Flood Alert: ಗೇಟ್ ಕಟ್ ಆದ ತುಂಗಭದ್ರಾ ಡ್ಯಾಂನಿಂದ 1,50,000 ಕ್ಯೂಸೆಕ್ ನೀರು ಬಿಡುಗಡೆ!
ಬೆಂಗಳೂರು, ಆಗಸ್ಟ್ 12: ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ತುಂಗಭದ್ರಾ ಅಣೆಕಟ್ಟು ಸಹ ಪ್ರಮುಖವಾಗಿದೆ. ನಿರಂತರ ಮಳೆಯಿಂದ ಡ್ಯಾಂ ಭರ್ತಿಯಾಗಿದೆ. ಈ ಮಧ್ಯೆ ಡ್ಯಾಂ ಕ್ರಸ್ಟ್ ಗೇಟ್ನ ಚೈನ್ ಲಿಂಕ್ ಮುರಿದು ಹೋಗಿದ್ದು, ನಿರಂತರವಾಗಿ ನೀರು ಪೋಲಾಗುತ್ತಿದೆ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೆ ಬರೋಬ್ಬರಿ 1,50,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ವಿವಿಧ ಗ್ರಾಮಸ್ಥರಲ್ಲಿ ಪ್ರವಾಹ ಆತಂಕ ಮನೆ ಮಾಡಿದೆ.
ಎರಡು ದಿನದ ಹಿಂದಷ್ಟೇ ಇದೇ ತುಂಗಭದ್ರಾ ಡ್ಯಾಂನ ಗೇಟ್ವೊಂದರ ಚೈನ್ ಲಿಂಕ್ ತುಂಡಾಗಿದೆ. ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು, ಸಚಿವರು ಸೇರಿದಂತೆ ರಾಜ್ಯ ಸರ್ಕಾರದ ನಿರ್ಲಕ್ಷ್ಯೆಯಿಂದ ರೈತರಿಗೆ ಬಳಕೆ ಆಗಬೇಕಾದ ನೀರು ಪೋಲಾಗುತ್ತಿದೆ ಎಂದು ದೂರಲಾಗಿತ್ತು.

ಇದೀಗ ಗೇಟ್ ದುರಸ್ತಿ ಮಾಡಬೇಕಾದ ಸರ್ಕಾರವೇ ಸೋಮವಾರ ಬೆಳ್ಳಂಬೆಳಗ್ಗೆಯೇ 7 ಗಂಟೆಯಿಂದ ತುಂಗಭದ್ರಾ ಅಣೆಕಟ್ಟಿನಿಂದ ಬರೋಬ್ಬರಿ 1,50,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುತ್ತಿದೆ. ಈ ಕುರಿತು ಜಲಾಶಯದ ಅಕ್ಕ ಪಕ್ಕದ, ನದಿ ಪಾತ್ರದ ನಿವಾಸಿಗಳಿಗೆ ಸೂಕ್ತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಲಾಗಿದೆ. ಪ್ರವಾಹದ ಎಚ್ಚರಿಕೆಯ ಮುನ್ಸೂಚನೆ ನೀಡಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ (KSNDMC) ನೀಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ (ಎಕ್ಸ್) ನಲ್ಲಿ ಟ್ವೀಟ್ ಮಾಡಿ KSNDMC ತಿಳಿಸಿದೆ. ಇದರ ಪ್ರಕಾರ, ಇಂದು ಬೆಳಗ್ಗೆಯಿಂದಲೇ ಜಲಾಶಯದ ಹೊರ ಹರಿವು ಪ್ರಮಾಣ 1,50,000 ಕ್ಯೂಸೆಕ್ ಗೆ ಹೆಚ್ಚಾಗುತ್ತಿದೆ. ಡ್ಯಾಂ ಕೆಳಭಾಗದಲ್ಲಿ ನದಿ ಪಾತ್ರದ ಜನರಿಗೆ ಎಚ್ಚರದಿಂದಿರಲು ವಿನಂತಿಸಲಾಗಿದೆ.

ಡ್ಯಾಂ ಗೇಟ್ ದುರಸ್ತಿಗೆ ಎಷ್ಟು ಸಮಯ ಬೇಕು?
ತುಂಗಭದ್ರಾ ಡ್ಯಾಂ ಗೇಟ್ ಚೈನ್ ಲಿಂಕ್ ಕಟ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ವಿರುದ್ಧ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೆ ಸರ್ಕಾರ ನೀರು ಬಿಡಲು ಮುಂದಾಯಿತೇ ಎಂಬ ಅನುಮಾನ ಮೂಡಿದೆ.
ಜಲಾಶಯಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಇಲಾಖೆ ಅಧಿಕಾರಿಗಳ ಜತೆ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ತ್ವರಿತಗತಿಯಲ್ಲಿ ಜಲಾಶಯ ಗೇಟ್ ದುರಸ್ಥಿಗೆ ತಜ್ಞರೊಂದಿಗೆ ಸಮಾಲೋಚಿಸಲಾಗಿದೆ. ಮೂಲಗಳ ಪ್ರಕಾರ ಈ ಗೇಟ್ ದುರಸ್ತಿಗೆ ಒಂದು ವಾರ ಸಮಯ ಹಿಡಿಯಬಹುದು ಎಂದು ಹೇಳಲಾಗುತ್ತಿದೆ.
ಕಲ್ಲಿನ ಮಂಟಪ ಮುಳಗಡೆ ಸ್ಥಿತಿ: ಸಂಚಾರ ನಿರ್ಬಂಧ
ತುಂಗಭದ್ರಾ ಜಲಾಶಯದ ಗೇಟ್ ಲಿಂಕ್ ತುಂಡಾಗಿದೆ. ಗೇಟ್ ಕೊಚ್ಚಿ ಹೋಗಿದ್ದು, ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದೆ. ಪರಿಣಾಮ ಆನೆಗೊಂದಿಯ ಕೃಷ್ಣದೇವರಾಯ ಸಮಾಧಿಯ 64 ಸಾಲಿನ ಕಲ್ಲು ಮಂಟಪವು ಮುಳುಗುವ ಸ್ಥಿತಿಯಲ್ಲಿದೆ.
ವಿಪರೀತ ಮಳೆಯಿಂದ ಡ್ಯಾಂಗೆ ಅಪಾರ ನೀರು ಹರಿದು ಬಂದಿದೆ. ಈಮಧ್ಯೆ ಗೇಟ್ ಲಿಂಕ್ ಕಟ್ ಆಗಿದೆ. ಹೀಗಾಗಿ ಸರ್ಕಾರ ಹಂತ ಹಂತವಾಗಿ ನೀರನ್ನು ಸೋಮವಾರ ಬೆಳಗ್ಗೆಯಿಂದಲೇ ಬಿಡುಗಡೆ ಮಾಡುತ್ತಿದೆ. ಇದರಿಂದ ನದಿಯ ಒಳಹರಿವು ಏರಿಕೆ ಆಗಿದೆ.
ಸೇತುವೆ ಮೇಲಿನ ಸಂಚಾರ ನಿಷೇಧ
ಇನ್ನೂ ಗಂಗಾವತಿ ತಾಲೂಕಿನ ಕಂಪ್ಲಿ ಹಾಗೂ ವಿಜಯನಗರ ಮಧ್ಯೆ ಸೇತುವೆ ಭಾಗದಲ್ಲಿ ನದಿ ನೀರು ಪ್ರಮಾಣ ಏರಿಕೆ ಆಗುತ್ತಲೇ ಇದೆ. ಜನರ ಸುರಕ್ಷತೆ ದೃಷ್ಟಿಯಿಂದ ಸೇತುವೆ ಮೇಲೆ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಪಾದಾಚಾರಿಗಳು ಓಡಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಇದೆ ಪ್ರವಾಹನ ಸ್ಥಿತಿ ಮುನ್ಸೂಚನೆಯಿಂದಾಗಿ ಕಳೆದ ತಿಂಗಳು ಜುಲೈ 26ರಂದು ಕಂಪ್ಲಿ ಸೇತುವೆ ಮೇಲೆ ಸಂಚಾರ ನಿಷೇಧಿಸಲಾಗಿತ್ತು. ಇತ್ತೀಚೆಗಷ್ಟೇ ಓಡಾಟಕ್ಕೆ ಅನುಮತಿ ನೀಡಲಾಗಿತ್ತು. ಇದೀಗ ಮತ್ತೆ ಸಂಚಾರ ನಿಷೇಧಗೊಂಡಿದೆ.












Click it and Unblock the Notifications