ಚುನಾವಣೆಗೆ ಮುನ್ನ ರಾಯಚೂರಿಗೆ ಐಐಐಟಿ ಮಂಜೂರು
ವಿಧಾನಸಭೆ ಚುನಾವಣೆ ಎದುರಿಸಲು ಸಿದ್ಧವಾಗಿರುವ ಉತ್ತರ ಕರ್ನಾಟಕ ಜನತೆಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಉಡುಗೊರೆ ಸಿಕ್ಕಿದೆ. ಕಳೆದ ವರ್ಷ ಘೋಷಿಸಿದಂತೆ ಕರ್ನಾಟಕಕ್ಕೆ ಎರಡನೇ ಐಐಐಟಿ (Indian Institute of Information Technology) ಸ್ಥಾಪನೆ ಖಚಿತವಾಗಿದೆ.
ದೆಹಲಿಯ ಶಾಸ್ತ್ರ ಭವನದಲ್ಲಿ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು 'ರಾಯಚೂರಿಗೆ ಐಐಐಟಿ ಮಂಜೂರಾತಿ ಪತ್ರ'ವನ್ನು ಸಂಸದ ಮತ್ತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಸದರಾದ ಪ್ರಹ್ಲಾದ್ ಜೋಶಿ, ಕರಡಿ ಸಂಗಣ್ಣ, ಶಿವನಗೌಡ ನಾಯ್ಕ, ಡಾ ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸು ಸಮಿತಿಯ ಮಾಜಿ ಮುಖ್ಯಸ್ಥ ತ್ರಿವಿಕ್ರಮ್ ಜೋಶಿ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಉಪಸ್ಥಿತರಿದ್ದರು.
ರಾಯಚೂರಿಗೆ ಐಐಐಟಿ ಮಂಜೂರು ಮಾಡಿರುವುದಕ್ಕೆ ವಿರೋಧವೂ ಇಲ್ಲ, ಸ್ವಾಗತವೂ ಇಲ್ಲ ಎಂದು ಐಐಟಿ ಮಂಜೂರಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಕಳಸ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಾ ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸಿನಂತೆ ರಾಯಚೂರಿಗೆ ಐಐಟಿ ನೀಡದೇ ವಂಚಿಸಿರುವ ಸರ್ಕಾರಗಳು ಇದೀಗ ಐಐಐಟಿ ನೀಡಿದ್ದು, ಐಐಟಿಯು ಕೇಂದ್ರ ಸರ್ಕಾರದ ಪೂರ್ಣ ಪ್ರಮಾಣದ ಸ್ವಯತ್ತ ಸಂಸ್ಥೆಯಾಗಿತ್ತು ಇದರಿಂದ ಇಲ್ಲಿನ ಜನರಿಗೆ ಏನು ಪ್ರಯೋಜನವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಐಐಐಟಿ ಸ್ಥಾಪನೆಗಾಗಿ 50 ರಿಂದ 100 ಎಕರೆ ವಿಸ್ತೀರ್ಣದ ಜಾಗವನ್ನು ಗುರುತಿಸಿ ಸಂಪೂರ್ಣ ಯೋಜನಾ ವರದಿ ತಯಾರಿಸಿ ಕಾಮಗಾರಿ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬಹುದು ಎಂದು ಘೋಷಣಾ ಪತ್ರದಲ್ಲಿ ಹೇಳಲಾಗಿದೆ.
ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸಂಸದ ಪ್ರತಾಪ್ ಸಿಂಹ, ಸಂಸದೆ ಶೋಭಾ ಕರಂದ್ಲಾಜೆ ಅವರು ಐಐಐಟಿ ಮಂಜೂರಾತಿಗಾಗಿ ಸತತ ಪ್ರಯತ್ನ ನಡೆಸಿದ್ದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಐಐಐಟಿ ಒಂದು ಖಾಸಗಿ ಮತ್ತು ಸಾರ್ವಜನಿಕರ ಸ್ವಯತ್ತ ಸಂಸ್ಥೆಯಾಗಿದ್ದು, ಶೇ.60 ರಷ್ಟು ಖಾಸಗಿ ಹಾಗೂ ಶೇ.40ರಷ್ಟು ಸಾರ್ವಜನಿಕರ (ಪಿಪಿಪಿ-ಪ್ರೈವೇಟ್ ಪಬ್ಲಿಕ್ ಪಾರ್ಟನರ್ಶಿಪ್) ಸಹಭಾಗಿತ್ವದ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಉನ್ನತ ವ್ಯಾಸಂಗ ಮಾಡುವವರಿಗೆ ಉಪಯುಕ್ತವಾಗಿದೆ.












Click it and Unblock the Notifications