ಮಾತಿಗೆ ಬದ್ದರಾಗದ ಸಮ್ಮಿಶ್ರ ಸರಕಾರದ 'ಜೋಡೆತ್ತು'ಗಳು ಬೇಲಿ ಹಾರಿದಾಗ!
Recommended Video
ಸಾರ್ವಜನಿಕ ಬದುಕಿನಲ್ಲಿರುವ ರಾಜಕಾರಣಿಗಳಿಗೆ ತಮ್ಮ ನಾಲಿಗೆಯ ಮೇಲೆ ಹಿಡಿತವಿಲ್ಲದಿದ್ದರೆ, ನೀಡುವ ಹೇಳಿಕೆಗೆ ಬದ್ದರಾಗದಿದ್ದರೆ, ಎಂತಹಾ ನಗೆಪಾಟಲಿಗೆ ಗುರಿಯಾಗುತ್ತಾರೆ ಎನ್ನುವುದಕ್ಕೆ ಸದ್ಯದ ಕರ್ನಾಟಕ ರಾಜಕೀಯದ ವಿದ್ಯಮಾನಗಳೇ ಸಾಕ್ಷಿ.
ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಏನಾಗುತ್ತಿದೆ ಎಂದು ಬಹುಷಃ ಆ ಪಕ್ಷಗಳ ಹಿರಿಯ ಮುಖಂಡರೇ ಹಿಡಿತ ಕಳೆದುಕೊಂಡಿದ್ದಾರೋ ಏನೋ. ಯಾವ ಕ್ಷಣದಲ್ಲಿ ಏನಾಗುತ್ತದೆ, ಪಕ್ಕದಲ್ಲೇ ಇದ್ದವನು, ಮುಂಬೈಗೆ ಹಾರುತ್ತಾನಾ ಎನ್ನುವ ಭಯ.
ತೂಗೊಯ್ಯಾಲೆಯಲ್ಲಿರುವ ಸಮ್ಮಿಶ್ರ ಸರಕಾರದ ಭವಿಷ್ಯಕ್ಕೆ ಮಂಗಳವಾರ (ಜುಲೈ 9) ನಿರ್ಣಾಯಕ ದಿನ. ಒಂದು ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರ, ಇನ್ನೊಂದು ರಾಜ್ಯಪಾಲರು ಮಧ್ಯಪ್ರವೇಶಿಸುತ್ತಾರಾ ಎನ್ನುವ ಕುತೂಹಲ.
ಸಮ್ಮಿಶ್ರ ಸರಕಾರಕ್ಕೆ ಸರಿಯಾಗಿ ಕೈಕೊಟ್ಟವರು ಇಬ್ಬರು ಪಕ್ಷೇತರ ಶಾಸಕರು. ತಮ್ಮನ್ನು ತಾವು ಜೋಡೆತ್ತುಗಳು ಎಂದು ಕರೆದುಕೊಂಡಿದ್ದ, ಇಬ್ಬರೂ, ತಮ್ಮ ಮಾಲೀಕನಿಗೆ (ಸಮ್ಮಿಶ್ರ ಸರಕಾರ) ನಿಯತ್ತು ತೋರಿಸದೇ ಬೇಲಿ ಹಾರಿದ್ದಾರೆ.

ಕನಿಷ್ಠ ಐದು ಬಾರಿ ಸರಕಾರ ಉರುಳಿಸುವ ಪ್ರಯತ್ನಗಳು ನಡೆದಿದ್ದವು
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಕನಿಷ್ಠ ಐದು ಬಾರಿ ಸರಕಾರ ಉರುಳಿಸುವ ಪ್ರಯತ್ನಗಳು ನಡೆದಿದ್ದವು. ಎಲ್ಲಾ ಬಾರಿಯೂ ಅತೃಪ್ತರ ಪಟ್ಟಿಯಲ್ಲಿ ಇಬ್ಬರು ಪಕ್ಷೇತರ ಶಾಸಕರಾದ ನಾಗೇಶ್ ಮತ್ತು ಶಂಕರ್ ಇದ್ದರು. ಪ್ರತೀಬಾರಿ ಹೇಗೋ ಡಿ ಕೆ ಶಿವಕುಮಾರ್ ಇವರನ್ನು ಸಮಾಧಾನ ಪಡಿಸಿ ಮನವೊಲಿಸಿದ್ದರು. ಆದರೆ, ಇಬ್ಬರೂ ಮತ್ತೆ ಮಗುದೊಮ್ಮೆ ಕೈಕೊಟ್ಟಿದ್ದಾರೆ.

ನಾಗೇಶ್ ಮತ್ತು ಶಂಕರ್ ಇಬ್ಬರಿಗೂ ಸಚಿವಸ್ಥಾನ ನೀಡಲಾಗಿತ್ತು
ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆಯಲ್ಲಿ ನಾಗೇಶ್ ಮತ್ತು ಶಂಕರ್ ಇಬ್ಬರಿಗೂ ಸಚಿವಸ್ಥಾನ ನೀಡಲಾಗಿತ್ತು. ಸರಕಾರದಲ್ಲಿ ಭಿನ್ನಮತ ಭುಗಿಲೇಳಲು ಇದೂ ಒಂದು ಕಾರಣವಾಗಿತ್ತು. ಪ್ರಮಾಣವಚನ ಸ್ವೀಕರಿಸಿದ ನಂತರ, ನಾವು ಸಮ್ಮಿಶ್ರ ಸರಕಾರದ ಜೋಡೆತ್ತುಗಳು ಎಂದು ಹೇಳಿದ್ದ ಇಬ್ಬರೂ, ಈಗ ಬೇಲಿ ಹಾರಿ ಮುಂಬೈಗೆ ಹೋಗಿದ್ದಾರೆ.

ಮುಳಬಾಗಿಲು ಶಾಸಕ ಎಚ್ ನಾಗೇಶ್ ಮತ್ತು ರಾಣೆಬೆನ್ನೂರು ಶಾಸಕ ಆರ್ ಶಂಕರ್
ಮುಳಬಾಗಿಲು ಶಾಸಕ ಎಚ್ ನಾಗೇಶ್ ಮತ್ತು ರಾಣೆಬೆನ್ನೂರು ಶಾಸಕ ಆರ್ ಶಂಕರ್ ಇಬ್ಬರೂ ನಮ್ಮ ನಿಷ್ಠೆ ಬಿಜೆಪಿಗೆ ಎಂದು ರಾಜೀನಾಮೆ ನೀಡಿ ಕಮಲ ಪಾಳಯ ಸೇರಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ರಾಜ್ಯಪಾಲರಿಗೆ ನಾಗೇಶ್ ಪತ್ರ ಸಲ್ಲಿಸಿ, ಮುಂಬೈಗೆ ತೆರಳಿದರು. ಪರಮೇಶ್ವರ್ ಮನೆಯಲ್ಲಿ ಉಪಹಾರಕೂಟದಲ್ಲಿ ಭಾಗವಹಿಸಿದ್ದ ಆರ್ ಶಂಕರ್, ಸಂಜೆಯ ಹೊತ್ತಿಗೆ ರಾಜೀನಾಮೆ ನೀಡಿ, ನನ್ನ ಬೆಂಬಲ ಬಿಜೆಪಿಗೆ ಎಂದು ಮುಂಬೈಗೆ ಹಾರಿದರು. ಅಲ್ಲಿಗೆ, ಬ್ರೇಕ್ ಫಾಸ್ಟ್ ದುಡ್ಡೂ ವೇಸ್ಟ್!

ಶಾಸಕರಾದ ದಿನದಿಂದ ಚಂಚಲ ಮನೋಭಾವದಲ್ಲೇ ಇರುವ ಆರ್ ಶಂಕರ್
ಶಾಸಕರಾದ ದಿನದಿಂದ ಚಂಚಲ ಮನೋಭಾವದಲ್ಲೇ ಇರುವ ಆರ್ ಶಂಕರ್, ನಾನೊಬ್ಬ ಡಮ್ಮಿ ಸಚಿವ. ಇಲ್ಲಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡುವವರೇ ಬೇರೆ, ಸುಮ್ಮನೆ ಕಾಟಾಚಾರಕ್ಕೆ ಮಂತ್ರಿಯಾಗಿದ್ದೇನೆ. ದೂರದೃಷ್ಟಿಯಿಂದ ಬಿಜೆಪಿಗೆ ಸೇರುತ್ತಿದ್ದೇನೆ ಎಂದಿದ್ದಾರೆ. ಮೊದಲೇ ಶಾಸಕರ ರಾಜೀನಾಮೆಯಿಂದ ಹೈರಾಣವಾಗಿರುವ ಸಮ್ಮಿಶ್ರ ಸರಕಾರಕ್ಕೆ ಇಬ್ಬರು ಈ ಪಕ್ಷೇತರರ ಶಾಸಕರ ರಾಜೀನಾಮೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ನಾಗೇಶ್ ಪಕ್ಕಾ ಡಿ ಕೆ ಶಿವಕುಮಾರ್ ಶಿಷ್ಯ ಎಂದೇ ಗುರುತಿಸಿಕೊಂಡವರು
ಇಬ್ಬರು ಈ ಪಕ್ಷೇತರರ ಶಾಸಕರಲ್ಲಿ ನಾಗೇಶ್ ಪಕ್ಕಾ ಡಿ ಕೆ ಶಿವಕುಮಾರ್ ಶಿಷ್ಯ ಎಂದೇ ಗುರುತಿಸಿಕೊಂಡವರು. ಈ ಹಿಂದೆ ಅಸಮಾಧಾನಗೊಂಡಿದ್ದಾಗ ಅವರನ್ನು ಸಮಾಧಾನಗೊಳಿಸಿದ್ದೇ ಡಿಕೆಶಿ. ಈ ಬಾರಿ, ಇವರ ಮನವೊಲಿಸಲು ಡಿಕೆಶಿಗೆ ಸಾಧ್ಯವಾಗುತ್ತೋ ಇಲ್ಲವೋ? ಒಟ್ಟಿನಲ್ಲಿ ಇಬರಿಬ್ಬರದ್ದು ಗಟ್ಟಿಯಾದ ರಾಜಕೀಯ ನಿರ್ಧಾರವಂತೂ ಅಲ್ಲವೇ ಅಲ್ಲ.












Click it and Unblock the Notifications