Tomato Price: ಟೊಮೆಟೊ ಬೆಲೆ ಮತ್ತೆ ಸಾವಿರ ರೂಪಾಯಿಗೆ ಏರಿಕೆ!
ಕೆಂಪು ಚಿನ್ನ ಟೊಮೆಟೊ ಬೆಲೆ ಕುಸಿಯಲು ಶುರುವಾಗಿದೆ ಎಂಬ ಭೀತಿ ನಡುವೆ ಕೃಷಿಕರಿಗೆ ಮತ್ತೊಮ್ಮೆ ಸಿಹಿಸುದ್ದಿ ಸಿಕ್ಕಿದೆ. ಕರ್ನಾಟಕದಲ್ಲಿ ಟೊಮೆಟೊ ಬೆಲೆ ದಿನದಿನಕ್ಕೂ ಕುಸಿತದ ಹಾದಿ ಹಿಡಿದಿತ್ತು, ಹೀಗಾಗಿ ರೈತರು ಚಿಂತೆಯಲ್ಲಿದ್ದರು. ಇನ್ನೇನು ಉತ್ತಮ ರೇಟ್ ಬಂತು ಅನ್ನುವಷ್ಟರಲ್ಲಿ ಟೊಮೆಟೊ ಬೆಲೆ ಕುಸಿದಿದ್ದು ಕೃಷಿಕರ ಚಿಂತೆಗೆ ಕಾರಣವಾಗಿತ್ತು. ಇದೀಗ ಅನ್ನದಾತರಿಗೆ ಸಿಹಿಸುದ್ದಿ ಸಿಕ್ಕಿದ್ದು, ಟೊಮೆಟೊ ಮತ್ತೆ ಭಾರಿ ಏರಿಕೆ ಕಾಣುತ್ತಿದೆ.
ಹೌದು ಕೆಂಪು ಚಿನ್ನವಾದ ಟೊಮೆಟೊ ಬೆಲೆ ಪಾತಾಳ ಸೇರುವ ಮುನ್ಸೂಚನೆ ಶುರುವಾಗಿತ್ತು. 14 ಕೆಜಿ ತೂಕದ ಬಾಕ್ಸ್ಗೆ 2500 ರೂಪಾಯಿ ಬೆಲೆ ಬಂದಿತ್ತು. ಆದರೆ ದಿಢೀರ್ ಬೆಲೆ ಕುಸಿತದ ಹಿನ್ನೆಲೆ ರೈತರು ಕಂಗಾಲಾಗಿದ್ದರು. ಕಳೆದ ಸೋಮವಾರ ಕುಸಿತದ ಹಾದಿ ಹಿಡಿದ ಟೊಮೆಟೊ ಬೆಳೆ ಮೊದಲಿಗೆ ₹1700 ರೂಪಾಯಿಗೆ ಕುಸಿದಿತ್ತು. ಮರುದಿನ ಬೆಲೆ ₹1550ಕ್ಕೆ ಕುಸಿತ ಕಂಡಿತ್ತು. 1200 ರೂಪಾಯಿಗೆ ಬಿದ್ದ ಬೆಲೆ ಮೊನ್ನೆ 800 ರೂಪಾಯಿಗೆ ಬಂದು ನಿಂತಿತ್ತು. ನಿನ್ನೆ 14 ಕೆಜಿ ತೂಕದ ಟೊಮೆಟೊ ಬಾಕ್ಸ್ ಗರಿಷ್ಠ 950 ರೂಪಾಯಿ ಬೆಲೆ ತಲುಪಿ ಮತ್ತೆ ಪುಟಿದೆದ್ದು ಇಂದು ಮತ್ತೆ ಸಾವಿರ ರೂಪಾಯಿ ಗಡಿ ದಾಟಿ ಗರಿಷ್ಠ 1030 ರೂಪಾಯಿಗೆ ಮಾರಾಟವಾಗಿದೆ.

ಬೆಲೆ ಬಿದ್ದರೆ ಸಾಲದ ಸುಳಿ ಪಕ್ಕಾ!
ಹೀಗೆ ಟೊಮೆಟೊ ಬೆಲೆ ಮತ್ತೆ ರೈತರಿಗೆ ಬಲ ನೀಡುತ್ತಿದೆ. ದೇಶದ ವಿವಿಧೆಡೆ ಕರ್ನಾಟಕ & ದಕ್ಷಿಣ ಭಾರತದ ಟೊಮೆಟೊಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಮತ್ತೊಮ್ಮೆ ಟೊಮೆಟೊಗೆ ಚಿನ್ನದ ಬೆಲೆ ಬರುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಸುರಿದು ಈ ಬೆಳೆ ಬೆಳೆದಿದ್ದ ಕೃಷಿಕರಿಗೆ ಮತ್ತೆ ಕೆಂಪು ಚಿನ್ನ ಕೈಹಿಡಿಯುವ ನಿರೀಕ್ಷೆ ಇದೆ. ಆದರೆ ಬೆಲೆ ಇದೇ ರೀತಿ ಮುಂದುವರಿದರೆ ಸಾಕು. ಇಲ್ಲವಾದರೆ ಮತ್ತೆ ರೈತರು ಸಾಲದ ಸುಳಿಗೆ ಸಿಲುಕಿ ನರಳುವ ಪರಿಸ್ಥಿತಿ ಬರಲಿದೆ. ಹೀಗಾಗಿ ಟೊಮೆಟೊ ಬೆಲೆ ಸ್ಥಿತರವಾಗಿರಲಿ ಅಂತಾ ರೈತರು ದೇವರನ್ನು ಬೇಡಿಕೊಳ್ಳುವ ವಾತಾವರಣ ಇದೆ.
ಟೊಮೆಟೊ ಬಳಿಕ ಈರುಳ್ಳಿ ಏಟು?
ದೇಶದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆ ಲಸಲಗಾಂವ್ ಎಪಿಎಂಸಿಯಲ್ಲಿ ಈರುಳ್ಳಿಯ ಬೆಲೆ ಗಗನಕ್ಕೆ ಏರಿದೆ. ಮಹಾರಾಷ್ಟ್ರದ ಈ ಮಾರುಕಟ್ಟೆಯಲ್ಲಿ ಸರಾಸರಿ ಸಗಟು ಬೆಲೆ ಕೇವಲ ಒಂದು ವಾರದಲ್ಲಿ ಶೇಕಡಾ 48ರಷ್ಟು ಹೆಚ್ಚಾಗಿದ್ದು, ಈರುಳ್ಳಿ ಕಣ್ಣೀರು ಹಾಕಿಸುವ ಸೂಚನೆ ನೀಡಿದೆ. ಅಂದಹಾಗೆ ಆಗಸ್ಟ್ 4ಕ್ಕೆ ಈರುಳ್ಳಿ ದರ ಪ್ರತಿ ಕ್ವಿಂಟಲ್ಗೆ 1550 ರೂಪಾಯಿ ಇತ್ತು. ಆದರೆ ಇದೇ ಶುಕ್ರವಾರ ಅಂದ್ರೆ ಆಗಸ್ಟ್ 11ರಂದು ಈರುಳ್ಳಿ ರೇಟ್ ಪ್ರತಿ ಕ್ವಿಂಟಲ್ಗೆ 2,300 ರೂಪಾಯಿ ತಲುಪಿದೆ. ಈ ಮೂಲಕ ಕಳೆದ ಎಂಟು ತಿಂಗಳಲ್ಲಿ ದಾಖಲಾದ ಗರಿಷ್ಠ ಸರಾಸರಿ ಸಗಟು ಈರುಳ್ಳಿ ಬೆಲೆ ಇದಾಗಿದೆ. ಡಿಸೆಂಬರ್ನಲ್ಲಿ ಕ್ವಿಂಟಲ್ಗೆ 2,311 ರೂಪಾಯಿ ತಲುಪಿತ್ತು ಈರುಳ್ಳಿ.
ಈರುಳ್ಳಿ ಬೆಲೆ ಏರಿಕೆಗೆ ಕಾರಣವೇನು?
ದೇಶದಲ್ಲಿ ಟೊಮೆಟೊ ಮತ್ತು ಈರುಳ್ಳಿ ಇಲ್ದೆ ಅಡುಗೆ ಮಾಡಲು ಆಗಲ್ಲ. ಯಾಕಂದ್ರೆ ಈ ಬೆಳೆಗಳೇ ಅಡುಗೆಗೆ ಆಧಾರ. ಅಕಸ್ಮಾತ್ ಟೊಮೆಟೊ ಅಥವಾ ಈರುಳ್ಳಿ ಬೆಳೆ ಮಾರುಕಟ್ಟೆಗೆ ಬರುವುದು ತಡವಾದರೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ. ಈಗಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಈಗ ಬಿತ್ತನೆ ಚಟುವಟಿಕೆಯಲ್ಲಿ ನಿರತರಾಗಿದ್ದು, ಲಾಸಲ್ಗಾಂವ್ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದ ಈರುಳ್ಳಿ ಭಾರಿ ಕುಸಿತ ಕಂಡಿದೆ. ಸಾಮಾನ್ಯವಾಗಿ ನಿತ್ಯ 20,000ದಿಂದ 25,000 ಕ್ವಿಂಟಲ್ ಈರುಳ್ಳಿ ಮಹಾರಾಷ್ಟ್ರದ ಲಾಸಲ್ಗಾಂವ್ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈಗ ಕೇವಲ 15,000 ಕ್ವಿಂಟಲ್ ಬರುತ್ತಿದ್ದು, ಬೆಲೆ ಭಾರಿ ಏರುತ್ತಿದೆ.

ಹೀಗೆ ಜನರಿಗೆ ಟೊಮೆಟೊ ಮತ್ತು ಈರುಳ್ಳಿ ಬೆಲೆ ಏರಿಕೆಯದ್ದೇ ಟೆನ್ಷನ್ ಶುರುವಾಗಿದೆ. ಈ ಕಾರಣಕ್ಕೆ ಸರ್ಕಾರ ಸೂಕ್ತ ಬೆಲೆ ನಿರ್ಧಾರ ಮಾಡಲಿ, ಆ ಮೂಲಕ ಬೆಲೆ ಆಕಾಶ ಮುಟ್ಟಿ ಪರದಾಡುವ ಪರಿಸ್ಥಿತಿ ತಪ್ಪಿಸಲಿ ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಬೆಲೆ ಏರಿಳಿತ ಇದೀಗ ಮಾಮೂಲಿ ಆಗಿದ್ದು, ಈರುಳ್ಳಿ ಬೆಲೆ ಕೂಡ ಶತಕದ ಗಡಿ ದಾಟುವ ನಿರೀಕ್ಷೆ ಇದೆ.












Click it and Unblock the Notifications