Breaking; ಜೆಡಿಎಸ್ ನಾಯಕ ಬೆಮಲ್ ಕಾಂತರಾಜು ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು, ಜನವರಿ 21; ತುಮಕೂರು ಜಿಲ್ಲೆಯ ಪ್ರಭಾವಿ ಜೆಡಿಎಸ್ ನಾಯಕ ಬೆಮಲ್ ಕಾಂತರಾಜು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಈಗಾಗಲೇ ಹಲವು ಜೆಡಿಎಸ್ನ ಹಲವು ನಾಯಕರು ಕಾಂಗ್ರೆಸ್ ಸೇರಿದ್ದು, ಈ ಪಟ್ಟಿಗೆ ಬೆಮಲ್ ಕಾಂತರಾಜು ಸೇರಿದ್ದಾರೆ.
ಜೆಡಿಎಸ್ ನಾಯಕ, ವಿಧಾನ ಪರಿಷತ್ನ ಮಾಜಿ ಸದಸ್ಯ ಬೆಮಲ್ ಕಾಂತರಾಜು ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.
ತುಮಕೂರಿನ ಜೆಡಿಎಸ್ ನಾಯಕ ಇಂದು ಕಾಂಗ್ರೆಸ್ ಸೇರ್ಪಡೆ!
ಬೆಮಲ್ ಕಾಂತರಾಜು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.
ರಾಮನಗರದಲ್ಲಿ ಕಾಂಗ್ರೆಸ್ಗೆ ಜೆಡಿಎಸ್ ರವಾನಿಸಿದ ಸಂದೇಶವೇನು?
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ಬೆಮಲ್ ಕಾಂತರಾಜುಗೆ ಶುಭ ಹಾರೈಸಿದ್ದಾರೆ. 'ಕಾಂಗ್ರೆಸ್ನ ತತ್ವ, ಸಿದ್ಧಾಂತಗಳಿಂದ ಪ್ರೇರಣೆಗೊಂಡು ಇಂದು ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಎಂಎಲ್ಸಿ, ಜೆಡಿಎಸ್ ಮುಖಂಡ ಕಾಂತರಾಜು ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜೊತೆಗೂಡಿ ಸ್ವಾಗತಿಸಿ, ಶುಭ ಹಾರೈಸಿದೆ. ಮಾಜಿ ಡಿಸಿಎಂ ಪರಮೇಶ್ವರ, ನಾಯಕರಾದ ಸಲೀಂ ಅಹಮದ್, ಟಿ. ಬಿ. ಜಯಚಂದ್ರ ಮತ್ತಿತರರು ಹಾಜರಿದ್ದರು' ಎಂದು ಹೇಳಿದ್ದಾರೆ.
ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಬೆಮಲ್ ಕಾಂತರಾಜು 2021ರ ಸೆಪ್ಟೆಂಬರ್ನಲ್ಲಿಯೇ ಜೆಡಿಎಸ್ ಪಕ್ಷ ತೊರೆಯುವುದಾಗಿ ಘೋಷಣೆ ಮಾಡಿದ್ದರು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. "ಬೆಮಲ್ ಕಾಂತರಾಜು ಯಾರು?" ಎಂದು ತುರುವೇಕೆರೆಯಲ್ಲಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.
"ನಾನು ಪಕ್ಷದಿಂದ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಪಕ್ಷ ಸಂಘಟನೆ ಮಾಡಿದ್ದೇನೆ. ಆದರೂ ಸಹ ಕುಮಾರಸ್ವಾಮಿ ನಾನು ಯಾರು? ಎಂದು ಕೇಳುತ್ತಾರೆ. ನಾನು ಯಾರು ಎಂದು ತಿಳಿದಿಲ್ಲ ಎಂದ ಮೇಲೆ ನಾನ್ಯಾಕೆ ಪಕ್ಷದಲ್ಲಿ ಇರಬೇಕು?. ನಾನು ಕಾಂಗ್ರೆಸ್ ಸೇರುತ್ತೇನೆ" ಎಂದು ಘೋಷಣೆ ಮಾಡಿದ್ದರು.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ನಡೆಯುವ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಬೆಮಲ್ ಕಾಂತರಾಜು ಆಯ್ಕೆಯಾಗಿದ್ದರು. ಅವರ ಪರಿಷತ್ ಸದಸ್ಯತ್ವದ ಅವಧಿ ಜನವರಿ 5ರಂದು ಪೂರ್ಣಗೊಂಡಿದೆ.
ಡಿಸೆಂಬರ್ನಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆ ನಡೆದಾಗ ಕಣಕ್ಕಿಳಿಯಲು ಬೆಮಲ್ ಕಾಂತರಾಜು ನಿರಾಕರಿಸಿದ್ದರು. ಜೆಡಿಎಸ್ ಅನಿಲ್ ಕುಮಾರ್ ಕಣಕ್ಕಿಳಿಸಿತ್ತು. ಅವರು ಸಹ ಸೋಲು ಕಂಡಿದ್ದರು.
ಕಾಂಗ್ರೆಸ್ ಸೇರಿರುವ ಬೆಮಲ್ ಕಾಂತರಾಜು 2023ರ ವಿಧಾನಸಭೆ ಚುನಾವಣೆಯಲ್ಲಿ ತುರುವೇಕೆರೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಅವರು ಮಾತನಾಡಿಲ್ಲ.
ಡಿಸೆಂಬರ್ನಲ್ಲಿ ತುರುವೇಕೆರೆಯಲ್ಲಿ ಮಾತನಾಡಿದ್ದ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ "ಬೆಮಲ್ ಕಾಂತರಾಜು ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದು, ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಲಿದ್ದಾರೆ. ಕಾಂಗ್ರೆಸ್ ಪಕ್ಷ ಸೇರುವ ದಿನಾಂಕವನ್ನು ಅವರೇ ನಿರ್ಧರಿಸಲಿದ್ದಾರೆ. ಅವರ ಪಕ್ಷ ಸೇರ್ಪಡೆಯಿಂದ ಪಕ್ಷವು ಸಂಘಟನಾತ್ಮಕವಾಗಿ ಮತ್ತಷ್ಟು ಸದೃಢವಾಗಲಿದೆ" ಎಂದು ಬೆಮಲ್ ಕಾಂತರಾಜು ಸಮ್ಮುಖದಲ್ಲಿಯೇ ಹೇಳಿದ್ದರು.
ಜೆಡಿಎಸ್ ತೊರೆದ ನಾಯಕರು; ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರುವ ನಾಯಕರ ಸಂಖ್ಯೆ ಏರಿಕೆಯಾಗುತ್ತಿದೆ. ಈಗಾಗಲೇ ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ, ನವಲಗುಂದ ಕ್ಷೇತ್ರದ ಮಾಜಿ ಶಾಸಕ ಕೋನರಡ್ಡಿ, ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ಕಾಂಗ್ರೆಸ್ ಸೇರಿದ್ದಾರೆ.
ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನೂ ಕೆಲವು ನಾಯಕರು, ಮಾಜಿ ಶಾಸಕರು ಸಹ ಕಾಂಗ್ರೆಸ್ ಸೇರುವ ತಯಾರಿಯಲ್ಲಿದ್ದಾರೆ.