ಹಿಜಾಬ್ ವಿವಾದ; ವಿಶೇಷ ಪೀಠದಲ್ಲಿ ಗುರುವಾರದಿಂದ ಅರ್ಜಿ ವಿಚಾರಣೆ
ಬೆಂಗಳೂರು, ಫೆಬ್ರವರಿ 09; ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್ನಲ್ಲಿ ವಿಶೇಷ ಪೀಠ ರಚನೆ ಮಾಡಿದೆ.
ಬುಧವಾರ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿತ್ತು. ಬಳಿಕ ನ್ಯಾಯಮೂರ್ತಿಗಳು ಅರ್ಜಿ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದ್ದರು.
ಈಗ ಅರ್ಜಿಗಳ ವಿಚಾರಣೆಗೆ ವಿಶೇಷ ಪೂರ್ಣ ಪೀಠವನ್ನು ರಚನೆ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಪೂರ್ಣ ಪೀಠ ಗುರುವಾರ ಮಧ್ಯಾಹ್ನ 2.30ರಿಂದ ಅರ್ಜಿ ವಿಚಾರಣೆ ನಡೆಯಲಿದೆ.

ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಇದ್ದು, ಗುರುವಾರವೇ ವಿಚಾರಣೆ ಆರಂಭವಾಗಲಿದೆ.
ಬುಧವಾರ ಸುಮಾರು ಒಂದು ಗಂಟೆಗಳ ಕಾಲ ಹಿಜಾಬ್ ಪ್ರಕರಣದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನೇತೃತ್ವದ ಪೀಠ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡುವಂತೆ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ಗೆ ಸೂಚನೆ ನೀಡಿದ್ದರು.
ವಿಸ್ತೃತ ನ್ಯಾಯ ಪೀಠಕ್ಕೆ ವರ್ಗಾಯಿಸಲು ಇದು ಅರ್ಹ ಪ್ರಕರಣವಾಗಿದೆ. ಸಾಂವಿಧಾನಿಕ ಹಾಗೂ ವೈಯಕ್ತಿಕ ಹಕ್ಕುಗಳು ಮತ್ತು ಕಾನೂನು, ಹಲವು ಕೋರ್ಟ್ಗಳ ತೀರ್ಪು ಗಂಭೀರ ವಿಚಾರವಾಗಿದೆ. ಆದ್ದರಿಂದ ವಿಸ್ತೃತ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ತಕ್ಷಣ ಎಲ್ಲಾ ಕಡತಗಳನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆಗೊಳಿಸಿ ಎಂದು ಆದೇಶಿಸಿದ್ದರು.
ಬುಧವಾರ ಅರ್ಜಿ ವಿಚಾರಣೆ ಆರಂಭಿಸಿದ ನ್ಯಾಯಮೂರ್ತಿಗಳು, "ಈ ಪ್ರಕರಣವು ಹಲವು ಸಾಂವಿಧಾನಿಕ ಅಂಶಗಳನ್ನು ಒಳಗೊಂಡಿರುವ ಕಾರಣ ಇವುಗಳ ವಿಚಾರಣೆ ವಿಸ್ತೃತ ನ್ಯಾಯಪೀಠದಲ್ಲೇ ನಡೆಯುವುದು ಒಳಿತು" ಎಂದು ಅಭಿಪ್ರಾಯಪಟ್ಟರು.
ಅರ್ಜಿದಾರರ ಪರ ವಕೀಲರು ಮತ್ತು ಅಡ್ವೊಕೇಟ್ ಜನರಲ್ ತಮ್ಮ ಅಭಿಪ್ರಾಯವನ್ನು ವಿವರಿಸುವಂತೆಯೂ ಕೋರಿದರು. ಅರ್ಜಿದಾರರ ಪರ ವಕೀಲ ಸಜನ್ ಪೂವಯ್ಯ ಇದಕ್ಕೆ ಸಮ್ಮತಿ ಸೂಚಿಸಿದರು.
ಮಧ್ಯಂತರ ಆದೇಶ ನೀಡಿ; ಮತ್ತೊಬ್ಬ ಅರ್ಜಿದಾರರ ಪರವಾಗಿ ವಾದ ವಕೀಲ ಮೊಹಮದ್ ತಾಹಿರ್, "ಹಿಜಾಬ್ ವಿಷಯವಾಗಿ ರಾಜ್ಯಾದ್ಯಂತ ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತಿದ್ದಾರೆ. ಶಾಲೆ, ಕಾಲೇಜುಗಳ ಪಾಠ ಪ್ರವಚನ ಸ್ಥಗಿತಗೊಂಡಿದೆ. ಶೈಕ್ಷಣಿಕ ವರ್ಷ ಮುಕ್ತಾಯಕ್ಕೆ 2 ತಿಂಗಳು ಇದೆ. ಆದ್ದರಿಂದ ಮಧ್ಯಂತರ ಆದೇಶ ನೀಡಬೇಕು" ಎಂದು ಮನವಿ ಮಾಡಿದರು.
"ಎಲ್ಲಾ ಅರ್ಜಿಗಳು ವಿಸ್ತೃತ ನ್ಯಾಯಪೀಠದಲ್ಲೇ ವಿಚಾರಣೆ ನಡೆಯುವುದು ಸೂಕ್ತ. ಈ ಅರ್ಜಿಗಳ ತುರ್ತು ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿಗಳು ತಮ್ಮ ವಿವೇಚನೆಯ ಅನುಸಾರ ಕ್ರಮ ಕೈಗೊಳ್ಳಲಿದ್ದಾರೆ" ಎಂದು ನ್ಯಾಯಮೂರ್ತಿಗಳು ಹೇಳಿದರು.
ಸಿದ್ದರಾಮಯ್ಯ ಪ್ರಶ್ನೆ?; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಿಜಾಬ್ ವಿವಾದದ ಕುರಿತು ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದಾರೆ. "ತಿಂಗಳ ಹಿಂದೆಯೇ ಹುಟ್ಟಿಕೊಂಡಿದ್ದ ಹಿಜಾಬ್ ಕೇಸರಿ ಶಾಲು ವಿವಾದ ಹೊತ್ತಿ ಉರಿಯತೊಡಗಿದ ನಂತರ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಅವರಿಗೆ ಇದರ ಹಿಂದೆ ಎಸ್.ಡಿ.ಪಿ.ಐ - ಸಿ.ಎಫ್.ಐ ಇರಬಹುದೆಂಬ ಶಂಕೆ ಮೂಡಿದೆಯಂತೆ. ಇಲ್ಲಿಯ ವರೆಗೆ ಇವರ ಗೃಹಸಚಿವರು, ಪೊಲೀಸರು, ಇಂಟಲಿಜೆನ್ಸ್ ಏನು ಮಾಡ್ತಿದ್ದರು?" ಎಂದು ಪ್ರಶ್ನಿಸಿದ್ದಾರೆ.
"ಗೃಹಸಚಿವ ಆರಗ ಜ್ಞಾನೇಂದ್ರ, ಸಚಿವ ಕೆ. ಎಸ್. ಈಶ್ವರಪ್ಪ ಸೇರಿದಂತೆ ಬಿಜೆಪಿ ನಾಯಕರು ಹಿಜಾಬ್ ಕೇಸರಿ ಶಾಲು ವಿವಾದದ ಹಿಂದೆ ಕಾಂಗ್ರೆಸ್ ಇದೆ ಎನ್ನುತ್ತಿದ್ದಾರೆ. ಶಿಕ್ಷಣ ಸಚಿವರಿಗೆ ಸಿ.ಎಫ್.ಐ ಮೇಲೆ ಶಂಕೆಯಂತೆ. ಮೊದಲು ಎಲ್ಲರೂ ಕೂಡಿ ಒಂದು ತೀರ್ಮಾನಕ್ಕೆ ಬರುವುದು ಒಳ್ಳೆಯದು. ಎಸ್.ಡಿ.ಪಿ.ಐ ಯೋ, ಸಿ.ಎಫ್.ಐ ಯೋ ವಿದ್ಯಾರ್ಥಿಗಳ ನಡುವೆ ಕೋಮುಸಂಘರ್ಷ ಹುಟ್ಟುಹಾಕುತ್ತಿರುವವರು ಯಾರೇ ಇರಲಿ, ಅಂತಹವರನ್ನು ಗುರುತಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ. ಇನ್ನೂ ಶಂಕೆ-ಅನುಮಾನ ಎಂದು ಕಾಲಹರಣ ಯಾಕೆ ಮಾಡುತ್ತೀರಿ? ಆರೋಪಿಗಳ ಜೊತೆ ಏನಾದರೂ ಒಳಒಪ್ಪಂದ ನಡೆದಿದೆಯೇ?" ಎಂದು ಕೇಳಿದ್ದಾರೆ.
"ಹಿಜಾಬ್ ಧಾರಣೆಯ ಸರಿ-ತಪ್ಪು ಬಗ್ಗೆ ನ್ಯಾಯಾಲಯ ನಿರ್ಧರಿಸಲಿ, ಅಲ್ಲಿಯ ವರೆಗೆ ಕಾಯೋಣ. ಆದರೆ ವಿದ್ಯಾರ್ಥಿನಿಗಳ ಮೇಲೆ ಹಲ್ಲೆಗೆ ಪ್ರಯತ್ನ, ಶಾಲೆಗೆ ಕಲ್ಲೆಸೆತ, ರಾಷ್ಟ್ರಧ್ವಜ ಸ್ತಂಭದಲ್ಲಿ ಕೇಸರಿ ಬಾವುಟ ಇವೆಲ್ಲವೂ ಅಪರಾಧ ಹೌದಾದರೆ ಮೊದಲು ಈ ಪುಂಡು ವಿದ್ಯಾರ್ಥಿಗಳ ಮೇಲೆ ಕ್ರಮಕೈಗೊಳ್ಳಿ. ಹಿಜಾಬ್-ಕೇಸರಿ ಶಾಲು ವಿವಾದದ ಹಿಂದೆ ಯಾರಿದ್ದಾರೆಂದು ಬಿಜೆಪಿ ಸರ್ಕಾರ ತನಿಖೆ ನಡೆಸಿ ಪತ್ತೆಹಚ್ಚಿ ಜನರಿಗೆ ತಿಳಿಸಲಿ.
ವಿವಾದದ ಮುಂದೆ ಯಾರಿದ್ದಾರೆ ಎನ್ನುವುದನ್ನು ರಾಜ್ಯ, ದೇಶ, ವಿದೇಶದ ಜನತೆ ಲೈವ್ ವಿಡಿಯೋಗಳಲ್ಲಿ ನೋಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಯಾವಾಗ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.












Click it and Unblock the Notifications