ಕೇಂದ್ರದಿಂದ ಕರ್ನಾಟಕಕ್ಕೆ ಬಂಪರ್ ಕೊಡುಗೆ: 3 ಹೊಸ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆ, ಎಲ್ಲೆಲ್ಲಿ?
ಬೆಂಗಳೂರು, ಡಿಸೆಂಬರ್ 09: ಕೇಂದ್ರದ ಎನ್ಡಿಎ ಸರ್ಕಾರ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದೆ. ರಾಜ್ಯದಲ್ಲಿ ಹೊಸದಾಗಿ ಮೂರು ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಗೆ ಅನುಮೋದನೆ ನೀಡಿದೆ. ಅಲ್ಲದೇ ಹಾಲಿ ಇರುವ ಶಿವಮೊಗ್ಗ ಕೇಂದ್ರೀಯ ವಿದ್ಯಾಲಯದಲ್ಲಿ ಎಲ್ಲಾ ತರಗತಿಗಳಲ್ಲಿ ಎರಡು ಹೆಚ್ಚುವರಿ ವಿಭಾಗಗಳನ್ನು ಸೇರಿಸಲು ಸಹ ಒಪ್ಪಿಗೆ ನೀಡಿದೆ. ಇದರಿಂದಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ. ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಕನಸು ಸಾಕಾರಗೊಳ್ಳಲಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ದೇಶಾದ್ಯಂತ ನಾಗರಿಕ/ ರಕ್ಷಣಾ ವಲಯದಡಿಯಲ್ಲಿ 85 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲು ಅನುಮೋದನೆಯನ್ನು ನೀಡಲಾಗಿದೆ.

ಇದೇ ಸಭೆಯಲ್ಲಿ ಕರ್ನಾಟಕದ ಶಿವಮೊಗ್ಗ ಕೇಂದ್ರೀಯ ವಿದ್ಯಾಲಯದಲ್ಲಿ ಕೇಂದ್ರೀಯ ವಿದ್ಯಾಲಯ ಯೋಜನೆಯಡಿಯಲ್ಲಿ (ಕೇಂದ್ರ ವಲಯದ ಯೋಜನೆ) ಎಲ್ಲಾ ತರಗತಿಗಳಲ್ಲಿ ಎರಡು ಹೆಚ್ಚುವರಿ ವಿಭಾಗಗಳನ್ನು ಸೇರಿಸುವ ಮೂಲಕ ಕೇಂದ್ರ ಸರ್ಕಾರಿ ನೌಕರರ ಸಂಖ್ಯೆಯನ್ನು ಹೆಚ್ಚಿಸಲು ಒಪ್ಪಿಗೆ ಕೊಡಲಾಗಿದೆ.
3 ಹೊಸ ಕೇಂದ್ರೀಯ ವಿದ್ಯಾಲಯ: ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಮೂರು ಹೊಸ ಕೇಂದ್ರೀಯ ವಿದ್ಯಾಲಯಗಳು ಮುದ್ನಾಳ್ ಗ್ರಾಮ, ಯಾದಗಿರಿ ಜಿಲ್ಲೆ, ಕುಂಚಿಗನಾಳ್ ಗ್ರಾಮ, ಚಿತ್ರದುರ್ಗ ಜಿಲ್ಲೆ ಮತ್ತು ಎಳರಗಿ (ಡಿ) ಗ್ರಾಮ, ಸಿಂಧನೂರು ತಾಲ್ಲೂಕು, ರಾಯಚೂರು ಜಿಲ್ಲೆ ಇಲ್ಲಿ ನಿರ್ಮಾಣವಾಗಲಿದೆ.
ಕೇಂದ್ರ ಸರ್ಕಾರದ ಈ ತೀರ್ಮಾನದಿಂದ 2025-26ರಿಂದ ಎಂಟು ವರ್ಷಗಳ ಅವಧಿಯಲ್ಲಿ 85 ಹೊಸ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆ ಮತ್ತು ಅಸ್ತಿತ್ವದಲ್ಲಿರುವ ಒಂದು ಕೇಂದ್ರೀಯ ವಿದ್ಯಾಲಯದ ವಿಸ್ತರಣೆಗೆ ಒಟ್ಟು ಅಂದಾಜು 5872.08 ಕೋಟಿ ರೂ. ಅನುದಾನ ಬೇಕು ಎಂದು ಅಂದಾಜಿಸಲಾಗಿದೆ. ಇದರಲ್ಲಿ 2862.71 ಕೋಟಿ ರೂ.ಗಳ ಬಂಡವಾಳ ವೆಚ್ಚ, 3009.37 ಕೋಟಿ ರೂ.ಗಳ ನಿರ್ವಹಣಾ ವೆಚ್ಚ ಸೇರಿದೆ.
ಮಾಸ್ಕೋ, ಕಠ್ಮಂಡು ಮತ್ತು ಟೆಹ್ರಾನ್ನಲ್ಲಿರುವ ಮೂರು ಸಾಗರೋತ್ತರ ಕೇಂದ್ರೀಯ ವಿದ್ಯಾಲಯಗಳು ಸೇರಿದಂತೆ ಇಲ್ಲಿಯ ತನಕ 1,256 ಕ್ರಿಯಾತ್ಮಕ ಕೇಂದ್ರೀಯ ವಿದ್ಯಾಲಯಗಳಿವೆ ಮತ್ತು ಅಂದಾಜು 13.56 ಲಕ್ಷ ವಿದ್ಯಾರ್ಥಿಗಳು ಈ ಕೇಂದ್ರೀಯ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಈ ಕೇಂದ್ರೀಯ ವಿದ್ಯಾಲಯಗಳು ವರ್ಗಾವಣೆ ಮಾಡಬಹುದಾದ ಕೇಂದ್ರ ಸರ್ಕಾರ/ ರಕ್ಷಣಾ ಉದ್ಯೋಗಿಗಳ ಮಕ್ಕಳಿಗೆ ದೇಶಾದ್ಯಂತ ಏಕರೂಪದ ಗುಣಮಟ್ಟದ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುತ್ತದೆ.
ಕೇಂದ್ರೀಯ ವಿದ್ಯಾಲಯಗಳನ್ನು ಪ್ರಾಥಮಿಕವಾಗಿ ರಕ್ಷಣಾ ಮತ್ತು ಅರೆಸೇನಾ ಪಡೆಗಳು ಸೇರಿದಂತೆ ವರ್ಗಾವಣೆ ಮಾಡಬಹುದಾದ ಮತ್ತು ವರ್ಗಾವಣೆ ಮಾಡಲಾಗದ ಕೇಂದ್ರ ಸರ್ಕಾರಿ ನೌಕರರ ಮಕ್ಕಳು ಮತ್ತು ದೇಶದ ದೂರದ ಮತ್ತು ಹಿಂದುಳಿದ ಸ್ಥಳಗಳಲ್ಲಿ ವಾಸಿಸುವ ದುರ್ಬಲ ಜನಸಂಖ್ಯೆಯ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ತೆರೆಯಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ ಇಲ್ಲಿನ ಶಿಕ್ಷಣ ವ್ಯವಸ್ಥೆ ಇದೆ.
ಗುಣಮಟ್ಟದ ಬೋಧನೆ, ನವೀನ ಕಲಿಕಾ ವಿಧಾನ ಮತ್ತು ನವೀಕೃತ ಮೂಲಸೌಕರ್ಯಗಳು ಕೇಂದ್ರೀಯ ವಿದ್ಯಾಲಯಗಳ ವಿಶೇಷತೆ. ಆದ್ದರಿಂದ ಇದಕ್ಕೆ ಹೆಚ್ಚು ಬೇಡಿಕೆ ಇದೆ. ಪ್ರತಿ ವರ್ಷ ಈ ವಿದ್ಯಾಲಯಗಳಲ್ಲಿ 1ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ನಿರಂತರ ಹೆಚ್ಚಳ ಕಂಡುಬರುತ್ತಿದೆ.












Click it and Unblock the Notifications