ಕರ್ನಾಟಕದಿಂದ ಲೋಕಸಭೆಗೆ ಮೂವರು ಮಾಜಿ ಸಿಎಂ ಸ್ಪರ್ಧೆ?: 2ನೇ ಪಟ್ಟಿಯಲ್ಲಿ ಹೆಸರು ಘೋಷಣೆ?
ಬೆಂಗಳೂರು, ಮಾರ್ಚ್ 05: ಲೋಕಸಭಾ ಚುನಾವಣೆ 2024 ಪ್ರಯುಕ್ತ ಇತ್ತೀಚೆಗಷ್ಟೆ 195 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಿ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿಯು ಶೀಘ್ರವೇ ಎರಡನೇ ಪಟ್ಟಿ ಬಿಡುಗಡೆ ಮಾಡಲಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಮೂರು ಮಾಜಿ ಮುಖ್ಯಮಂತ್ರಿಗಳ ಹೆಸರು ಘೋಷಣೆ ಆಗುವ ಸಾಧ್ಯತೆ ಇದೆ.
ಹೌದು, ಭಾರತೀಯ ಜನತಾ ಪಕ್ಷವು (ಬಿಜೆಪಿ) ಲೋಕಸಭಾ ಚುನಾವಣೆಗೆ ಕರ್ನಾಟಕ 28 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ. ಈ ಬಾರಿ ಲೋಕಸಭೆಗೆ ಮೂವರು ಮಾಜಿ ಮುಖ್ಯಮಂತ್ರಿಗಳ ಹೆಸರುಗಳನ್ನು ಶಿಫಾರಸು ಮಾಡಬಹುದು ಎನ್ನಲಾಗುತ್ತಿದೆ.

ಟಿಕೆಟ್ ಅಂತಿಮಗೊಳಿಸಲು ಕಾರ್ಯಕರ್ತರು ಸ್ಥಳೀಯರಿಂದ ಮಾಹಿತಿ, ಅಭಿಪ್ರಾಯ ಸಂಗ್ರಹಿಸಿರುವ ಬಿಜೆಪಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಮತ್ತು ಡಿವಿ ಸದಾನಂದಗೌಡ ಅವರ ಹೆಸರುಗಳು ಕೇಳಿ ಬಂದಿವೆ. ಇವರಿಗೂ ಟಿಕೆಟ್ ಕೊಡಬೇಕು ಎಂದು ಅಭಿಪ್ರಾಯದಲ್ಲಿ ಪ್ರಸ್ತಾಪಿಸಲಾಗಿದೆ.
ಮೂವರು ಮಾಜಿ ಸಿಎಂ ಹೆಸರು ಕೇಂದ್ರಕ್ಕೆ ಶಿಫಾರಸು?
ಸದ್ಯ ಎರಡನೇ ಪಟ್ಟಿಯಲ್ಲಿ ಕರ್ನಾಟಕ ಬಿಜೆಪಿ ನಾಯಕರು ಕೇಂದ್ರ ಹೈಕಮಾಂಡ್ಗೆ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಲಿದ್ದಾರೆ. ಇದರಲ್ಲಿ ಈ ಮೂವರು ಮಾಜಿ ಮುಖ್ಯಮಂತ್ರಿಗಳ ಹೆಸರು ಕೇಂದ್ರಕ್ಕೆ ಶಿಫಾರಸು ಮಾಡುವ ಸಂಭವವಿದೆ. ಅಂತಿಮವಾಗಿ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ? ಎಂಬುದನ್ನು ಕೇಂದ್ರ ಬಿಜೆಪಿ ವರಿಷ್ಠರೇ ತೀರ್ಮಾನಿಸಲಿದ್ದಾರೆ.
ಭಾನುವಾರ ಬೆಂಗಳೂರಿನ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಹೆಸರುಗಳ ಶಿಫಾರಸು, ಅಭಿಪ್ರಾಯ ಬಗ್ಗೆ ಚರ್ಚೆಗಳು ಆಗಿವೆ. ಈ ಮೂವರು ಮಾಜಿ ಮುಖ್ಯಮಂತ್ರಿಗಳ ಹೆಸರು ಶಿಫಾರಸು ಆದರೂ ಸಹಿತ ಟಿಕೆಟ್ ಖಚಿತತೆ ಬಗ್ಗೆ ಪಕ್ಷವೇ ಅಧಿಕೃತ ಮಾಹಿತಿ ತಿಳಿಸಲಿದೆ.
ಧಾರವಾಡ-ಬೆಳಗಾವಿ ಸ್ಪರ್ಧೆ ಆಕಾಂಕ್ಷಿ
ಕಾಂಗ್ರೆಸ್ನಿಂದ ಕೇಸರಿಪಡೆಗೆ ಮರಳಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಧಾರವಾಡ ಇಲ್ಲವೇ ಬೆಳಗಾವಿಯಿಂದ ಸ್ಪರ್ಧೆಗೆ ಇಳಿಯುವ ಇಂಗಿತ ಇತ್ತೀಚೆಗೆ ಹೊರ ಹಾಕಿದ್ದರು. ಅವರು ಹೆಸರು ಪಟ್ಟಿಯಲ್ಲಿ ಬಂದರೆ ಇವೆರಡರಲ್ಲಿ ಒಂದು ಕ್ಷೇತ್ರದ ಟಿಕೆಟ್ ಅವರಿಗೆ ಸಿಗುವ ನಿರೀಕ್ಷೆಗಳು ಇವೆ.

ವಿಧಾನಸಭಾ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಬಿಜೆಪಿಯಿಂದ ಬಸವರಾಜ ಬೊಮ್ಮಾಯಿಯವರು ಮಾತ್ರವೇ ಆಯ್ಕೆ ಆದರು. ಉಳಿದಲ್ಲಿ ಕಾಂಗ್ರೆಸ್ ಗೆದ್ದು ಬೀಗಿತು. ಬೊಮ್ಮಾಯಿ ಅವರು ವರ್ಚಸ್ಸು ಹೊಂದಿರುವ ನಾಯಕ, ಅವರಿಗೆ ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಸ್ಥಳೀಯರು ಮತ್ತು ಕಾರ್ಯಕರ್ತರಿಂದ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೇ ಶಿವಕುಮಾರ್ ಉದಾಸಿ ಅವರು ಈ ಬಾರಿ ತಾವು ಲೋಕಸಭೆಗೆ ಸ್ಪರ್ಧಿಸುವ ಆಸಕ್ತಿ ಹೊಂದಿಲ್ಲ ಎಂದು ತಿಳಿಸಿದ್ದಾರೆ. ಈ ಕಾರಣದಿಂದಲೇ ಈ ಸಲ ಬೊಮ್ಮಾಯಿ ಅವರ ಹೆಸರು ಮುನ್ನೆಲೆಗೆ ಬಂದಿದೆ ಎನ್ನಲಾಗುತ್ತಿದೆ.
ರಾಜಕೀಯ ನಿವೃತ್ತಿ ಎಂದ ಡಿವಿಎಸ್ಗೆ ಟಿಕೆಟ್?
ಮತ್ತೊಬ್ಬ ನಾಯಕ ಡಿವಿ ಸದಾನಂದಗೌಡ ಅವರು ಬೆಂಗಳೂರು ಉತ್ತರ ಲೋಕಸಭೆಯನ್ನು ಪ್ರತಿನಿಧಿಸಿದವರು. ಅವರಿಗೆ ಟಿಕೆಟ್ ನೀಡುವ ಸಂಭವ ತೀರಾ ಕಡಿಮೆ ಎನ್ನಲಾಗಿದೆ. ಏಕೆಂದರೆ ಅವರು ಇತ್ತೀಚೆಗೆ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದರು.
ಸ್ವತಃ ತಾವೇ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದ ಡಿಸಿ ಸದಾನಂದಗೌಡ ಅವರು ವರಿಷ್ಠರ ಮಾತಿಗೆ ಒಪ್ಪಿ ಚುನಾವಣೆಗೆ ಸ್ಪರ್ಧಿಸುವುದಾಗಿಯು ಅಭಿಪ್ರಾಯ ಹೊರ ಹಾಕಿದ್ದರು. ನಿರಾಸಕ್ತರಂತೆ ಮಾತನಾಡಿರುವ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಡೌಟು ಎನ್ನಲಾಗಿದೆ. ಆದರೆ ಅವರ ಕ್ಷೇತ್ರದಿಂದ ಕಾರ್ಯಕರ್ತರು ಮಾತ್ರ ಸದಾನಂದಗೌಡರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.
ಸದ್ಯ ಲೋಕಸಭೆಯ ಟಿಕೆಟ್ ಹಂಚಿಕೆ ಕುರಿತು ಮೇಲಿಂದ ಮೇಲೆ ಸಭೆ ನಡೆಯುತ್ತಿದೆ. ಬಿಜೆಪಿ ವರಿಷ್ಠರು ನಾಳೆ ಮಾರ್ಚ 6 ರಂದು ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ. ಇನ್ನೊಂದು ವಾರದಲ್ಲಿ ಬಿಜೆಪಿಯಿಂದ ಎರಡನೇ ಪಟ್ಟಿ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.












Click it and Unblock the Notifications