ಧುಮ್ಮಿಕ್ಕುತ್ತಿರುವ ಜಕ್ಕಲಮಡುಗು ಜಲಾಶಯದಲ್ಲಿ ಮಿಂದೇಳುತ್ತಿರುವ ಪ್ರವಾಸಿಗರು
ಚಿಕ್ಕಬಳ್ಳಾಪುರ,
ಅಕ್ಟೋಬರ್ 15: ರೈತರ ಜೀವನಾಡಿ, ಚಿಕ್ಕಬಳ್ಳಾಪುರ ನಗರದ ಜನತೆಯ ಜೀವಸೆಲೆಯಾಗಿರುವ ಜಕ್ಕಲಮಡುಗು ಜಲಾಶಯ ಭರ್ತಿಯಾಗಿ ಜಲಧಾರೆ ಸೃಷ್ಠಿಯಾಗಿದೆ. ಅದರಲ್ಲಿ ತಲೆಕೊಟ್ಟು ಮೀಯಲು, ಜಲಧಾರೆಯಾಗಿ ಧುಮ್ಮಿಕ್ಕುವುದನ್ನು ನೋಡಲೆಂದೇ ಜನ ಸಾಗರ ಹರಿದು ಬರುತ್ತಿದೆ. id="toptextpromo"> id='are-slot-1' class='oiad oi-axt oiadv'>ಮಕ್ಕಳು,
ಮಹಿಳೆಯರು, ವೃದ್ಧರಾದಿಯಾಗಿ ಎಲ್ಲರೂ ಇತ್ತ ದೌಡಾಯಿಸುತ್ತಿದ್ದು, ಒಂದು ರೀತಿಯ ಸಂಭ್ರಮ ಮನೆ ಮಾಡಿದೆ. ಕೆಲವರಿಗಂತು ಇದು ಪಿಕ್ನಿಕ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಪಟ್ಟಣದ ಗೌಜು ಗದ್ದಲದಲ್ಲಿದ್ದವರು ನಿಸರ್ಗದ ಮಡಿಲಲ್ಲಿ ಕೂತು ಧಾರೆಯಾಗಿ ಇಳಿಯುವ ಜಲವನ್ನು ಕಂಡು ಸಂಭ್ರಮಿಸುತ್ತಾ ಮೈಮನಸ್ಸು ಹಗುರ ಮಾಡಿಕೊಂಡು ಮನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. id='are-slot-2' class='oiad oi-axt oiadv'>
20 ವರ್ಷದ ನಂತರ ಭರ್ತಿಯಾದ ಜಲಾಶಯ
ಕಳೆದ ಇಪ್ಪತ್ತು ವರ್ಷಗಳಿಂದ ಈ ಜಲಾಶಯದತ್ತ ಇಷ್ಟೊಂದು ಸಂಖ್ಯೆಯಲ್ಲಿ ಜನ ಬಂದಿರಲಿಲ್ಲ. ಕಾರಣ ಈ ಜಲಾಶಯ ಭರ್ತಿಯಾಗಿರಲಿಲ್ಲ. ಆದರೆ ಈ ಬಾರಿಯ ಹಿಂಗಾರು ಮಳೆ ಜಕ್ಕಲಮಡುಗು ಜಲಾಶಯಕ್ಕೆ ಜೀವ ಕಳೆ ತುಂಬಿದ್ದು, ಜನರಲ್ಲಿ ಹುಮ್ಮಸ್ಸು, ರೈತರಲ್ಲಿ ಸಡಗರ ಸಂಭ್ರಮ ಮನೆ ಮಾಡುವಂತೆ ಮಾಡಿದೆ.

ನೀಗಿದ ಬರ
ಸದಾ ಬರಡಾಗಿದ್ದ ಜಲಾಶಯವನ್ನು ನೋಡಿದ್ದ ಮಂದಿ ಪ್ರತಿವರ್ಷವೂ ಭರ್ತಿಯಾಗುವುದನ್ನು ಜಾತಕ ಪಕ್ಷಿಯಂತೆ ಕಾಯುತ್ತಾ ಬಂದಿದ್ದರು. ಆದರೆ ಕಳೆದ ಇಪ್ಪತ್ತು ವರ್ಷಗಳಿಂದ ಒಂದಷ್ಟು ನೀರು ಸಂಗ್ರಹವಾಗುತ್ತಿತ್ತಾದರೂ ಭರ್ತಿಯಾಗಿರಲಿಲ್ಲ. ಆದರೆ ಈ ಬಾರಿಯ ಹಿಂಗಾರು ಮಳೆ ಜಲಾಶಯ ಭರ್ತಿಯಾಗುವಂತೆ ಮಾಡಿದ್ದು ಇದುವರೆಗೆ ಕಾಣಿಸಿಕೊಂಡಿದ್ದ ಬರ ನೀಗಿದಂತಾಗಿದೆ.

15 ದಿನದಿಂದ ಸುರಿಯುತ್ತಿರುವ ಮಳೆ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಜಕ್ಕಲಮಡುಗು ಜಲಾಶಯ ಮಾತ್ರವಲ್ಲದೆ ಈಗಾಗಲೇ ಬತ್ತಿ ಹೋಗಿದ್ದ ಬಹುತೇಕ ಕೆರೆಗಳು ಕೋಡಿ ಹರಿದಿದೆ. ಗುಡಿಬಂಡೆಕೆರೆ, ಬಾಗೇಪಲ್ಲಿ ಚಿತ್ರಾವತಿ, ಶಿಡ್ಲಘಟ್ಟ ಅಮಾನಿ ಬೈರಾಸಾಗರ, ಗೌರಿಬಿದನೂರು ಚಿತ್ರ ಪಿನಾಕಿನಿ ನದಿಗೂ ಸಾಕಷ್ಟು ನೀರು ಹರಿದು ಬರುತ್ತಿದ್ದು ಸಣ್ಣಪುಟ್ಟ ಕೆರೆಕಟ್ಟೆಗಳಿಗೆ ಜೀವ ಬಂದಂತಾಗಿದೆ.

ಅಲ್ಪ ಹಾನಿ, ಸಂಭ್ರಮದಲ್ಲಿ ಜನ
ಈ ನಡುವೆ ಕೆರೆಗಳು ಕೋಡಿ ಬಿದ್ದು, ಕೆಲವು ಕೆರೆಕಟ್ಟೆಗಳು ಒಡೆದು ಊರುಗಳಿಗೆ ನೀರು ನುಗ್ಗಿದ್ದರಿಂದ ಒಂದಷ್ಟು ನಷ್ಟವೂ ಸಂಭವಿಸಿದೆ. ಆದರೆ ಇದರ ನಡುವೆಯೂ ಎಲ್ಲರೂ ಬರದ ನಾಡಿನಲ್ಲಿ ನೀರು ತುಂಬಿರುವುದನ್ನು ಕಂಡು ಸಂತೋಷ ಪಡುತ್ತಿದ್ದು, ಮುಖದಲ್ಲಿ ಮಂದಹಾಸ ಮಿನುಗುತ್ತಿದೆ.












Click it and Unblock the Notifications