"ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ": ಕಗ್ಗ ಉಲ್ಲೇಖಿಸಿದ ಡಿಕೆಶಿ
ಬೆಂಗಳೂರು, ಜುಲೈ 23: 15ನೇ ವಿಧಾನಸಭೆ ಕಲಾಪದಲ್ಲಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ವಿಶ್ವಾಸಮತ ಯಾಚನೆ ಬಗ್ಗೆ ಚರ್ಚೆ ಮಂಗಳವಾರವೂ ಮುಂದುವರಿದಿದೆ. ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರು ಮಾತನಾಡಿ, "ಸಿದ್ಧಾಂತ ರಾಜಕಾರಣ ಸತ್ತಿದೆ, ಇದಕ್ಕೆಲ್ಲ ಅಂತ್ಯ ಹಾಡುವ ಸಮಯ ಬಂದಿದೆ" ಎಂದರು.
"ದೊಡ್ಡ ದೊಡ್ಡ ಹಗರಣಗಳನ್ನು ನೋಡಿದ್ದೇನೆ, ನಾಣಯ್ಯ ಹಾಗೂ ಎಸ್ಎಂ ಕೃಷ್ಣ ನಡುವೆ ಚರ್ಚೆ ಗಮನಿಸಿದ್ದೇನೆ, ಈಗ ಸಿದ್ದಾಂತದ ರಾಜಕಾರಣ ಕಾಣುತ್ತಿಲ್ಲ.
ನಮ್ಮನ್ನು ಜೋಕರ್ ಥರಾ ಮಾಡಿದ್ದಾರೆ, ಎಲ್ಲರೂ ಕಳ್ಳರಂತೆ ನೋಡುತ್ತಿದ್ದಾರೆ, ನಮ್ಮನ್ನು ರಾಜಕಾರಣಿಗಳು ಎಂದು ಕರೆಸಿಕೊಳ್ಳುವುದಕ್ಕೆ ಆಗುತ್ತಿಲ್ಲ" ಎಂದು ನೊಂದು ನುಡಿದರು.
ಸಿದ್ದಾಂತ ರಾಜಕಾರಣ ಸತ್ತಿರುವ ಬಗ್ಗೆ ಮಾತನಾಡುತ್ತಾ, ದಾರ್ಶನಿಕ ಡಿ.ವಿ ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗವೊಂದನ್ನು ಉಲ್ಲೇಖಿಸಿದರು.

ಉಪ ಚುನಾವಣೆ ವೇಳೆ ಯಡಿಯೂರಪ್ಪ ಹೇಳಿಕೆ
ನನಗೆ ಯಡಿಯೂರಪ್ಪನವರು ಲೋಕಸಭೆ ಉಪ ಚುನಾವಣೆ ವೇಳೆ ನೀಡಿದ ಹೇಳಿಕೆ ನೆನಪಾಗುತ್ತಿದೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದರು.: "ಕಾರಣವಿಲ್ಲದ ಉಪ ಚುನಾವಣೆಗೆ ಕಾರಣವಾಗುವವರು 10 ವರ್ಷಗಳ ಕಾಲ ಚುನಾವಣೆ ಸ್ಪರ್ಧಿಸದಂತೆ ಕಾನೂನು, ಸಂವಿಧಾನದಲ್ಲಿ ತಿದ್ದುಪಡಿ ಮಾಡುವುದು ಅನಿವಾರ್ಯ" ಎಂದು ಹೇಳಿದ್ದರು.

ಗಟ್ಟಿ ದನಿಯಲ್ಲಿ ಯಡಿಯೂರಪ್ಪ ಅವರಿಗೆ ಸವಾಲೆಸೆದರು
"ಈಗ ಟೈಮ್ ಬಂದಿದೆ, ಇಂಥ ಪರಿಸ್ಥಿತಿಗೆ ಕಡಿವಾಣ, ಅಂತ್ಯ ಕಾಣಿಸಲು ಅವಕಾಶ ಬಂದಿದೆ. ಒಂದೊಂದು ವೋಟ್ ನಲ್ಲಿ ಪ್ರೈಂ ಮಿನಿಷ್ಟ್ರು, ಸಿಎಂ ಮಿನಿಷ್ಟ್ರು ಕಳೆದುಕೊಂಡಿದ್ದನ್ನು ನೋಡಿದ್ದೇವೆ, ಇದು ಪವರ್ ಗೇಮ್" ಗಟ್ಟಿ ದನಿಯಲ್ಲಿ ಯಡಿಯೂರಪ್ಪ ಅವರಿಗೆ ಸವಾಲೆಸೆದರು. ಸಿದ್ದಾಂತ ರಾಜಕಾರಣ ಸತ್ತಿರುವ ಬಗ್ಗೆ ಮಾತನಾಡುತ್ತಾ, ದಾರ್ಶನಿಕ ಡಿ.ವಿ ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗವೊಂದನ್ನು ಉಲ್ಲೇಖಿಸಿದರು.

ಡಿವಿಜಿ ಅವರ ಕಗ್ಗವನ್ನು ಹೇಳಿದ್ದು ಸಿದ್ದರಾಮಯ್ಯ
ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ
ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ ।।
ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿ- ।
ನ್ನುದ್ಧಾರವೆಷ್ಟಾಯ್ತೊ? - ಮಂಕುತಿಮ್ಮ ।।
"ಡಿವಿಜಿ ಅವರ ಕಗ್ಗವನ್ನು ನಿನ್ನೆ ಮಾತನಾಡುವಾಗ ಸಿದ್ದರಾಮಯ್ಯ ಅವರು ಉಲ್ಲೇಖಿಸಿದರು. ಇದು ನಮಗೂ ಅನ್ವಯಿಸುತ್ತದೆ" ಎಂದರು.

ಕಗ್ಗದ ತಾತ್ಪರ್ಯ
ಕಗ್ಗದ ತಾತ್ಪರ್ಯ: ಸಮಾಜ ಸೇವಕರು ಎಂದೆನಿಸಿಕೊಳ್ಳುವವರು ನಿಜವಾಗಿರುವ ಸಮಾಜ ಘಾತುಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಹೆಸರು, ಅಧಿಕಾರ ಉಳಿಸಿಕೊಳ್ಳಲು ಅನೇಕ ರೀತಿಗಳಲ್ಲಿ ದುಷ್ಕೃತ್ಯಗಳಲ್ಲಿ ತೊಡಗಿರುತ್ತಾರೆ. ಸತ್ಕಾರ್ಯವನ್ನು ಮರೆಯುತ್ತಾರೆ, ಗಲಭೆ, ಗದ್ದಲದ ಮೂಲಕ ಜನಪ್ರಿಯತೆಯನ್ನು ಉಳಿಸಿಕೊಳ್ಳುತ್ತಿದ್ದಾರೆ. ದುಷ್ಟರ ಕೂಟವನ್ನು ಬಳಸಿಕೊಂಡು ಜಗತ್ತನ್ನು ಉದ್ಧಾರ ಮಾಡುತ್ತೇನೆ ಎನ್ನುವ ಇವರು ಅಂತರಂಗದಲ್ಲಿ ಕುಸಿದು, ಸಮಾಜವನ್ನು ಹಾಳುಗೆಡವುತ್ತಾರೆ. ಇಂಥವರು ತಾವು ನಾಶವಾಗುವುದಲ್ಲದೆ, ಸಮಾಜವನ್ನು ಅವನತಿಯ ಹಾದಿಗೆ ದೂಡುತ್ತಾರೆ.












Click it and Unblock the Notifications