Breaking:ಕರ್ನಾಟಕದಲ್ಲಿ ಮೂರು ಶಂಕಿತ ಮಂಕಿಪಾಕ್ಸ್: ಸುಧಾಕರ್
ಬೆಂಗಳೂರು ಆಗಸ್ಟ್ 02: ಭಾರತದಲ್ಲಿ ಮಂಕಿಪಾಕ್ಸ ಸೋಂಕಿಗೆ ಜುಲೈ 31ರಂದು ಮೊದಲ ಬಲಿಯಾದ ಬೆನ್ನಲ್ಲೆ ಇದೀಗ ಕರ್ನಾಟಕದಲ್ಲಿ ಮೂರು ಶಂಕಿತ ಮಂಕಿಪಾಕ್ಸ್ ಪ್ರಕರಣಗಳು ಇವೆ ಎಂದು ಸ್ವತಃ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಮಂಕಿಪಾಕ್ಸ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, "ಕರ್ನಾಟಕ ರಾಜ್ಯದಲ್ಲಿ ಈವರೆಗೆ ಮಂಕಿಪಾಕ್ಸ ಪ್ರಕರಣಗಳು ದಾಖಲಾಗಿಲ್ಲ. ಆದರೆ ಮೂರು ಶಂಕಿತ ಪ್ರಕರಣಗಳು ಗುರುತಿಸಲಾಗಿತ್ತು. ಈ ಪೈಕಿ ಬೆಂಗಳೂರಿನ ಇಬ್ಬರ ರಕ್ತದ ಪರೀಕ್ಷೆ ವರದಿ ಬಂದಿದ್ದು, ಅವರಿಗೆ ನೆಗಟಿವ್ ಎಂದು ಹೇಳಲಾಗಿದೆ. ಇನ್ನೊಬ್ಬರು ಉತ್ತರ ಕನ್ನಡದ ವ್ಯಕ್ತಿ ಬೆಲ್ಜಿಯಂಗೆ ಹೋಗಿ ಬಂದಿದ್ದರು ಎನ್ನಲಾಗಿದೆ. ಅವರನ್ನು ಗುರುತಿಸಿ ರಕ್ತದ ಮಾದರಿ ಪಡೆದು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿ ಬರಬೇಕಿದೆ," ಎಂದು ಅವರು ತಿಳಿಸಿದರು.
ಮಂಕಿಪಾಕ್ಸ ಕಂಡು ಬಂದಲ್ಲಿ ಅಂತವರನ್ನು 21ದಿನ ಪ್ರತ್ಯೇಕವಾಗಿ ಇಡಲು ಬೆಂಗಳೂರಿನ ಇಡಿ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ವಾರ್ಡ್ ಮೀಸಲಿಡಲಾಗಿದೆ. 21ದಿನ ಆಸ್ಪತ್ರೆಗಳಲ್ಲೇ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಜ್ವರ, ಮೈಯಲ್ಲಿನ ಗಾಯ ದೊಡ್ಡದಾಗುವುದು, ತುರಿಕೆ ಇವು ಮಂಕಿಪಾಕ್ಸ ಲಕ್ಷಣಗಳಾಗಿವೆ ಎಂದು ವಿವರಿಸಿದರು.
ಕರ್ನಾಟಕ ಸರ್ಕಾರ ಮಂಕಿಪಾಕ್ಸ ಬಗ್ಗೆ ಕ್ರಮ ಕೈಗೊಂಡಿದೆ. ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಮೈ ಮೇಲೆ ಗಾಯ ಕಂಡು ಬಂದರೆ ಅಂತವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ಮಂಕಿಪಾಕ್ಸ್ ಸೋಂಕಿತರ ಸಂಪರ್ಕಿತರಿಗೆ ಮಾತ್ರ ಈ ಸೋಂಕು ಹರಡುತ್ತದೆ. ಜತೆಗೆ ಸಲಿಂಗಕಾಮಿಗಳಲ್ಲಿ ಮಂಕಿಪಾಕ್ಸ ಕಂಡು ಬರುತ್ತಿದೆ. ಕೇರಳ ಗಡಿಭಾಗದಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಲಾಗಿದೆ. ಇದು ಕೊರೋನಾ ರೀತಿ ಹರಡುವ ಸೋಂಕಲ್ಲ. ಈ ಬಗ್ಗೆ ಆತಂಕ ಬೇಡ ಎಂದು ಅವರು ಹೇಳಿದರು.
ವಿಶ್ವದಲ್ಲಿ 20ಸಾವಿರ, ಭಾರತದಲ್ಲಿ 6ಮಂದಿಗೆ ಮಂಕಿಪಾಕ್ಸ
ಜಾಗತಿಕವಾಗಿ ಮಂಕಿಪಾಕ್ಸ ಹರಡುತ್ತಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ ಜುಲೈ 22ರಂದು ಇದನ್ನು 'ತುರ್ತು ಆರೋಗ್ಯ ಪರಿಸ್ಥಿತಿ' ಎಂದು ಘೋಷಿಸಿದೆ. ಈವರೆಗೆ ಜಾಗತಿಕವಾಗಿ 80ದೇಶಗಳಲ್ಲಿ ಮಂಕಿಪಾಕ್ಸ ಸೋಂಕು ಕಂಡು ಬಂದಿದೆ. ವಿಶ್ವದಲ್ಲೇ ಈವರೆಗೆ 20 ಸಾವಿರ ಜನರಿಗೆ ಮಂಕಿಪಾಕ್ಸ ತಗುಲಿದೆ. ಭಾರತದಲ್ಲಿ ಈವರೆಗೆ ಸುಮಾರು 6 ಮಂಕಿಪಾಕ್ಸ್ ಕೇಸ್ ಇದ್ದು, ಅದರಲ್ಲಿ ನಾಲ್ಕು ಕೇರಳ, ದೆಹಲಿಯಲ್ಲಿ ಎರಡು ಮಂಕಿಪಾಕ್ಸ ಪ್ರಕರಣಗಳಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುಧಾಕರ್ ಹೇಳಿದರು.