ತುಮಕೂರು ಟಿಕೆಟ್ : ಪರಮೇಶ್ವರ ಭೇಟಿಯಾದ ದಿನೇಶ್ ಗುಂಡೂರಾವ್
ಬೆಂಗಳೂರು, ಮಾರ್ಚ್ 17 : 'ನಾವೆಲ್ಲರೂ ತುಮಕೂರು ಸಂಸದ ಮುದ್ದಹನುಮೇಗೌಡರ ಪರ ಇದ್ದೇವೆ. ಅವರಿಗೆ ಆಗಿರುವ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಭಾನುವಾರ ದಿನೇಶ್ ಗುಂಡೂರಾವ್ ಅವರು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಉಭಯ ನಾಯಕರು ಹಲವು ಕಾಲ ಮಾತುಕತೆ ನಡೆಸಿದರು.
ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದೆ. ಮೈತ್ರಿಯಂತೆ ಹಾಲಿ ಕಾಂಗ್ರೆಸ್ ಸಂಸದರು ಇದ್ದರೂ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿದೆ. ತವರು ಕ್ಷೇತ್ರವನ್ನು ಜೆಡಿಎಸ್ಗೆ ಕೊಟ್ಟಿರುವುದುಕ್ಕೆ ಪರಮೇಶ್ವರ ಅಸಮಾಧಾನಗೊಂಡಿದ್ದಾರೆ.
ತುಮಕೂರು ಕ್ಷೇತ್ರವನ್ನು ಮರಳಿ ಪಡೆಯಲು ಪರಮೇಶ್ವರ ಮತ್ತು ಸಂಸದ ಮುದ್ದ ಹನುಮೇಗೌಡ ಅವರು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಅದು ಫಲ ನೀಡಿಲ್ಲ. ಮುದ್ದ ಹನುಮೇಗೌಡ ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ....

ದೆಹಲಿಯಲ್ಲಿ ಮುದ್ದ ಹನುಮೇಗೌಡ
ಡಾ.ಜಿ.ಪರಮೇಶ್ವರ ಅವರು ಮುದ್ದ ಹುನುಮೇಗೌಡ ಅವರನ್ನು ದೆಹಲಿಗೆ ಕಳಿಸಿದ್ದಾರೆ. ಶನಿವಾರ ದೆಹಲಿಯಲ್ಲಿ ಅವರು ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದಾರೆ. ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸದಿದ್ದರೆ ಅದನ್ನು ಕಾಂಗ್ರೆಸ್ಗೆ ಬಿಟ್ಟುಕೊಡಿ ಎಂಬುದು ಬೇಡಿಕೆಯಾಗಿದೆ. ಆದರೆ, ದೇವೇಗೌಡರು ಎಲ್ಲಿಂದ ಸ್ಪರ್ಧಿಸಬೇಕು ಎಂದು ಇನ್ನೂ ತೀರ್ಮಾನ ಕೈಗೊಂಡಿಲ್ಲ.

ವಿಶೇಷ ಅರ್ಥ ಬೇಡ
ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, 'ನಮ್ಮಿಬ್ಬರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪರಮೇಶ್ವರ ನಮ್ಮ ನಾಯಕರು. ಚುನಾವಣೆ ಸಿದ್ಧತೆ ಸಂಬಂಧ ಚರ್ಚೆ ನಡೆಸಿದ್ದೇವೆ. ಅವರು ಇಡೀ ರಾಜ್ಯಕ್ಕೆ ನಾಯಕರು. ತುಮಕೂರಿಗೆ ಮಾತ್ರ ನಾಯಕರಲ್ಲ' ಎಂದರು.

ಎಲ್ಲರೂ ಪ್ರಯತ್ನ ಮಾಡುತ್ತಿದ್ದೇವೆ
'ನಾವೆಲ್ಲರೂ ತುಮಕೂರು ಸಂಸದ ಮುದ್ದ ಹನುಮೇಗೌಡ ಅವರ ಪರವಾಗಿದ್ದೇವೆ. ನಾನು ಕೂಡಾ ದೇವೇಗೌಡರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಪರಮೇಶ್ವರ ಒಬ್ಬರೇ ತುಮಕೂರು ಮರಳಿ ಪಡೆಯಲು ಪ್ರಯತ್ನ ಮಾಡುತ್ತಿಲ್ಲ. ನಾವೆಲ್ಲರೂ ಸೇರಿ ಪ್ರಯತ್ನ ನಡೆಸುತ್ತಿದ್ದೇವೆ' ಎಂದು ದಿನೇಶ್ ಗುಂಡೂರಾವ್ ಹೇಳಿದರು.

ರಾಜ್ಯದಿಂದ ರಾಹುಲ್ ಸ್ಪರ್ಧೆ
'ರಾಹುಲ್ ಗಾಂಧಿ ಅವರಿಗೆ ಈ ಬಾರಿ ರಾಜ್ಯದಿಂದ ಸ್ಪರ್ಧಿಸುವಂತೆ ವಿನಂತಿಸಿದ್ದೇವೆ. ಸೋಮವಾರ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅವರು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದರೂ ನಾವೆಲ್ಲರೂ ಒಗ್ಗೂಡಿ ಶ್ರಮಿಸಿ ಗೆಲ್ಲಿಸುತ್ತೇವೆ' ಎಂದು ದಿನೇಶ್ ಗುಂಡೂರಾವ್ ಹೇಳಿದರು.












Click it and Unblock the Notifications