Karnataka Elections: ಆಡಳಿತ ವಿರೋಧಿ ಅಲೆ ಎದುರಿಸಲು 'ಗುಜರಾತ್ ಮಾದರಿ' ಆಶ್ರಯಿಸಿದ ಬಿಜೆಪಿ? 25 ಹಾಲಿಗಳಿಗೆ ಕೊಕ್?
ಬೆಂಗಳೂರು, ಏಪ್ರಿಲ್ 10: ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ಮುನ್ನವೇ ಬಿಜೆಪಿಗೆ ( BJP ) ಸಂಕಷ್ಟ ಶುರುವಾಗಿದೆ. 40 ಪರ್ಸೆಂಟ್ ಕಮಿಷನ್ ಹಾಗೂ ಭ್ರಷ್ಟಾಚಾರದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಆಡಳಿತಾರೂಢ ಬಿಜೆಪಿ, ಅಧಿಕಾರ ವಿರೋಧಿ ಅಲೆಯನ್ನು ಎದುರಿಸುತ್ತಿರುವುದು ಸ್ಪಷ್ಟವಾಗಿದೆ. ಇದನ್ನು ನಿಭಾಯಿಸಲು 'ಗುಜರಾತ್ ಮಾದರಿ'ಗೆ ಬಿಜೆಪಿ ನಾಯಕರು ಮೊರೆ ಹೋಗಬಹುದು ಎಂಬುದನ್ನು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.
ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್ ನೀಡುವತ್ತ ಬಿಜೆಪಿ ಗಮನಹರಿಸುತ್ತಿದೆ. ಗುಜರಾತ್ ಮಾದರಿಯನ್ನು ಅನುಸರಿಸಿ ಪಕ್ಷವು ಕನಿಷ್ಠ 25 ಹಾಲಿ ಶಾಸಕರನ್ನು ಕೈಬಿಡಬಹುದು ಎಂದು ಮೂಲಗಳು ತಿಳಿಸಿವೆ. ಗುಜರಾತ್ನಲ್ಲಿ, ಡಿಸೆಂಬರ್ 2022 ರ ಚುನಾವಣೆಗೆ ಮುಂಚಿತವಾಗಿ, ಪಕ್ಷವು ಸುಮಾರು 40 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿತ್ತು.

ಕರ್ನಾಟಕದಲ್ಲಿ ಬಿಜೆಪಿ ಈ ನಿರ್ಧಾರಕ್ಕೆ ಕಾರಣವಾಗಿರುವುದು ರಾಜಕೀಯ ಪಕ್ಷಗಳು ಮತ್ತು ರಾಜಕೀಯೇತರ ಸಂಸ್ಥೆಗಳ ವಿವಿಧ ಸಮೀಕ್ಷೆಗಳು. ಈ ಚುನಾವಣೆಯಲ್ಲಿ ಬಿಜೆಪಿಗೆ ಜನಾದೇಶ ಸಿಗುವುದು ಕಷ್ಟವೆಂಬುದನ್ನು ಸಮೀಕ್ಷೆಗಳು ಹೇಳಿವೆ ಎಂದು ಮೂಲಗಳು ತಿಳಿಸಿವೆ.
ಕೊನೆಯ ಪ್ರಯತ್ನವಾಗಿ, ಪಕ್ಷವು 113 ಸ್ಥಾನಗಳ ಮ್ಯಾಜಿಕ್ ಸಂಖ್ಯೆಗಳನ್ನು ದಾಟಲು ಮತ್ತು ಸರ್ಕಾರವನ್ನು ರಚಿಸಲು ಹೊಸ ತಂತ್ರಗಳನ್ನು ರೂಪಿಸಬಹುದು. ಹೊಸ ಮುಖಗಳನ್ನು ಕಣಕ್ಕಿಳಿಸುವುದು ಅವುಗಳಲ್ಲಿ ಒಂದಾಗಿದೆ ಎಂದು ಪಕ್ಷದ ಆಂಕರಿಕ ಮೂಲಗಳು ಹೇಳಿವೆ.

ಶನಿವಾರ ಮತ್ತು ಭಾನುವಾರ ನವದೆಹಲಿಯಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರದ ಬಿಜೆಪಿ ನಾಯಕರು ಭಾಗವಹಿಸಿದ್ದರು. ಅದರಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಇತರರಿದ್ದರು.
ಪಕ್ಷವು ಸೋಮವಾರ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ ಮತ್ತು ಈಗಾಗಲೇ 80-85 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಜ್ಯಾದ್ಯಂತ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಯುವ ಮತ್ತು ಹೊಸ ಮುಖಗಳಿಗೆ ಟಿಕೆಟ್ ನೀಡಲು ಬಿಜೆಪಿ ಚಿಂತಿಸುತ್ತಿದೆ.

ಗುಜರಾತ್ ನಲ್ಲಿ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಣಕ್ಕಿಳಿದಿದ್ದ ಬಹುತೇಕ ಹೊಸಬರು ಗೆದ್ದಿದ್ದಾರೆ. ಗುಜರಾತ್ ಮಾದರಿ ಕರ್ನಾಟಕದಲ್ಲಿ ಕೆಲಸ ಮಾಡದಿರಬಹುದು ಎಂದು ಮೊದಲು ಭಾವಿಸಲಾಗಿತ್ತು. ಆದರೆ ಪಕ್ಷವು 100 ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯಬಹುದು ಎಂದು ವಿವಿಧ ಸಮೀಕ್ಷೆಗಳು ಹೇಳಿವೆ.
ಈ ಹಿನ್ನೆಲೆಯಲ್ಲಿ ತಜ್ಞರು ಮತ್ತು ಪಕ್ಷದ ವರಿಷ್ಠರು ಕೆಲವು ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ಸೂಚಿಸುತ್ತಿದ್ದಾರೆ. ಆ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಇದೆ ಎಂದು ತಿಳಿದುಬಂದಿದೆ. ಆ ಸ್ಥಾನಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಇದಾಗಿದೆ' ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬುದು ಪಕ್ಷದ ಕಾರ್ಯಕರ್ತರ ಆಶಯವಾಗಿದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
'ನಾವು ಬಿಜೆಪಿಯನ್ನು ಕೇಡರ್ ಆಧಾರಿತ ಪಕ್ಷ ಎಂದು ಮಾತನಾಡುತ್ತೇವೆ. ನಮ್ಮ ಕೆಲವು ಶಾಸಕರಿಗೆ 70 ವರ್ಷ ದಾಟಿದೆ. ಸಚಿವರಾಗಿ ಸೇವೆ ಸಲ್ಲಿಸಿದ್ದರೂ ಚುನಾವಣೆಗೆ ಸ್ಪರ್ಧಿಸಲು ಬಯಸುತ್ತಿದ್ದಾರೆ. ಪಕ್ಷಕ್ಕಾಗಿ ದುಡಿಯುತ್ತಿರುವ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೆ ನಮಗೆ ಸಂತೋಷವಾಗುತ್ತದೆ' ಎಂದು ಹೆಸರು ಹೇಳಲಿಚ್ಛಿಸದ ಪಕ್ಷದ ಕಾರ್ಯಕರ್ತರೊಬ್ಬರು 'ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ' ತಿಳಿಸಿದ್ದಾರೆ.












Click it and Unblock the Notifications