ಮಹದಾಯಿ ವಿವಾದ ಇತ್ಯರ್ಥಕ್ಕೆ ಗೋವಾ ಸಿಎಂ ಗೆ ಪತ್ರ : ಎಂ ಬಿ ಪಾಟೀಲ್
ಕಳಸಾ-ಬಂಡೂರಿ, ಮಹದಾಯಿ ವಿವಾದ ಇತ್ಯರ್ಥಕ್ಕೆ ಗೋವಾ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವುದಾಗಿ ನೀರಾವರಿ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಬೆಂಗಳೂರು, ಮಾರ್ಚ್ 14: ಕಳಸಾ-ಬಂಡೂರಿ, ಮಹದಾಯಿ ವಿವಾದ ಇತ್ಯರ್ಥಕ್ಕೆ ಗೋವಾ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವುದಾಗಿ ನೀರಾವರಿ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
"ಈವರೆಗೆ ಕಳಸಾ-ಬಂಡೂರಿ, ಮಹಾದಾಯಿ ವಿವಾದ ಇತ್ಯರ್ಥಕ್ಕೆ ಗೋವಾ ಚುನಾವಣೆ ಅಡ್ಡಿಯಾಗಿತ್ತು. ಅಲ್ಲಿ ಈಗ ಹೊಸ ಸರ್ಕಾರ ರಚನೆಯಾಗುತ್ತಿರುವುದರಿಂದ ಮತ್ತೆ ಗೋವಾ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುತ್ತೇವೆ," ಎಂದು ಅವರು ಹೇಳಿದ್ದಾರೆ.[LIVE: ಮೂರನೇ ಬಾರಿಗೆ ಗೋವಾ ಸಿಎಂ ಆಗಿ ಪರಿಕ್ಕರ್ ಪ್ರಮಾಣ ವಚನ]
"ಗೋವಾ ಮುಖ್ಯಮಂತ್ರಿಯವರನ್ನು ಕರೆಯಿಸಿ ಮಾತುಕತೆ ಮಾಡುವಂತೆ ಪ್ರಧಾನ ಮಂತ್ರಿಯವರಿಗೆ ಮತ್ತೆ ವಿನಂತಿ ಮಾಡುತ್ತೇವೆ. ಕೇಂದ್ರ ಜಲ ಆಯೋಗ ಮಹದಾಯಿಯಲ್ಲಿ 199ಟಿಎಂಸಿ ನೀರು ಇರುವುದನ್ನು ದೃಢೀಕರಿಸಿದೆ. ಅದರಲ್ಲಿ ನಮಗೆ 15 ಟಿಎಂಸಿ ನೀರು ಮಾತ್ರ ಬಂದರೆ, ಉಳಿದದ್ದೆಲ್ಲವೂ ಗೋವಾ ರಾಜ್ಯಕ್ಕೆ ಸಿಗುತ್ತದೆ. ಇದರಿಂದ ಗೋವಾ ರಾಜ್ಯಕ್ಕೂ ಲಾಭ ಇರುವುದನ್ನು ಅಲ್ಲಿನ ಸರ್ಕಾರ ಅರಿಯ ಬೇಕಿದೆ," ಎಂದು ಸಚಿವರು ಹೇಳಿದರು.
ಗೋವಾ ರಾಜ್ಯದಲ್ಲಿ ಹೊಸ ಸರ್ಕಾರ ಬಂದ ನಂತರ ನ್ಯಾಯಾಧೀಕರಣದ ನಿರ್ದೇಶನದ ಮೇರೆಗೆ ಮತ್ತೆ ಮಾತುಕತೆಗೆ ಮುಂದಾಗುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.[ಅಂತಿಮ ಫಲಿತಾಂಶ: ಗೋವಾ ಅತಂತ್ರ, ಮುಂದೇನಾಗಬಹುದು?]
ನೀರು ಬಿಡಲ್ಲ ಎಂದಿದ್ದರಂತೆ ಪರಿಕ್ಕರ್
ಇದೇ ವೇಳೆಗೆ ಗೋವಾದ ನಿಯೋಜಿತ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಈ ಹಿಂದೆ ನೀಡಿದ್ದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Congratulations to Goa CM Sri @manoharparrikar. Confident that under Your leadership Goa will prosper & Mahadayi dispute will be resolved. pic.twitter.com/Xng8saEXME
— C.T.Ravi (@CTRavi_BJP) March 13, 2017
ಪರಿಕ್ಕರ್ ಮುಖ್ಯಮಂತ್ರಿಯಾಗಿದ್ದ ವೇಳೆ, ಮಹಾದಾಯಿ ಗೋವಾದ ಜೀವ ನದಿ. ಈ ನೀರನ್ನು ಕರ್ನಾಟಕಕ್ಕೆ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಹೋರಾಟಕ್ಕೂ ನಾವು ಸಿದ್ಧ ಎಂದು ಪರಿಕ್ಕರ್ ಹೇಳಿದ್ದರು. ಗೋವಾ ರಾಜ್ಯದ ಹೆಚ್ಚಿನ ಕೃಷಿಕರು ಮಹಾದಾಯಿ ನೀರನ್ನು ಅವಲಂಬಿಸಿದ್ದಾರೆ ಹೀಗಾಗಿ ಕರ್ನಾಟಕಕ್ಕೆ ಯಾವುದೇ ಕಾರಣಕ್ಕೂ ಮಹಾದಾಯಿ ನೀರು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಚರ್ಚೆಗೆ ಗ್ರಾಸವಾದ ಸಿಟಿ ರವಿ ಟ್ವೀಟ್
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಧನ್ಯವಾದಗಳು. ನಿಮ್ಮ ನಾಯಕತ್ವದಲ್ಲಿ ಗೋವಾ ಮತ್ತಷ್ಟು ಅಭಿವೃದ್ಧಿಯಾಗುವ ಹಾಗೂ ಮಹಾದಾಯಿ ವಿವಾದ ಬಗೆಹರಿಯುವ ಭರವಸೆ ಇದೆ ಎಂದು ಬಿಜೆಪಿ ನಾಯಕ ಸಿಟಿ ರವಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಟ್ವಟ್ಟರಿನಲ್ಲಿ ಭಾರೀ ಪ್ರತಿಕ್ರಿಯೆಗಳು ಬಂದಿವೆ.