ಸಮ್ಮಿಶ್ರ ಸರಕಾರಕ್ಕೆ ಖೆಡ್ಡಾ ತೋಡಿದ ಮಾಜಿ ಜೆಡಿಎಸ್ ಅಧ್ಯಕ್ಷ ಎಚ್ ವಿಶ್ವನಾಥ್?
Recommended Video
ಯಾರೂ ನಿರೀಕ್ಷೆ ಮಾಡದ ರಾಜಕೀಯ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿದೆ. ವಿದೇಶ ಪ್ರವಾಸದಲ್ಲಿರುವ ಸಿಎಂ ಕುಮಾರಸ್ವಾಮಿಯವರ ಬಿಪಿ ಒತ್ತಡ ಹೆಚ್ಚಾಗುವ ವಿದ್ಯಮಾನಗಳು ಕ್ಷಣಕ್ಷಣಕ್ಕೂ ನಡೆಯುತ್ತಿದೆ.
ಗಮನಿಸಬೇಕಾದ ಅಂಶವೇನಂದರೆ, ರಾಜೀನಾಮೆ ನೀಡಲು ಮುಂದಾಗುತ್ತಿರುವ ಶಾಸಕರುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳ ಶಾಸಕರ ಅಸಮಾಧಾನದ ಜ್ವಾಲೆ ಸ್ಪೋಟಗೊಳ್ಳುತ್ತಿದ್ದು, ಎರಡೂ ಪಕ್ಷಗಳ ಶಾಸಕರುಗಳು ಈ ಪಟ್ಟಿಯಲ್ಲಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯಿಂದ ಎರಡು ದಿನಗಳ ಹಿಂದೆ ಕೆಳಗಿಳಿದಿದ್ದ ಎಚ್ ವಿಶ್ವನಾಥ್, ಈಗ ನಡೆಯುತ್ತಿರುವ ಎಲ್ಲಾ ಬೆಳವಣಿಗೆಯ ಹಿಂದಿನ ಸೂತ್ರಧಾರ ಎಂದು ಹೇಳಲಾಗುತ್ತಿದೆ. ಬಿಜೆಪಿ ಮುಖಂಡರನ್ನು ವಿಶ್ವನಾಥ್ ಭೇಟಿಯಾದಾಗಲೇ, ಅವರು ಬಿಜೆಪಿ ಸೇರುವ ಬಗ್ಗೆ ಗುಸುಗುಸು ಸುದ್ದಿ ಹರಿದಾಡಲಾರಂಭಿಸಿತು.
ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಮೇಲೆ, ರಾಜಕೀಯವಾಗಿ ವಿಶ್ವನಾಥ್ ನೇಪಥ್ಯಕ್ಕೆ ಸರಿಯಲಿದ್ದಾರೆ ಎಂದು ಹರಿದಾಡುತ್ತಿದ್ದ ಸುದ್ದಿ ಸುಳ್ಳಾಗಿದ್ದು, ಎಲ್ಲಾ ಬೆಳವಣಿಗೆಗಳು ಅವರ ನೇತೃತ್ವದಲ್ಲೇ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಸರ್ಕಾರವನ್ನು ಬೀಳಿಸುವ ಅವಶ್ಯಕತೆ ಇಲ್ಲ, ಸರ್ಕಾರ ತಾನಾಗಿಯೇ ಬೀಳುತ್ತದೆ
ಸರ್ಕಾರವನ್ನು ಬೀಳಿಸುವ ಅವಶ್ಯಕತೆ ಇಲ್ಲ, ಸರ್ಕಾರ ತಾನಾಗಿಯೇ ಬೀಳುತ್ತದೆ. ಮೈತ್ರಿ ಸರ್ಕಾರದ ನಾಯಕರುಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಇಬ್ಬರೂ ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ. ಇವರಿಬ್ಬರಿಗೂ ಸರಕಾರ ಉಳಿಸಿಕೊಳ್ಳುವ ಆಸಕ್ತಿಯಿಲ್ಲ ಎಂದು ವಿಶ್ವನಾಥ್ ದೆಹಲಿಯಲ್ಲಿ ಕೆಲವು ದಿನಗಳ ಕೆಳಗೆ ವಾಗ್ದಾಳಿ ನಡೆಸಿದ್ದರು.

ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ
ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾಗ, ಇದರ ಹಿಂದೆ ವಿಶ್ವನಾಥ್ ಅವರ ಕೈಯಿದೆ ಎನ್ನುವ ಮಾತು ಕೇಳಿಬರುತ್ತಿತ್ತು. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿ ಕೋಲ್ಕತ್ತಾಗೆ ವಿಶ್ವನಾಥ್ ಹಾರಿದ್ದರು. ಇದಾದ ನಂತರ ದೆಹಲಿಯಲ್ಲಿ ಬಿಜೆಪಿ ಮುಖಂಡರನ್ನು ವಿಶ್ವನಾಥ್ ಭೇಟಿ ಮಾಡಿದ್ದರು.

ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ಅತೃಪ್ತ ಶಾಸಕರು
ಬೆಂಗಳೂರು ಯುಬಿ ಸಿಟಿಯಲ್ಲಿರುವ ಓಕ್ ವುಡ್ ಪ್ರೀಮಿಯರ್ ಪ್ರೆಸ್ಟೀಜ್ ಹೋಟೆಲ್ ನಲ್ಲಿ ಕೆಲವು ಶಾಸಕರು ಇದ್ದಾರೆ. ಜೊತೆಗೆ, ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ಎಸ್ ಟಿ ಸೋಮಶೇಖರ್, ಮುನಿರತ್ನಂ ನಾಯ್ಡು, ಭೈರತಿ ಬಸವರಾಜು ಸೇರಿದಂತೆ ಕೆಲವು ಶಾಸಕರಿದ್ದಾರೆ.

ವಿಶ್ವನಾಥ್ ರಾಜೀನಾಮೆ ನಿರ್ಧಾರದಿಂದ ಹಿಂದಕ್ಕೆ ಸರಿದಿರಲಿಲ್ಲ
ಎಚ್ ವಿಶ್ವನಾಥ್ ಕೂಡಾ ವಿಧಾನಸೌಧದ ಸ್ಪೀಕರ್ ಕಚೇರಿ ಬಳಿಯಿದ್ದು, ಎಲ್ಲಾ ರಾಜಕೀಯ ಬೆಳವಣಿಗೆಗಳು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಜೆಡಿಎಸ್ ವರಿಷ್ಠ ದೇವೇಗೌಡ್ರು ಎಷ್ಟೇ ಮನವೊಲಿಕೆ ಮಾಡಿದ್ದರೂ, ವಿಶ್ವನಾಥ್ ರಾಜೀನಾಮೆ ನಿರ್ಧಾರದಿಂದ ಹಿಂದಕ್ಕೆ ಸರಿದಿರಲಿಲ್ಲ. ರಾಜೀನಾಮೆ ಸ್ವೀಕರಿಸದೇ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ವಿಶ್ವನಾಥ್ ಹೇಳಿದ್ದರು.

ಈಗ ನಡೆಯುತ್ತಿರುವ ಬೆಳವಣಿಗೆಗಳು ವಿಶ್ವನಾಥ್ ನೇತೃತ್ವದಲ್ಲಿ ನಡೆಯುತ್ತಿದೆಯಾ?
ತುಮಕೂರು ಸಂಸದ ಜಿ.ಎಸ್.ಬಸವರಾಜು, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ವಿಶ್ವನಾಥ್ ದೆಹಲಿಯಲ್ಲಿ ಭೇಟಿ ಮಾಡಿದರು. ಈಗ ನಡೆಯುತ್ತಿರುವ ಬೆಳವಣಿಗೆಗಳು ವಿಶ್ವನಾಥ್ ನೇತೃತ್ವದಲ್ಲಿ ನಡೆಯುತ್ತಿದೆಯಾ ಎನ್ನುವ ದಟ್ಟ ಸಂಶಯ ಕಾಡುತ್ತಿದೆ.












Click it and Unblock the Notifications