ಯಡಿಯೂರಪ್ಪ ನಿರಾಳ; ಅನರ್ಹ ಶಾಸಕರ ಕನಸು ನುಚ್ಚು ನೂರು!
Recommended Video
ಬೆಂಗಳೂರು, ಸೆಪ್ಟೆಂಬರ್ 28 : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾದ ಅನರ್ಹ ಶಾಸಕರು ಸಂಪುಟ ಸೇರುವ ಕನಸು ನುಚ್ಚು ನೂರಾಗಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಮ್ಮ ಬಳಿ ಇದ್ದ ಖಾತೆಗಳನ್ನು ಸಚಿವರಿಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಿದ್ದಾರೆ.
ಅನರ್ಹ ಶಾಸಕರು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಅಕ್ಟೋಬರ್ 21ರಂದು ನಿಗದಿಯಾಗಿದ್ದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಡಿಸೆಂಬರ್ 5ಕ್ಕೆ ಮುಂದೂಡಲಾಗಿದೆ. ಆದ್ದರಿಂದ, ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂಬುದು ಖಚಿತವಾಗಿದೆ.
ಯಡಿಯೂರಪ್ಪ ಸಂಪುಟ ಸೇರಿ ಸಚಿವರಾಗಿ ಕ್ಷೇತ್ರಕ್ಕೆ ವಾಪಸ್ ಹೋಗುವ ಅನರ್ಹ ಶಾಸಕರ ಆಸೆ ಫಲಿಸಲಿಲ್ಲ. ಅನರ್ಹ ಶಾಸಕರಿಗಾಗಿಯೇ ಸಚಿವ ಸ್ಥಾನಗಳನ್ನು ಮೀಸಲಾಗಿಟ್ಟಿದ್ದ ಯಡಿಯೂರಪ್ಪ ಅದರನ್ನು ಹಂಚಿಕೆ ಮಾಡಿ ನಿರಾಳರಾಗಿದ್ದಾರೆ. ಅನರ್ಹ ಶಾಸಕರು ಮಾತ್ರ ನಿರಾಸೆಗೊಂಡಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಂಡು ತೀರ್ಪು ಯಾವಾಗ ಬರಲಿದೆ? ಎನ್ನುವುದು ಇನ್ನೂ ಖಚಿತವಾಗಿಲ್ಲ. ಆದ್ದರಿಂದ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಅತಂತ್ರರಾಗಿದ್ದಾರೆ.

ಖಾತೆಗಳನ್ನು ಹಂಚಿಕೆ ಮಾಡಿದ ಯಡಿಯೂರಪ್ಪ
ತಮ್ಮ ಸಂಪುಟದಲ್ಲಿರುವ 17 ಸಚಿವರಿಗೆ ಯಡಿಯೂರಪ್ಪ ಹೆಚ್ಚುವರಿ ಖಾತೆಗಳ ಹೊಣೆಯನ್ನು ವಹಿಸಿದ್ದಾರೆ. ಅನರ್ಹ ಶಾಸಕರಿಗಾಗಿ ಮೀಸಲಾಗಿಟ್ಟಿದ್ದ ಖಾತೆಗಳು ಸಚಿವರ ಹೆಗಲೇರಿವೆ. ಅನರ್ಹಗೊಂಡ ಶಾಸಕರು ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾಗುವುದು ಯಾವಾಗ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಶಾಸಕ ಸ್ಥಾನದಿಂದ ಅನರ್ಹಗೊಂಡವರಿಗೆ ಸದ್ಯಕ್ಕಂತೂ ಸಚಿವರಾಗುವ ಯೋಗವಿಲ್ಲ.

17 ಅನರ್ಹ ಶಾಸಕರು
ಕಾಂಗ್ರೆಸ್ನ 14, ಜೆಡಿಎಸ್ನ 3 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಪತನಗೊಳಿಸಿದ್ದರು. ಬಿಜೆಪಿ ಸರ್ಕಾರದಲ್ಲಿ ಸಚಿವರಾಗುವ ಮಹತ್ವಾಕಾಂಕ್ಷೆ ಹೊಂದಿದ್ದರು. ಆದರೆ, ಅನರ್ಹತೆ ಬಗ್ಗೆ ಅವರು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಅಕ್ಟೋಬರ್ 22ರ ತನಕ ನಡೆಯುವುದಿಲ್ಲ.

ಉಪ ಚುನಾವಣೆ ಮುಂದೂಡಿಕೆ
ಅನರ್ಹಗೊಂಡ ಶಾಸಕರ ಕ್ಷೇತ್ರಕ್ಕೆ ಅಕ್ಟೋಬರ್ 21ರಂದು ಚುನಾವಣೆ ನಡೆಸುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ, ಸುಪ್ರೀಂಕೋರ್ಟ್ ಇದಕ್ಕೆ ತಡೆ ನೀಡಿದೆ. ಡಿಸೆಂಬರ್ 5ರಂದು ಉಪ ಚುನಾವಣೆ ನಡೆಸುವುದಾಗಿ ಆಯೋಗ ಹೇಳಿದೆ. ಇದರಿಂದಾಗಿ ಇನ್ನೂ ಮೂರು ತಿಂಗಳು ಅನರ್ಹ ಶಾಸಕರಿಗೆ ಸಚಿವರಾಗುವ ಅವಕಾಶ ಸಿಗುವುದಿಲ್ಲ. ಅನರ್ಹ ಶಾಸಕರ ಅರ್ಜಿ ಇತ್ಯರ್ಥವಾಗುವ ತನಕ ಅವರು ಯಡಿಯೂರಪ್ಪ ಸಂಪುಟ ಸೇರಲು ಆಗುವುದಿಲ್ಲ.

ಸಂಪುಟ ವಿಸ್ತರಣೆ ಕಗ್ಗಂಟು
ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿದಾಗ ಬಿಜೆಪಿಯಲ್ಲಿಯೇ ಅಸಮಾಧಾನ ಉಂಟಾಗಿತ್ತು. ಸಚಿವ ಸ್ಥಾನ ಕೈ ತಪ್ಪಿದ ಕೆಲವು ಶಾಸಕರು ಮುನಿಸಿಕೊಂಡಿದ್ದರು. ಈಗ ಯಡಿಯೂರಪ್ಪ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂಬ ಸೂಚನೆ ಎಲ್ಲರಿಗೂ ಸಿಕ್ಕಿದೆ. ಇದರಿಂದಾಗಿ ಅನರ್ಹ ಶಾಸಕರು ಒಂದು ಕಡೆ ಇರಲಿ ಬಿಜೆಪಿ ಶಾಸಕರು ಸುಮ್ಮನೆ ಕೂರಲಿದ್ದಾರೆಯೇ? ಎಂಬ ಪ್ರಶ್ನೆ ಎದಿದ್ದೆ. ಬಿಜೆಪಿ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಅನರ್ಹರ ಕಥೆ ಏನು?.












Click it and Unblock the Notifications