ಇದೊಂದು ಪುಕ್ಕಲು ಸರ್ಕಾರ: ಬಿಎಸ್ವೈ ವಿರುದ್ಧ ಸಿದ್ದರಾಮಯ್ಯ ಟೀಕೆ
ಬೆಂಗಳೂರು, ಡಿಸೆಂಬರ್ 19: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ಆಯೋಜಿಸಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ವಿವಿಧೆಡೆ ನಿಷೇಧಾಜ್ಞೆ ಜಾರಿ ಮಾಡಿರುವುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
'ಇದೊಂದು ಪುಕ್ಕಲು ಸರ್ಕಾರ. ಜನಶಕ್ತಿಗೆ ಹೆದರಿ ನಿಷೇಧಾಜ್ಞೆ ಜಾರಿ ಮಾಡಿದೆ' ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಈ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಡಿ. 21ರ ಮಧ್ಯರಾತ್ರಿಯವರೆಗೂ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಮಾಡಲಾಗಿದೆ. ಇತರೆ ಚಟುವಟಿಕೆಗಳು ಎಂದಿನಂತೆ ಇರಲಿದ್ದು, ಪ್ರತಿಭಟನೆ, ಮೆರವಣಿಗೆ, ವಿಜಯೋತ್ಸವಗಳನ್ನು ಆಚರಿಸದಂತೆ ಸೂಚನೆ ನೀಡಲಾಗಿದೆ.
ನಿಷೇಧಾಜ್ಞೆ ಜಾರಿಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮುಂದೂಡಲು ಸಂಘಟನೆಗಳು ನಿರ್ಧರಿಸಿವೆ. ನಿಷೇಧಾಜ್ಞೆ ಅಂತ್ಯಗೊಂಡ ಬಳಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಪ್ರತಿಭಟನೆ ಆರಂಭಕ್ಕೂ ಮುನ್ನವೇ ಅದಕ್ಕೆ ಅವಕಾಶ ನೀಡದಂತೆ ನಿಷೇಧಾಜ್ಞೆ ವಿಧಿಸಿರುವುದು ತೀವ್ರ ಟೀಕೆಗೆ ಒಳಗಾಗಿದೆ.

ಪುಕ್ಕಲು ಸರ್ಕಾರ ಹೆದರಿದೆ
'ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಭುಗಿಲೆದ್ದಿರುವ ಪ್ರತಿರೋಧವನ್ನು ದಮನಿಸಲು ನಿಷೇಧಾಜ್ಞೆ ಹೇರಿರುವ ಪುಕ್ಕಲು ರಾಜ್ಯ ಸರ್ಕಾರ ಜನಶಕ್ತಿಗೆ ಹೆದರಿದೆ. ದಮನಿಸಿದಷ್ಟು ಜನಾಕ್ರೋಶ ಪುಟಿದೆದ್ದು ಬರುತ್ತದೆ ಎನ್ನುವುದು ಬಿಎಸ್ ಯಡಿಯೂರಪ್ಪ ಅವರಿಗೆ ತಿಳಿದಿರಲಿ' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಮೋದಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ
'ಸಂವಿಧಾನವು ನೀಡಿದ ಮೌಲ್ಯಗಳ ಮೇಲೆ ನಿರಂತರ ಹಲ್ಲೆಗಳನ್ನು ನಡೆಸಿದ ಬಳಿಕ, ಸೆಕ್ಷನ್ 144ಅನ್ನು ಹೇರುವ ಮೂಲಕ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ನರೇಂದ್ರ ಮೋದಿ ಅವರ ತಾಳಕ್ಕೆ ತಕ್ಕಂತೆ ಬಿಎಸ್ ಯಡಿಯೂರಪ್ಪ ಕುಣಿಯುತ್ತಾರೆ ಎನ್ನುವುದನ್ನು ನಾನು ನಿರೀಕ್ಷಿಸಿರಲಿಲ್ಲ. ಅವರು ಹೆಚ್ಚು ಪ್ರಗತಿಪರರು ಮತ್ತು ಎಲ್ಲವನ್ನೂ ಒಳಗೊಳ್ಳುವವರು ಎಂದು ಭಾವಿಸಿದ್ದೆ. ಯಡಿಯೂರಪ್ಪ ಅವರೇ ನಿಮಗೆ ನಾಚಿಕೆಯಾಗಬೇಕು' ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬಿಜೆಪಿಯಿಂದ ವಿವಾದ
ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಟೀಕಿಸಿದ್ದರು. ಪೌರತ್ವ ತಿದ್ದುಪಡಿ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಮಸೂದೆಗಳನ್ನು ಮಂಡಿಸಿದಾಗ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಹಿಂದೂ ರಾಷ್ಟ್ರ ನಿರ್ಮಾಣ ಮಾಡುತ್ತಿದ್ದೇವೆ ಎಂಬ ಭಾವನೆಯನ್ನು ಜನರ ಮನಸಿನಲ್ಲಿ ಬಿತ್ತುವ ಸಲುವಾಗಿ ಬಿಜೆಪಿ ಈ ರೀತಿ ವಿವಾದ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದರು.

ಸಮಸ್ಯೆಗಳು ಬೇರೆ ಇವೆ
ಜನವರಿಯಿಂದಲೇ ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಕಾಯ್ದೆ ಜಾರಿಗೆ ಇನ್ನೂ ಯೋಚಿಸಿಲ್ಲ ಎಂದು ಕೇಂದ್ರ ಸರ್ಕಾರವೇ ಹೇಳುತ್ತಿದೆ. ಜನರ ದಿಕ್ಕುತಪ್ಪಿಸುವ ಕೆಲಸವನ್ನು ಬಿಜೆಪಿಯವರು ಏಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು.
ಪ್ರತಿರಾಜ್ಯಕ್ಕೂ ವಿಭಿನ್ನ ಸಮಸ್ಯೆಗಳಿರುತ್ತವೆ. ಅಸ್ಸಾಂನ ಸಮಸ್ಯೆಯೇ ಬೇರೆ. ತ್ರಿಪುರಾದ ಮೂಲ ನಿವಾಸಿಗಳ ಸಮಸ್ಯೆಗಳೇ ಬೇರೆ. ಅಂತಹ ಸಮಸ್ಯೆಗಳಿಗೆ ಪರಿಹಾರ ನೀಡುವುದನ್ನು ಬಿಟ್ಟು ಕೇಂದ್ರ ಸರ್ಕಾರವು ಅನಗತ್ಯವಾದ ವಿಚಾರಗಳಿಗೆ ಮಹತ್ವ ನೀಡುತ್ತಿದೆ ಎಂದು ಕಿಡಿಕಾರಿದ್ದರು.












Click it and Unblock the Notifications