ಕಾಂಗ್ರೆಸ್ ಪಾದಯಾತ್ರೆಗೆ ಕೆರಳಿದ ಬಿಜೆಪಿಯಿಂದ ಅ.30ಕ್ಕೆ ಬೃಹತ್ ಒಬಿಸಿ ಜಾಗೃತಿ ಸಮಾವೇಶ
ಬೆಂಗಳೂರು, ಅಕ್ಟೋಬರ್ 04: ಸಿದ್ದರಾಮೋತ್ಸವ ಮತ್ತು ಭಾರತ್ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ನ ಬೃಹತ್ ಶಕ್ತಿ ಪ್ರದರ್ಶನವು ಬಿಜೆಪಿಯನ್ನು ಕೆರಳಿಸಿದೆ. ಹೀಗಾಗಿಯೇ ಎಂಬಂತೆ ಬಿಜೆಪಿಯು ಅಕ್ಟೋಬರ್ 30ರಂದು ಕಲ್ಯಾಣ ಕರ್ನಾಟಕ ಭಾಗವಾದ ಕಲಬುರಗಿಯಲ್ಲಿ ಬೃಹತ್ 'ವಿರಾಟ್ ಒಬಿಸಿ ಜಾಗೃತಿ ಸಮಾವೇಶ' ರ್ಯಾಲಿ ಹಮ್ಮಿಕೊಳ್ಳಲು ಯೋಜನೆ ರೂಪಿಸಿದೆ.
ಕಾಂಗ್ರೆಸ್ನಿಂದ ಈಗಾಗಲೇ ನಡೆದಿರುವ ಸಿದ್ದರಾಮೋತ್ಸವ, ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ, ಫ್ರೀಡಂ ಮಾರ್ಚ್ ಎಲ್ಲವುಗಳಲ್ಲೂ ಲಕ್ಷಾಂತರ ಜನ ಸೇರಿದ್ದರು. ದಾವಣಗೆರೆಯಲ್ಲಿ ನಡೆದ ವಿರೋಧ ಪಕ್ಷದ ನಾಯಕರ ಹುಟ್ಟು ಹಬ್ಬದಾಚರಣೆಯ ಸಿದ್ದರಾಮೋತ್ಸವದಲ್ಲಿ ಸುಮಾರು ನಾಲ್ಕು ಲಕ್ಷ ಮಂದಿ ಸೇರಿದ್ದರು. ಇದೀಗ ಕರ್ನಾಟಕದ ಜನರು ಭಾರತ್ ಜೋಡೋ ಯಾತ್ರೆಗೆ ಸಾಕ್ಷಿಯಾಗಿದ್ದಾರೆ.
ವಿಧಾನಸಭೆ ಚುನಾವಣೆ ಸಮೀಸುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ನ ಪಾದಯಾತ್ರೆಗಳು ಬಿಜೆಪಿಯ ನಿದ್ದೆಗೆಡಿಸಿದಂತಿದೆ. ಈ ಕಾರಣಕ್ಕೆ ಕಲಬುರಗಿಯಲ್ಲಿ ಹಿಂದುಳಿದ ವರ್ಗದ ಸಮುದಾಯದವರನ್ನು ಗುರಿಯಾಗಿಸಿಕೊಂಡು ಬೃಹತ್ ಸಮಾವೇಶ ಆಯೋಜಿಸಲಿದೆ. ಇದರಲ್ಲಿ ಐದು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇತ್ತ ಕರ್ನಾಟಕದಲ್ಲಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯ ಮೂಲಕ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶನ ಮಾಡುತ್ತಿದೆ.

ಜಾಗೃತಿ ಸಮಾವೇಶ ವಾಸ್ತವವನ್ನು ಹೇಳಲಿದೆ
ಕಾಂಗ್ರೆಸ್ ಆಯೋಜಿಸುವ ಕಾರ್ಯಕ್ರಮ, ಪಾದಯಾತ್ರೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ಸಮಾವೇಶದಲ್ಲಿ ಎಷ್ಟು ಜನ ಪಾಲ್ಗೊಂಡಿದ್ದರು ಎಂಬುದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಬಿಜೆಪಿ ಕಲಬುರಗಿಯಲ್ಲಿ ಆಯೋಜಿಸುತ್ತಿರುವ ರ್ಯಾಲಿಗಳು ವಾಸ್ತವವನ್ನು ಪ್ರತಿಬಿಂಬಿಸುತ್ತವೆ. ಮುಖ್ಯವಾಗಿ ಕರ್ನಾಟಕದಲ್ಲಿ ಬಿಜೆಪಿಗೆ ಎಷ್ಟು ಬೆಂಬಲವಿದೆ ಎಂಬುದನ್ನು ಸಾಬೀತುಪಡಿಸಲಿದೆ ಎಂದು ಬಿಜೆಪಿಯ ಮುಖಂಡ ನಿರ್ಮಲ್ ಕುಮಾರ್ ಸುರಾನ ತಿಳಿಸಿದ್ದಾರೆ.

ಕಾಂಗ್ರೆಸ್ಗೆ ಆರಂಭಿಕ ಮುನ್ನಡೆ?
ಮುಂದಿನ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಜನರ ಗಮನ ಸೆಳೆಯುವಲ್ಲಿ ಆರಂಭಿಕ ಮುನ್ನಡೆ ಸಾಧಿಸಿರಬಹುದು. ಸಿದ್ದರಾಮಯ್ಯನವರ ಹುಟ್ಟುಹಬ್ಬದ ಆಚರಣೆ ಮತ್ತು ಭಾರತ್ ಜೋಡೋ ಯಾತ್ರೆಯ ಜೊತೆಗೆ, ಆಗಸ್ಟ್ 15 ರಂದು ಕಾಂಗ್ರೆಸ್ ಬೆಂಗಳೂರಿನಲ್ಲಿ ಸ್ವಾತಂತ್ರ್ಯ ನಡಿಗೆ (ಫ್ರೀಡಂ ಮಾರ್ಚ್) ಮತ್ತು ಮಾರ್ಚ್ನಲ್ಲಿ ನಡೆದ ಮೇಕೆದಾಟು ಪಾದಯಾತ್ರೆಯಲ್ಲೂ ಸಹ ಭಾರಿ ಜನಸ್ತೋಮ ಕಂಡು ಬಂದಿತ್ತು. ಈ ಬಗ್ಗೆ ಬಿಜೆಪಿ ಅರಿವಿದೆ ಎನ್ನಲಾಗಿದೆ.

ಕಾಂಗ್ರೆಸ್ ಕಾರ್ಯಕರ್ತರಲ್ಲಿ ಚೈತನ್ಯ
ಈ ಹಿಂದೆ ನಡೆದ ಮೇಕೆದಾಟು ಮತ್ತು ಫ್ರೀಡಂ ಮಾರ್ಚ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಾರಥಿಯಾಗಿದ್ದರು. ಇದೀಗ ಸದ್ಯ ಚಾಲ್ತಿಯಲ್ಲಿರುವ ಭಾರತ್ ಜೋಡೋ ಯಾತ್ರೆಯ ಮುಖ್ಯಸ್ಥರಾಗಿ ರಾಹುಲ್ ಉಪಸ್ಥಿತಿ ಇದ್ದು, ಇದು ಕಾಂಗ್ರೆಸ್ ಸಾಕಷ್ಟು ಬಲವನ್ನು ನೀಡಿದೆ. ಇದರಿಂದ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಚೈತನ್ಯ ಮೂಡಿಸಿದೆ.
ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿಯು ಈ ತಿಂಗಳಾಂತ್ಯಕ್ಕೆ ಹಮ್ಮಿಕೊಳ್ಳಲು ಉದ್ದೇಶಿರುವ ಬೃಹತ್ 'ವಿರಾಟ್ ಒಬಿಸಿ ಜಾಗೃತಿ ಸಮಾವೇಶ' ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಕುರಿತು ಚರ್ಚೆಗಳು ನಡೆದಿವೆ ಎಂದು ತಿಳಿದು ಬಂದಿದೆ.

ಜಾಗೃತಿ ಸಮಾವೇಶದಲ್ಲಿ ಪ್ರಧಾನಿ ಭಾಗಿ ಸಾಧ್ಯತೆ
ನಾವು ರಾಷ್ಟ್ರೀಯ ನಾಯಕತ್ವದೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ. ಅಂದಿನ ಜಾಗೃತಿ ಸಮಾವೇಶದಲ್ಲಿ ಪ್ರಧಾನಿಗಳು ಭಾಗವಹಿಸಬೇಕು ಎಂಬದು ಅನೇಕರ ಅಭಿಪ್ರಾಯವಾಗಿದೆ. ಇದು ಎಲ್ಲಾ 205 ಒಬಿಸಿ ಸಮುದಾಯಗಳನ್ನು ಒಟ್ಟುಗೂಡಿಸುವ ಮೊದಲ ಪ್ರಯತ್ನವಾಗಿರುವುದರಿಂದ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಆದರೆ ಪ್ರಧಾನಿ ಭಾಗವಹಿಸುವ ಬಗ್ಗೆ ಈವರಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ಬಿಜೆಪಿ ಓಬಿಸಿ ಮೋರ್ಚಾದ ಅಧ್ಯಕ್ಷ ನೇ.ಲ ನರೇಂದ್ರ ಬಾಬು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಒಬಿಸಿ ಸಮುದಾಯಗಳ ಪೈಕಿ ಒಟ್ಟು 54ರಷ್ಟು ಮತದಾರರು ಇದ್ದಾರೆ. ಈ ವರ್ಗದವರ ಬೆಂಬಲವನ್ನು ಕ್ರೋಢೀಕರಿಸಲು ಬಿಜೆಪಿಯ ಮೊದಲ ಬಾರಿಗೆ ಗಂಭೀರ ಪ್ರಯತ್ನ ಮಾಡುತ್ತಿದೆ.












Click it and Unblock the Notifications