ಮುಷ್ಕರ ವಾಪಸ್ ಪಡೆದ ಕರ್ನಾಟಕದ ಸಾರಿಗೆ ನೌಕರರು
ಬೆಂಗಳೂರು, ಮಾರ್ಚ್ 19; ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ, ನೌಕರರ ಜಂಟಿ ಕ್ರಿಯಾ ಸಮಿತಿ ಮಾರ್ಚ್ 21ರಿಂದ ಕರೆ ನೀಡಿದ್ದ ಮುಷ್ಕರವನ್ನು ವಾಪಸ್ ಪಡೆದಿವೆ. ಇದರಿಂದಾಗಿ ಜನರು ನಿಟ್ಟುಸಿರು ಬಿಟ್ಟಿದ್ದು, ಯುಗಾದಿ ಹಬ್ಬಕ್ಕೆ ಊರಿಗೆ ತೆರಳಲು ಸರ್ಕಾರಿ ಬಸ್ ಸೌಲಭ್ಯ ಸಿಗಲಿದೆ. ಹಲವು ಸುತ್ತಿನ ಮಾತುಕತೆ ಬಳಿಕ ಮುಷ್ಕರ ವಾಪಸ್ ಪಡೆಯುವ ನಿರ್ಧಾರ ಪ್ರಕಟಿಸಲಾಗಿದೆ.
ಶನಿವಾರ ರಾತ್ರಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಜೊತೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ಸಾರಿಗೆ ನೌಕರರ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲು ಸಭೆಯಲ್ಲಿ ಭರವಸೆ ಸಿಕ್ಕಿದೆ. ಈ ಹಿನ್ನಲೆಯಲ್ಲಿ ಮಾರ್ಚ್ 21ರಿಂದ ಕರೆ ನೀಡಿದ್ದ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ ಎಂದು ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಹೇಳಿದೆ.

ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಮಾರ್ಚ್ 24ರಿಂದ ಮುಷ್ಕರ ನಡೆಸುತ್ತೇವೆ ಎಂದು ಹೇಳಿತ್ತು. ಆದರೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ನೌಕರರ ಜಂಟಿ ಕ್ರಿಯಾ ಸಮಿತಿ ಮಾರ್ಚ್ 21ರಿಂದಲೇ ಮುಷ್ಕರ ನಡೆಸುತ್ತೇವೆ ಎಂದು ಹೇಳಿತ್ತು. ಈ ಎರಡೂ ಬಣಗಳು ಪ್ರತ್ಯೇಕವಾಗಿ ಮುಷ್ಕರಕ್ಕೆ ಕರೆ ನೀಡಿದ್ದು, ಸಿಬ್ಬಂದಿಗಳು ಮತ್ತು ಜನರಲ್ಲಿ ಗೊಂದಲ ಉಂಟು ಮಾಡಿತ್ತು. ಮಾರ್ಚ್ 22ರಂದು ಯುಗಾದಿ ಹಬ್ಬವಿದೆ ಮುಷ್ಕರದಿಂದಾಗಿ ಬಸ್ಗಳ ಸಂಚಾರ ಸ್ಥಗಿತಗೊಂಡರೆ ಊರಿಗೆ ಹೋಗುವುದು ಹೇಗೆ? ಎಂದು ಜನರು ಆತಂಕಗೊಂಡಿದ್ದರು.
ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದಾಗ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೇ. 15ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಪ್ರಕಟಿಸಿದ್ದರು. ಆದರೆ, ಸಾರಿಗೆ ನೌಕರರ ಸಂಘದವರು ಇದನ್ನು ಒಪ್ಪಿರಲಿಲ್ಲ. 2020ರಿಂದ ವೇತನ ಪರಿಷ್ಕರಣೆ ಆಗಿಯೇ ಇಲ್ಲ. ಈಗ ಶೇ. 15ರಷ್ಟು ಹೆಚ್ಚಳ ಮಾಡಿದರೆ ಪ್ರಯೋಜನವಿಲ್ಲ ಎಂದು ಹೇಳಿದ್ದರು. ಆದ್ದರಿಂದ ಅಧಿಕಾರಿಗಳ ಜೊತೆ ನಡೆಸಿದ ಸರಣಿ ಸಭೆಗಳು ವಿಫಲಗೊಂಡಿತ್ತು.

ಸಭೆಯ ಬಳಿಕ ಹೇಳಿಕೆ; ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಜೊತೆಗಿನ ಸಭೆಯ ಬಳಿಕ ಮಾತನಾಡಿದ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಚ್. ವಿ. ಅನಂತಸುಬ್ಬರಾವ್, "ವೇತನ ಹೆಚ್ಚಳ ಹಾಗೂ ಸೇರಿದಂತೆ ಭತ್ಯೆ ಸೇರಿದಂತೆ ಉಳಿದ ಎಲ್ಲಾ ಬೇಡಿಕೆಗಳನ್ನು ಕಾರ್ಮಿಕ ಸಂಘಟನೆಗಳ ಜೊತೆಗೆ ನಿಗಮ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದ್ದರಿಂದ ಮಂಗಳವಾರದಿಂದ ಕರೆ ನೀಡಿದ್ದ ಮಷ್ಕರ ವಾಪಸ್ ಪಡೆಯಲಾಗಿದೆ" ಎಂದರು.
"ಕಳೆದ ಮೂರು ವರ್ಷಗಳಿಂದ ವೇತನ ಹೆಚ್ಚಳದ ವಿಷಯ ನೆನೆಗುದಿಗೆ ಬಿದ್ದಿತ್ತು. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ಅದನ್ನು ಬಗೆಹರಿಸಿದ್ದಾರೆ. ಹಿಂಬಾಕಿ ನೀಡುವ ವಿಚಾರದಲ್ಲಿ ಸಂಘಟನೆಗಳ ಮಾಹಿತಿ ಪಡೆಯುವ ಭರವಸೆ ಸಭೆಯಲ್ಲಿ ಸಿಕ್ಕಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಜನರಿಗೆ ತೊಂದರೆ ಮಾಡುವ ಉದ್ದೇಶ ಇರಲಿಲ್ಲ. ಸ್ಪಷ್ಟ ಭರವಸೆ ಸಿಗದ ಕಾರಣ ಮುಷ್ಕರಕ್ಕೆ ಕರೆ ನೀಡಲಾಗಿತ್ತು" ಎಂದು ಅವರು ಸ್ಪಷ್ಟಪಡಿಸಿದರು.
ಸಭೆ ಕರೆದಿದ್ದ ಕಾರ್ಮಿಕ ಇಲಾಖೆ; ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿ, ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ, ಬೆಂಗಳೂರು ಇವರು ದಿನಾಂಕ 8/3/2023ರಂದು ಮುಷ್ಕರದ ನೋಟೀಸ್ ನೀಡಿದ್ದರು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ವ್ಯವಸ್ಥಾಪಕ ನಿರ್ದೇಶಕರುಗಳು ಕೆ.ಎಸ್.ಆರ್.ಟಿ.ಸಿ, ಬೆಂಗಳೂರು ಇವರು ಪತ್ರದಲ್ಲಿ ಕೋರಿದ್ದರು. ಆದ್ದರಿಂದ ಕಾರ್ಮಿಕ ಇಲಾಖೆ ಆಯುಕ್ತರು ಮಾರ್ಚ್ 20ರಂದು ಸಂಧಾನ ಸಭೆಯನ್ನು ಸಹ ಕರೆದಿದ್ದರು. ಕಾರ್ಮಿಕ ಸಂಘದವರು ಮುಷ್ಕರ ನೋಟೀಸ್ ನೀಡಿರುವ ಹಿನ್ನಲೆಯಲ್ಲಿ ಆಡಳಿತ ವರ್ಗ ಮತ್ತು ಕಾರ್ಮಿಕ ಸಂಘದವರ ನಡವೆ ವಿವಾದ ಉದ್ಭವಿಸಿದೆ ಎಂದು ಪರಿಗಣಿಸಿ, ಈ ಸಂಬಂಧ ಮಧ್ಯೆ ಪ್ರವೇಶಿಸುವುದು ಅವಶ್ಯವೆಂದು ಭಾವಿಸಿ ದಿನಾಂಕ 20/3/2023 ರಂದು ಮಧ್ಯಾಹ್ನ 2.30ಗಂಟೆಗೆ ರಾಜೀ ಸಂಧಾನ ಸಭೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಈ ಸಭೆಗೂ ಮುನ್ನವೇ ಮುಷ್ಕರ ವಾಪಸ್ ಪಡೆಯಲಾಗಿದೆ.












Click it and Unblock the Notifications