ಸರ್ವಧರ್ಮಗಳ ಸಂಗಮ ಕುಂದಾಪುರದ ಕೊಡಿಹಬ್ಬ!
ಉಡುಪಿ, ನವೆಂಬರ್ 26 : ಕರಾವಳಿ ಜಿಲ್ಲೆಯ ಅತಿ ದೊಡ್ಡ ಜಾತ್ರೆ ಎಂದು ಕರೆಲ್ಪಡುವ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ (ಕೊಡಿಹಬ್ಬ) ಬುಧವಾರ ಸಂಭ್ರಮದಿಂದ ನಡೆಯಿತು. ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸಿ ದೇವರ ದರ್ಶನ ಪಡೆದರು.
ಕುಂದಾಪುರದ ಕೋಟಿಲಿಂಗೇಶ್ವರ ದೇವಸ್ಥಾನದ ರಥ ರಾಜ್ಯದಲ್ಲಿನ ಅಂತ್ಯಂತ ದೊಡ್ಡ ರಥಗಳ ಪೈಕಿ ಒಂದು ಎಂದು ಪ್ರಸಿದ್ಧಿಪಡೆದಿದೆ. ದೇವಾಲಯದಲ್ಲಿ ನಡೆಯುವ ರಥೋತ್ಸವ ಕೊಡಿಹಬ್ಬವೆಂದೇ ಪ್ರಸಿದ್ಧಿ ಪಡೆದಿದೆ. ಏಳು ದಿನಗಳ ಕಾಲ ನಡೆಯುವ ಉತ್ಸವಕ್ಕೆ 60 ಅಡಿ ಎತ್ತರದ ಧ್ವಜಸ್ತಂಭಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುತ್ತದೆ. [ಕುಂದಾಪುರದ ತನಕ ಫ್ಲೈ ಬಸ್ ಸೇವೆ ವಿಸ್ತರಣೆ]

ಕೊಡಿ ಹಬ್ಬ ಕರಾವಳಿ ಭಾಗದ ಅತ್ಯಂತ ದೊಡ್ಡ ಜಾತ್ರೆ ಎಂದೇ ಪರಿಗಣಿಸಲ್ಪಟ್ಟಿದೆ. ಈ ಜಾತ್ರೆಯೊಂದಿಗೆ ಹಲವಾರು ನಂಬಿಕೆ, ನಡಾವಳಿಗಳು ಸೇರಿಕೊಂಡಿವೆ. ಕೊಡಿಹಬ್ಬದಂದು ನವದಂಪತಿಗಳು ದೇವರಿಗೆ ಕಬ್ಬಿನ ಕೊಡಿ ಅರ್ಪಿಸಿ ಮನೆಗೆ ಕೊಂಡೊಯ್ದರೆ ಶ್ರೇಯಸ್ಸು ಎಂಬ ನಂಬಿಕೆಯೂ ಇದೆ. [ದುರ್ಗಾಪರಮೇಶ್ವರಿಗೆ ಪ್ರಾಕೃತಿಕ ಜಲಾಭಿಷೇಕ : ಧನ್ಯರಾದ ಭಕ್ತಗಣ]
ಪ್ರಸಿದ್ಧಿ ಪಡೆದಿದೆ 'ಸುತ್ತಕ್ಕಿ ಸೇವೆ' : ದೇವಾಲಯಕ್ಕೆ ಹೊಂದಿಕೊಂಡಂತೆ ಇರುವ ಸುಮಾರು 4 ಎಕರೆ ವಿಸ್ತೀರ್ಣದ 'ಕೋಟಿ ತೀರ್ಥ' ಪುಷ್ಕರಣಿಯ ಸುತ್ತ ಅಪೇಕ್ಷಿತರು ಬಿಳಿಯ ಬಟ್ಟೆಯನ್ನು ಹಾಕಿ ಕುಳಿತುಕೊಳ್ಳುತ್ತಾರೆ. ಭಕ್ತಾಧಿಗಳು ಪುಷ್ಕರಣಿಯಲ್ಲಿ ಮುಳುಗೆದ್ದು ಬಿಳಿ ಬಟ್ಟೆಹಾಸಿನ ಮೇಲೆ ಅಕ್ಕಿಯನ್ನು ಚೆಲ್ಲುತ್ತಾರೆ. ಇದನ್ನೇ 'ಸುತ್ತಕ್ಕಿ ಸೇವೆ' ಎನ್ನಲಾಗುತ್ತದೆ. ಇದು ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿದೆ.

ಕೊಡಿಹಬ್ಬ ವೀಕ್ಷಿಸಲು ಸಾವಿರಾರು ಜನರು ಸೇರುತ್ತಾರೆ, ಕೊಡಿಹಬ್ಬ ಸರ್ವಧರ್ಮಗಳ ಸಂಗಮ ಇಲ್ಲಿನ ಬ್ರಹ್ಮರಥವನ್ನು ನಿರ್ಮಿಸುವಲ್ಲಿ ಮುಸ್ಲಿಂ ಬಾಂಧವರ ಕೊಡುಗೆಯೂ ಇದೆ. ಪಾರಂಪರಿಕವಾದ ಧಾರ್ಮಿಕ ಕಾರ್ಯವನ್ನು ಸ್ಥಳೀಯ ಮುಸ್ಲಿಂ ಬಂಧುಗಳು ಅತ್ಯಂತ ಭಯ ಭಕ್ತಿಯಿಂದ ನೆರವೇರಿಸುತ್ತಾರೆ.
ಟಿಪ್ಪು ಸುಲ್ತಾನ್ ಕಾಲದಿಂದ ನಡೆದುಕೊಂಡು ಬಂದಿರುವ 'ದೀವಿಟಿಗೆ ಸಲಾಮ್' ಎನ್ನುವ ಧಾರ್ಮಿಕ ಸೇವೆ ಇಂದಿಗೂ ಮುಂದುವರೆಯುತ್ತಿದೆ. ಬ್ರಹ್ಮ ರಥೋತ್ಸವದ ಮರುದಿನ ರಾತ್ರಿ ನಡೆಯುವ ಚೂರ್ಣೋತ್ಸವ, ಶ್ರೀ ದೇವರ ಓಕುಳಿಯಾಟ ಸೇರಿದಂತೆ ಒಟ್ಟು ಏಳು ದಿನಗಳ ಕಾಲ ಕೊಡಿಹಬ್ಬ ಸಂಭ್ರಮದಿಂದ ನಡೆಯುತ್ತದೆ.













Click it and Unblock the Notifications