ಹೊಸಕೋಟೆ ಬಸ್ ಅಪಘಾತ: ಮೃತರ ಸಂಖ್ಯೆ 5ಕ್ಕೆ
ಹೊಸಕೋಟೆ, ಜ.20- ತಿರುಪತಿ-ಬೆಂಗಳೂರು ಬಸ್ ಹೊಸಕೋಟೆ ಬಳಿ ಅಪಘಾತಕ್ಕೀಡಾದ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಗಾಯಾಳುಗಳನ್ನು ಸಂತೈಸಿದರು. ಮೃತರ ಕುಟುಂಬಗಳಿಗೆ ತಲಾ 1 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಮೃತರನ್ನು ಬೆಂಗಳೂರಿನ ಈಜೀಪುರದ ಮನಸ್ ಕುಮಾರ್ (6), ನೆಲ್ಲೂರು ಮೂಲದ ಅನುಷಾ (25), ಪ್ರಸಾದ್ ಚಿನ್ನಂ, ವಿಜಯಕುಮಾರ್ (35) ಎಂದು ಗುರುತಿಸಲಾಗಿದೆ.
ಅಫಘಾತದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೇರಿದೆ. ತೀವ್ರವಾಗಿ ಗಾಯಗೊಂಡಿದ್ದ ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬೆಳಗಿನ ಸುದ್ದಿ: ಬೆಳಗಿನ ಜಾವ ಮತ್ತೊಂದು ಭೀಕರ ಬಸ್ ದುರಂತ ಸಂಭವಿಸಿದೆ. ನಿನ್ನೆ ರಾತ್ರಿ ತಿರುಪತಿಯಿಂದ ಹೊರಟು ಬೆಂಗಳೂರಿಗೆ ಬರುತ್ತಿದ್ದ ಬಸ್ ಹೊಸಕೋಟೆ ಬಳಿ MVJ College ಬಳಿ ಅಪಘಾತಕ್ಕೀಡಾಗಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅತಿ ವೇಗವೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.

ಹೊಸಕೋಟೆಯಿಂದ ಕೋಲಾರಕ್ಕೆ ತೆರಳುವ ಮಾರ್ಗದಲ್ಲಿ ದಂಡುಪಾಳ್ಯ ಕ್ರಾಸ್ ಸಮೀಪ ಈ ಅಪಘಾತ ಸಂಭವಿಸಿದೆ. ರಾಜೇಶ್ ಟ್ರಾವೆಲ್ಸ್ ಗೆ ಸೇರಿದ ವೋಲ್ವೋ ಬಸ್ಸು ವೋಲ್ವೋ ಫ್ಯಾಕ್ಟರಿ ಬಳಿ ರೋಡ್ ಡಿವೈಡರ್ ಗೆ ಡಿಕ್ಕಿಯಾಗಿ ಕಂದಕಕ್ಕೆ ಉರುಳಿ ಅಪಘಾತಕ್ಕೆ ತುತ್ತಾಗಿದೆ. ರಾತ್ರಿ 10.30ಕ್ಕೆ ಹೊರಟ ಬಸ್ ಬೆಳಗಿನ ಜಾವ 4.30ರಲ್ಲಿ ಅಪಘಾತಕ್ಕೀಡಾಗಿದೆ.
ಬಸ್ಸಿನಲ್ಲಿ 50 ಮಂದಿ ಪ್ರಯಾಣಿಸುತ್ತಿದ್ದರು. ಅನೇಕರಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಅಂದಾಜಿದೆ. ತಕ್ಷಣಕ್ಕೆ ಬಸ್ ಡೋರ್ ತೆಗೆಯಲು ಸಾಧ್ಯವಾಗದೆ ಪ್ರಯಾಣಿಕರನ್ನು ಹೊರತೆಗೆಯಲು ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಬಸ್ಸಿನ ಡೋರ್ ಇದ್ದ ಭಾಗ ನೆಲಭಾಗಕ್ಕೆ ಅವಚಿಕೊಂಡಿದೆ. ಇದು ಎಸಿ ವೋಲ್ವೋ ಬಸ್ ಆಗಿದ್ದರಿಂದ ಒಂದೇ ಡೋರ್ ಇದ್ದು, ಚಾಲಕನ ಬಳಿಯಿದ್ದ ಚಿಕ್ಕ ಡೋರಿನಿಂದ ಪ್ರಯಾಣಿಕರು ಹೊರಬಂದಿದ್ದಾರೆ.












Click it and Unblock the Notifications