ದಾವಣಗೆರೆ, ಚಿತ್ರದುರ್ಗದ ಜನರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ
ಬೆಂಗಳೂರು, ಸೆಪ್ಟೆಂಬರ್ 28; ಕೇಂದ್ರ ಸರ್ಕಾರ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಭಾಗದ ಜನರಿಗೆ ಸಿಹಿಸುದ್ದಿ ನೀಡಿದೆ. ಬಹುವರ್ಷದ ಬೇಡಿಕೆಯಾಗಿದ್ದ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ಕೊಟ್ಟಿದೆ.
ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಕುರಿತು ಫೇಸ್ಬುಕ್ ಪೋಸ್ಟ್ ಹಾಕಿದ್ದಾರೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ನಿರ್ಮಾಣಕ್ಕೆ ಚಾಲನೆ ದೊರಕಿದ್ದು, 23 ಕಿ. ಮೀ. ಅಂತರದ ತೋಳಹುಣಸೆ ಹಾಗೂ ಭರಮಸಾಗರ ನಿರ್ಮಾಣ ಕಾರ್ಯಕ್ಕೆ ಕೇಂದ್ರ ರೈಲ್ವೆ ಇಲಾಖೆ ಆದೇಶ ನೀಡಿದೆ ಎಂದು ಹೇಳಿದ್ದಾರೆ.
ದಾವಣಗೆರೆ; ದುಡಾಗೆ ಜಮೀನು ಮಾರುವುದಿಲ್ಲ ಎಂದು ರೈತರ ಪಟ್ಟು
ನೈರುತ್ಯ ರೈಲ್ವೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಕರೆದು ಕಾಮಗಾರಿ ಆರಂಭಿಸಲಿದೆ. ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ರೈಲ್ವೆ ಇಲಾಖೆಯ ಅಡಿಯಲ್ಲಿ ಅನುದಾನ ಬಿಡುಗಡೆ ಆಗಲಿದ್ದು, ಕಾಮಗಾರಿಗೆ ಬೇಕಾದ ಒಟ್ಟು 2274 ಎಕರೆ ಭೂಮಿಯನ್ನು ಸ್ವಾಧೀನಪಡೆಸಿಕೊಂಡು ಕಾಮಗಾರಿ ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕರ್ನಾಟಕಕ್ಕೆ 2 ರಿಂದ 3 ವಂದೇ ಭಾರತ್ ರೈಲಿಗಾಗಿ ಕೇಂದ್ರ ಸಚಿವರ ಬೇಡಿಕೆ
2024ರ ವೇಳೆಗೆ ಈ ರೈಲ್ವೆ ಮಾರ್ಗದ ಕಾಮಗಾರಿ ಪೂರ್ಣಗೊಳ್ಳಲಿದ್ದು, ಇದರಿಂದಾಗಿ ಹುಬ್ಬಳ್ಳಿ-ಬೆಂಗಳೂರು ಪ್ರಯಾಣದಲ್ಲಿ 80 ಕಿ. ಮೀ. ಕಡಿಮೆಯಾಗಲಿದೆ. ಆದ್ದರಿಂದ ಈ ಯೋಜನೆಯು ಈ ಭಾಗದ ಜನರಿಗೆ ಬಹು ಉಪಯೋಗವಾಗಲಿದೆ ಎಂದು ಜೋಶಿ ವಿವರಣೆ ನೀಡಿದ್ದಾರೆ.
Photos: ಹೀಗ್ ಆಗುತ್ತಾ ನಮ್ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ!?
ನಿಲ್ದಾಣಗಳ ವಿವರಗಳು; ಹಲವು ವರ್ಷಗಳ ಬೇಡಿಕೆಯಾದ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗಕ್ಕೆ ಹಲವಾರು ಅಡೆತಡೆಗಳು ಇದ್ದವು. ಎಲ್ಲಾ ಅಡೆತಡೆಗಳನ್ನು ನಿವಾರಿಸಿ ದಾವಣಗೆರೆ ಜಿಲ್ಲೆಯಲ್ಲಿ ಭೂ ಸ್ವಾಧೀನ ನಡೆಸಲಾಗುತ್ತಿದೆ.
ಯೋಜನೆಗಾಗಿ ದಾವಣಗೆರೆ ಜಿಲ್ಲೆಯ 14 ಗ್ರಾಮಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ದಾವಣಗೆರೆ ತಾಲೂಕಿನ ಆನಗೋಡು ಹೋಬಳಿಯ ಬುಳ್ಳಾಪುರ, ಆನಗೋಡು, ನೀರ್ಥಡಿ, ಹೆಬ್ಬಾಳು, ಹುಣಸೇಕಟ್ಟೆ, ರಂಗವ್ವನಹಳ್ಳಿ, ಪಂಚೇನಹಳ್ಳಿ, ಚಿಕ್ಕನಹಳ್ಳಿ, ತೋಳಹುಣಸೆ, ಕರೇ ಲಕ್ಕೇನಹಳ್ಳಿ, ಚಟ್ಟೋಬನಹಳ್ಳಿ, ಕೊಗ್ಗಲೂರು, ಹಾಲುವರ್ತಿ ಗ್ರಾಮಗಳಲ್ಲಿ ರೈಲು ಮಾರ್ಗ ಹಾದು ಹೋಗಲಿದೆ.
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದಲ್ಲಿ ದಾವಣಗೆರೆ, ಆನಗೋಡು, ಭರಮಸಾಗರ, ದೊಡ್ಡಸಿದ್ಧವ್ವನಹಳ್ಳಿ, ಪಾಲವ್ವನಹಳ್ಳಿ, ಜೋಗಿಹಳ್ಳಿ, ಉರಕೆರೆ, ತುಮಕೂರು ನಿಲ್ದಾಣಗಳು ಬರಲಿವೆ.
ಈ ಹೊಸ ನೇರ ರೈಲು ಮಾರ್ಗದಿಂದ ಹಲವಾರು ಅನುಕೂಲಗಳಿವೆ. ಮಾರ್ಗ ಪೂರ್ಣಗೊಂಡ ಬಳಿಕ ಬೆಂಗಳೂರಿನಿಂದ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಗದಗ ಮತ್ತು ವಿಜಯಪುರ ಅಂತರ 65 ಕಿ. ಮೀ. ಕಡಿಮೆಯಾಗುತ್ತದೆ.
ಬೆಂಗಳೂರು-ಚಿತ್ರದುರ್ಗ ನಡುವಿನ ಅಂತರ 110 ಕಿ. ಮೀ. ಕಡಿಮೆಯಾಗುತ್ತದೆ. ಸಿರಾ ಮತ್ತು ಹಿರಿಯೂರು ಹೊಸದಾಗಿ ರೈಲು ಸಂಪರ್ಕವನ್ನು ಪಡೆಯಲಿವೆ. ಬೆಂಗಳೂರು, ಅರಸೀಕೆರೆ, ಶಿವಮೊಗ್ಗ ಮಾರ್ಗದಲ್ಲಿ ರೈಲುಗಳ ಸಂಚಾರ ಶೇ 50ರಷ್ಟು ಕಡಿಮೆಯಾಗುತ್ತದೆ.
ಹರಿಹರ-ಬೀರೂರು-ಅರಸೀಕೆರೆ ಮಾರ್ಗದಲ್ಲಿ ರೈಲುಗಳ ದಟ್ಟಣೆ ಕಡಿಮೆಯಾಗುವುದರಿಂದ ಹೆಚ್ಚಿನ ಸರಕು ಸಾಗಣೆ ರೈಲುಗಳು ಸಂಚಾರ ನಡೆಸಲು ಸಹಾಯಕವಾಗಲಿದೆ. ಬೆಂಗಳೂರು, ಬೆಳಗಾವಿ ಮತ್ತು ವಿಜಯಪುರ ಮಾರ್ಗದಲ್ಲಿ ಸಂಚಾರ ಕನಿಷ್ಠ ಶೇ 35ರಷ್ಟು ಕಡಿಮೆಯಾಗಲಿದೆ.
ಚಿತ್ರದುರ್ಗ ಜಿಲ್ಲೆ ಪ್ರವಾಸೋದ್ಯಮಕ್ಕೆ ಪ್ರಸಿದ್ಧಿ ಪಡೆದಿದೆ. ದೇಶ ವಿದೇಶಗಳ ಪ್ರವಾಸಿಗರು ಕೋಟೆ ನೋಡಲು ಆಗಮಿಸುತ್ತಾರೆ. ಈ ನೇರ ರೈಲು ಮಾರ್ಗದಿಂದ ಬೆಂಗಳೂರು ನಗರದಿಂದ ಚಿತ್ರದುರ್ಗಕ್ಕೆ ಸಂಚಾರ ನಡೆಸಲು ಅನುಕೂಲವಾಗಲಿದೆ.
ನೇರ ರೈಲು ಮಾರ್ಗ ಯೋಜನೆಗೆ ಭೂಸ್ವಾಧೀನವೇ ತೊಡಕಾಗಿತ್ತು. ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಲ್ಲಿದ್ದ ಅಡೆತಡೆಗಳನ್ನು ನಿವಾರಿಸಿ ಯೋಜನೆಗೆ ಚಾಲನೆ ನೀಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ನೇರ ರೈಲು ಮಾರ್ಗದ ಕನಸು ನನಸಾಗುವ ನಿರೀಕ್ಷೆ ಇದೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೂತನ ರೈಲು ಮಾರ್ಗ 201.47 ಕಿ. ಮೀ. ಇದೆ. ಯೋಜನೆ ಘೋಷಣೆಗೊಂಡ ಬಳಿಕವೂ 8 ತಿಂಗಳು ಕಳೆದರೂ ಭೂಸ್ವಾಧೀನದ ನೆಪದಲ್ಲಿ ಯೋಜನೆ ವಿಳಂಬವಾಯಿತು. ಈಗ ಅಂತಿಮವಾಗಿ ಯೋಜನೆಗೆ ಚಾಲನೆ ಸಿಗುತ್ತಿದೆ.