರ್ಗಿಕವಾಗಿ ಸೃಷ್ಟಿಯಾಗಿರುವ ಹುತ್ತವಾಗಿದೆ. ರೈತರು ಬೆಳೆವ ಬೆಳೆ, ಗೋವುಗಳು, ಇತರೆ ಸಾಕುಪ್ರಾಣಿಗಳು ಮತ್ತು ಮನುಷ್ಯರು ಯಾವುದೇ ಸಮಸ್ಯೆ, ಕಂಟಕಗಳನ್ನು ತಡೆಯುವ ಶಕ್ತಿ ಈ ಹುತ್ತಕ್ಕಿದೆ ಎಂಬ ನಂಬಿಕೆಯಿಂದ ಇಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಗ್ರಾಮದ ಎಲ್ಲ ಮನೆಗಳಿಂದ ಸಂಗ್ರಹಿಸಿದ ಅಕ್ಕಿ ಹಾಗೂ ಹಾಲಿನ ಮಡೆಯನ್ನು ಮಾಡಿ ಅರ್ಪಿಸುವ ಸಂಪ್ರದಾಯವಿದೆ. ಉಪವಾಸ ವ್ರತದಲಿದ್ದ ಗೋಪಾಲಕ ಮಹಾ ಮಂಗಳಾರತಿ ಬಳಿಕ ನೈವೇದ್ಯವನ್ನು ಸೇವಿಸಿದ ನಂತರ ಬೇರೆಯವರಿಗೆ ಹಂಚಲಾಗುತ್ತದೆ. ಭಕ್ತಾದಿಗಳು ತಂದ ಅಕ್ಕಿ ಮತ್ತು ಹಸುವಿನ ಹಾಲನ್ನು ಬೆರೆಸಿ ತಯಾರಿಸಿದ ಹಾಲಕ್ಕಿಯನ್ನು ಭಕ್ತಾದಿಗಳಿಗೆ ವಿತರಿಸಲಾಗುತ್ತದೆ. ಹೀಗೆ ಹಂಚುವ ಹಾಲಕ್ಕಿಯನ್ನು ಕೃಷಿ ಜಮೀನುಗಳಿಗೆ ಹಾಕುವುದು ಮತ್ತು ಪಕ್ಷಿಗಳಿಗೆ ನೀಡುವ ಸಂಪ್ರದಾಯವಿದೆ.
ಮೂಡಿಗೆರೆಯ ಬಾನಹಳ್ಳಿಯಲ್ಲಿ ಅಲುಗಾಡಿದ ಹುತ್ತ, ಭಕ್ತರಲ್ಲಿ ಪುಳಕ
ಹುಣ್ಣಿಮೆ ಜಾತ್ರೆ: ದೀಪಾವಳಿ ನಂತರ ಬರುವ ಮಕ್ಕಳ ಹುಣ್ಣಿಮೆಯ ಹಿಂದಿನ ಗುರುವಾರ ಅಥವಾ ಭಾನುವಾರ ಜರುಗುವ ಉಣ್ಣಕ್ಕಿ ಜಾತ್ರೆಗೆ ರಾಜ್ಯದ ಮೂಲೆಮೂಲೆಗಳಿಂದ ಭಕ್ತಾಧಿಗಳು ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಮಹಾಮಂಗಳಾರತಿ ಸಮಯದಲ್ಲಿ ಹುತ್ತ ಅಲುಗಾಡುವ ವಿಸ್ಮಯಕ್ಕೆ ಸಾಕ್ಷಿಯಾಗುವ ಭಕ್ತಸಮೂಹ ಮಹಾಮಂಗಳಾರತಿಯ ನಂತರ ಪದ್ಧತಿಯಂತೆ ಕರುವಿನ ಪ್ರದಕ್ಷಣೆ ಹಾಕುವ ಸಮಯದಲ್ಲಿ ಪುರಿ ಎರಚುವ ಮೂಲಕ ಹರಕೆ ಒಪ್ಪಿಸುವ ಸಂಪ್ರದಾಯವಿದೆ.
ಮೂರು ಸುತ್ತು ಪ್ರದಕ್ಷಿಣೆ ಹಾಕುವ ಕರುವಿನ ಮೇಲೆ ಎರಚಿದ ಪುರಿಯನ್ನು ಪ್ರಸಾಧವಾಗಿ ಸ್ವೀಕರಿಸಲಾಗುತ್ತದೆ. ನರಹುಣ್ಣು, ಕಜ್ಜಿ, ಕುರ, ಸರ್ಪಸುತ್ತು ಇದ್ದವರು ಇಲ್ಲಿ ಇಷ್ಟಾನುಸಾರ ಹರಕೆ ಹೊತ್ತರೇ ನೆರವೇರುತ್ತದೆ ಎಂಬ ನಂಬಿಕೆ ಇದೆ. ದಟ್ಟಾರಣ್ಯವಿದ್ದ ಹಿಂದೆ ವನ್ಯಮೃಗಗಳು ಕಾಡಿನಿಂದ ಹೊರಬಂದು ಮನುಷ್ಯರ ಮೇಲೆ ದಾಳಿ ಮಾಡದಂತೆ ಈ ಹುತ್ತದ ದೈವಶಕ್ತಿ ತಡೆಯುತ್ತಿತ್ತು ಎನ್ನಲಾಗುತ್ತದೆ.
ನೂರಾರು ವರ್ಷಗಳಿಂದ ಯಾವುದೇ ಸೂರು ಇಲ್ಲದೇ ಮಳೆಗಾಳಿಗೆ ನೆನೆದರೂ ಪ್ರತಿವರ್ಷ ಬೆಳೆಯುತ್ತಲೇ ಇರುವ ಹುತ್ತ ವಿಜ್ಞಾನಕ್ಕೊಂದು ಸವಾಲಾಗಿದೆ. ಸುಮಾರು 16 ಅಡಿಯಷ್ಟು ಎತ್ತರವಿರುವ ನೈಸರ್ಗಿಕವಾಗಿ ಸೃಷಿಯಾಗಿರುವ ಈ ಹುತ್ತ ಮಂಗಳಾರತಿ ಸಮಯದಲ್ಲಿ ಗಾಳಿಗೆ ಎಲೆ ಅಲುಗಾಡುವಂತೇ ಅಲುಗಾಡುವುದು ನೋಡುಗರನ್ನು ಚಕಿತಗೊಳಿಸುತ್ತದೆ. ವಿಸ್ಮಯವನ್ನು ನೋಡಲು ರಾಜ್ಯದ ಮೂಲೆಮೂಲೆಗಳಿಂದ ಭಕ್ತಾಧಿಗಳು ಬರುತ್ತಾರೆ ಎಂದು ಬಗ್ಗಸಗೋಡು ಗ್ರಾಮದ ವಿನಯ್ ಹೇಳಿದರು.
ನವೆಂಬರ್ ತಿಂಗಳ 2 ರಂದು ಗುರುವಾರ ಉಣ್ಣಕ್ಕಿ ಜಾತ್ರೆ ನಡೆಯಲಿದೆ. ಅಂದು ಸಂಜೆ 6 ರಿಂದ 9.30ರ ವರೆಗೆ ವಿಶೇಷ ಪೂಜೆ ನಡೆಯಲಿದ್ದು 8.30 ಕ್ಕೆ ಮಹಾಮಂಗಳಾರತಿ ನಡೆಯಲಿದೆ. ಹುತ್ತ ಅಲುಗಾಡುವ ವಿಸ್ಮಯವನ್ನು ಕಾಣಲು ಭಕ್ತಾಧಿಗಳು ಉತ್ಸುಕರಾಗಿದ್ದಾರೆ. ಈ ಸ್ಥಳವನ್ನು ತಲುಪಬೇಕಾದರೇ ಮೂಡಿಗೆರೆ ತಾಲ್ಲೂಕು ಕೇಂದ್ರದಿಂದ 12 ಕಿ.ಮೀ ಕೊಟ್ಟಿಗೆಹಾರ ಮಾರ್ಗವಾಗಿ ಬಂದು ಸಬ್ಬೇನಹಳ್ಳಿಯಿಂದ ಬಲಕ್ಕೆ 2 ಕಿ. ಮೀ ಸಾಗಬೇಕು.