ಸಾರಿಗೆ ಮುಷ್ಕರ : ಕನ್ನಡ ದಿನ ಪತ್ರಿಕೆಗಳ ಶೀರ್ಷಿಕೆಗಳು
ಬೆಂಗಳೂರು, ಜುಲೈ 26 : ಸರ್ಕಾರ ಮತ್ತು ಸಾರಿಗೆ ಸಂಸ್ಥೆಗಳ ನೌಕರರ ನಡುವಿನ ಹಗ್ಗಜಗ್ಗಾಟದಿಂದಾಗಿ ಜನರು ಪರದಾಡುವಂತಾಗಿದೆ. ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದೆ.
ಶೇ 35ರಷ್ಟು ವೇತನ ಪರಿಷ್ಕರಣೆ ಸೇರಿದಂತೆ 42 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ನಡೆಸುತ್ತಿರುವ ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಇದರಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ಸುಗಳಿಲ್ಲದೆ ಜನರು ಪರದಾಡುತ್ತಿದ್ದಾರೆ.[2ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ, ಜನರ ಪರದಾಟ]
ಶೇ 10ರಷ್ಟು ವೇತನ ಮಾತ್ರ ಹೆಚ್ಚಳ ಮಾಡಲು ಸಾಧ್ಯ ಎಂದು ಸರ್ಕಾರ ಪಟ್ಟು ಹಿಡಿದು ಕುಳಿತಿದೆ. ಆದ್ದರಿಂದ, ನೌಕರರು ಮತ್ತು ಸರ್ಕಾರದ ನಡುವಿನ ಮಾತುಕತೆ ಮುರಿದುಬಿದ್ದಿದೆ. ಮಂಗಳವಾರ ನೌಕರರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದ್ದು, ಮುಷ್ಕರ ಅಂತ್ಯಗೊಳ್ಳುವ ನಿರೀಕ್ಷೆ ಇದೆ.[ಮುಷ್ಕರ ಕೈ ಬಿಡಲು ನೌಕರರಿಗೆ ಸಿದ್ದರಾಮಯ್ಯ ಮನವಿ]
ಕನ್ನಡದ ದಿನಪತ್ರಿಕೆಗಳು ಸಾರಿಗೆ ಮುಷ್ಕರದ ವರದಿಯನ್ನು ಆಕರ್ಷಕ ಶೀರ್ಷಿಕೆ ಮತ್ತು ಚಿತ್ರಗಳ ಜೊತೆ ಪ್ರಕಟಿಸಿವೆ. ಒಂದಕ್ಕಿಂತ ಒಂದು ಪತ್ರಿಕೆಗಳ ಶೀರ್ಷಿಕೆ ಗಮನ ಸೆಳೆಯುತ್ತಿದೆ. ಜುಲೈ 26 ಮಂಗಳವಾರದ ದಿನಪತ್ರಿಕೆಗಳ ಶೀರ್ಷಿಕಗಳು ಹೇಗಿವೆ ಚಿತ್ರಗಳಲ್ಲಿ ನೋಡಿ...........
ಸಹಮತ ಸಾಧಿಸಿ, ಮುಷ್ಕರ ನಿಲ್ಲಿಸಿ
ವಿಜಯ ಕರ್ನಾಟಕ 'ಸಹಮತ ಸಾಧಿಸಿ, ಮುಷ್ಕರ ನಿಲ್ಲಿಸಿ' ಎಂಬ ಶೀರ್ಷಿಕೆಯಡಿ ಮುಷ್ಕರದ ಸುದ್ದಿಗಳನ್ನು ಪ್ರಕಟಿಸಿದೆ. ಜನರಿಂದ ತುಂಬಿ ತುಳುಕುತ್ತಿರುವ ಮೆಟ್ರೋ ರೈಲಿನ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿದೆ.
ಸರ್ಕಾರದ ಹಗ್ಗಜಗ್ಗಾಟ, ಜನರ ಪರದಾಟ
ವೇತನ ಪರಿಷ್ಕರಣೆ ಕುರಿತು ಸರ್ಕಾರದ ಹಗ್ಗಜಗ್ಗಾಟದಿಂದಾಗಿ ಜನರು ಪದರಾಡುತ್ತಿದ್ದಾರೆ ಎಂದು 'ಸರ್ಕಾರದ ಹಗ್ಗಜಗ್ಗಾಟ, ಜನರ ಪರದಾಟ' ಎಂದು ವಿಜಯವಾಣಿ ಶೀರ್ಷಿಕೆ ನೀಡಿದೆ. ಮೆಜೆಸ್ಟಿಕ್ನ ಬಿಎಂಟಿಸಿ ಬಸ್ ನಿಲ್ದಾಣ ಖಾಲಿಯಾಗಿರುವ ಚಿತ್ರವನ್ನು ಮುಖಪುಟದಲ್ಲಿ ಹಾಕಿದೆ.
ಸಾರಿಗೆ ಮುಷ್ಕರ : ಜನ ತತ್ತರ
ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ಹಿನ್ನಲೆಯಲ್ಲಿ ಜನರಿಗೆ ಸಂಕಷ್ಟ ಎದುರಾಗಿದೆ. ಪ್ರಜಾವಾಣಿ 'ಸಾರಿಗೆ ಮುಷ್ಕರ : ಜನ ತತ್ತರ' ಎಂಬ ಶೀರ್ಷಿಕೆಯಡಿ ಮುಷ್ಕರದ ಸುದ್ದಿಗಳನ್ನು ಪ್ರಕಟಿಸಿದೆ.
ಮುಗಿಯದ ಮಾತು, ಹೊರಡದ ಬಸ್ಸು
ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ ಹೊಡೆಯುತ್ತಿರುವ ಚಿತ್ರವನ್ನು ಮುಖಪುಟದಲ್ಲಿ ಹಾಕಿರುವ ಕನ್ನಡಪ್ರಭ 'ಮುಗಿಯದ ಮಾತು, ಹೊರಡದ ಬಸ್ಸು' ಎಂಬ ಶೀರ್ಷಿಕೆ ನೀಡಿ, ಮುಷ್ಕರದ ಸುದ್ದಿಗಳನ್ನು ನೀಡಿದೆ.
ಮುಷ್ಕರೆ ತಯ್ಬಾ?
ವಿಶ್ವವಾಣಿ ದಿನಪತ್ರಿಕೆ ಮುಷ್ಕರೆ ತಯ್ಬಾ? ಎಂಬ ಶೀರ್ಷಿಕೆಯಡಿ ಸಾರಿಗೆ ಮುಷ್ಕರದ ಸುದ್ದಿಗಳನ್ನು ಪ್ರಕಟಿಸಿದೆ. ಬಸ್ಸಿಗಾಗಿ ಕಾಯುತ್ತಾ ಕುಳಿತ ಮಹಿಳೆ ಮತ್ತು ಪುಟ್ಟ ಮಗುವಿನ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿದೆ.
ಪಟ್ಟು ಬಿಗಿ : ಮುಷ್ಕರವೂ ಬಿಗಿ!
ಸಾರಿಗೆ ನೌಕರರು ಮತ್ತು ಸರ್ಕಾರದ ಪಟ್ಟು ಮುಂದುವರೆದಿದೆ ಎಂಬುದನ್ನು ಉದಯವಾಣಿ ಶೀರ್ಷಿಕೆಯಾಗಿ ಬಳಸಿಕೊಂಡಿದೆ. 'ಪಟ್ಟು ಬಿಗಿ : ಮುಷ್ಕರವೂ ಬಿಗಿ!' ಎಂಬ ಶೀರ್ಷಿಕೆಯಡಿ ವರದಿಗಳನ್ನು ಪ್ರಕಟಿಸಿದೆ.
ಬಸ್ ಮುಷ್ಕರ : ಸಂಕಷ್ಟದಲ್ಲಿ ಜನ ಜೀವನ
ಸಾರಿಗೆ ಮುಷ್ಕರದ ಸುದ್ದಿಗಳನ್ನು ವಾರ್ತಾ ಭಾರತಿ 'ಬಸ್ ಮುಷ್ಕರ : ಸಂಕಷ್ಟದಲ್ಲಿ ಜನ ಜೀವನ' ಎಂಬ ಶೀರ್ಷಿಕೆಯಡಿ ಪ್ರಕಟಿಸಿದೆ.
ದಾರಿ ಕಾಣದ ಮುಷ್ಕರ
ಸಂಯುಕ್ತ ಕರ್ನಾಟಕ ದಿನ 1 ಎಂದು ಸಾರಿಗೆ ಮುಷ್ಕರದ 4 ಚಿತ್ರಗಳ ಜೊತೆ ವಿವರವಾದ ವರದಿಯನ್ನು ಪ್ರಕಟಿಸಿದೆ. 'ದಾರಿ ಕಾಣದ ಮುಷ್ಕರ' ಎಂಬ ಶೀರ್ಷಿಕೆಯನ್ನು ನೀಡಿದೆ.
ಇಂದೇ ನಿಲ್ಲಲಿ ಈ ಪರದಾಟ
ಹೊಸದಿಗಂತ ಪತ್ರಿಕೆ 'ಇಂದೇ ನಿಲ್ಲಲಿ ಈ ಪರದಾಟ' ಎಂಬ ಶೀರ್ಷಿಕೆಯಡಿ ಸಾರಿಗೆ ಮುಷ್ಕರದ ಸುದ್ದಿಗಳನ್ನು ಪ್ರಕಟಿಸಿದೆ.