ಆಪರೇಷನ್ ಹಸ್ತ; ಸೋಮಶೇಖರ್, ಬೈರತಿ ಸೇರಿ ಹಲವರು ಕಾಂಗ್ರೆಸ್ ಸೇರುವ ಚರ್ಚೆ ಇದೆ: ಚೆಲುವರಾಯಸ್ವಾಮಿ
ಮಂಡ್ಯ, ಮಾರ್ಚ್28: ರಾಜ್ಯ ವಿಧಾನಸಭಾ ಚುನಾವಣೆ ಹೊತ್ತಲಿ ಪಕ್ಷಾಂತರ ಪರ್ವ ಜೋರಾಗಿದ್ದು, ಈಗಾಗಲೇ ಕಾಂಗ್ರೆಸ್ ಆಪರೇಷನ್ ಹಸ್ತವನ್ನ ನಡೆಸುತ್ತಿದ್ದು, ಬಿಜೆಪಿ ಹಾಗೂ ಜೆಡಿಎಸ್ ನ ಹಲವು ನಾಯಕರಿಗೆ ಗಾಳ ಹಾಕುತ್ತಿದೆ.
ಈಗಾಗಲೇ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ 17 ಶಾಸಕರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಚರ್ಚೆ ಜೋರಾಗಿತ್ತು. ಈಗಾಗಲೇ ಹೆಚ್ ವಿಶ್ವನಾಥ್ ಕಾಂಗ್ರೆಸ್ ಪಕ್ಷವನ್ನ ಸೇರುವುದಾಗಿ ಹೇಳಿದ್ದು, ಹಾಲಿ ನಾಲ್ಕೈದು ಸಚಿವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಚರ್ಚೆ ಜೋರಾಗಿದೆ.

ಈ ಕುರಿತು ಮಂಡ್ಯದಲ್ಲಿ ಮಾಧ್ಯಮಗಳ ಜೊತೆಗೆ ಚೆಲುವರಾಯಸ್ವಾಮಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಒಳಮೈತ್ರಿ ಆಗಿತ್ತು. ಯೋಗೇಶ್ವರ್ ಸತ್ಯ ಹೇಳಿದ್ದಾರೆ. ರಾಜ್ಯದಲ್ಲಿ ಪೂರ್ತಿ ಒಳ ಒಪ್ಪಂದ ಆಗಿತ್ತು. ಯೋಗೇಶ್ವರ್ ಪಾಪ ಏನಕ್ಕೆ ಹೇಳಿದ್ರು ಅಂತ ಗೊತ್ತಿಲ್ಲ. ಬಿಜೆಪಿಯಲ್ಲಿ ಉಸಿರುಗಟ್ಟಿದ ವಾತಾವರಣ ಅವರಿಗೆ ಇದೆ ಎಂದು ಹೇಳಿದ್ದಾರೆ.
ಇನ್ನೂ ನಮ್ಮ ಸಿದ್ದಾಂತ ಒಪ್ಪಿ ಬಂದ್ರೆ ಸ್ವಾಗತ. ವಲಸಿಗ ಸಚಿವರ ಜೊತೆ ಚರ್ಚೆ ಇದೆ. ಕಾಂಗ್ರೆಸ್ಸಿಗೆ ಬರುವ ಬಗ್ಗೆ ಚರ್ಚೆ ಇದೆ. ಗೊತ್ತಿಲ್ಲ ಅಂತಿಮವಾಗಿ, ಚುನಾವಣೆ ಘೋಷಣೆ ಆದ ಮೇಲೆ ಗೊತ್ತಾಗುತ್ತೆ. ಸೋಮಶೇಖರ್, ಬೈರತಿ ಬಸವರಾಜ ಸೇರಿದಂತೆ ಹಲವರು ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ಇದೆ ಅಂತ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಇನ್ನೂ ಎಸ್.ಟಿ. ಸೋಮಶೇಖರ್ ಹಾಗೂ ಬಿ.ಎ. ಬಸವರಾಜ ಅವರು ಚುನಾವಣೆ ಘೋಷಣೆ ಯಾದ ನಂತರ ವಲಸೆ ಬರಲಿದ್ದಾರೆ ಎಂದು ಚೆಲುವ ನಾರಾಯಣಸ್ವಾಮಿ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿ ನೀಡಿ, ಅವರೇ ಒಬ್ಬ ವಲಸಿಗರು, ಅವರ ಮಾತು ನಂಬಲು ಆಗುತ್ತದೆಯೇ ಎಂದರು.

ಹಳೇ ಮೈಸೂರು ಭಾಗದಲ್ಲಿ ಹೊಂದಾಣಿಕೆ ಜೆಡಿಎಸ್ ಜೊತೆ ಮಾಡಿಕೊಳ್ಳಗುವುದಿಲ್ಲ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅವರು ಹೇಳಿರುವುದು ಸರಿಯಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೊಂದಾಣಿಕೆಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಕಳೆದ 2-3 ದಿನಗಳಿಂದ ನಮ್ಮ ಶಾಸಕರಿಗೆ ಫೋನ್ ಮಾಡಿ ಟಿಕೆಟ್ ಕೊಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಬಳಿ ಸರಿಯಾದ ಅಭ್ಯರ್ಥಿ ಇಲ್ಲದೆ ಹತಾಶರಾಗಿದ್ದಾರೆ. ಹಾಗಾಗಿ ನಮ್ಮ ಪಕ್ಷದವರಿಗೆ ಫೋನ್ ಮಾಡುತ್ತಿದ್ದಾರೆ. ಕಾಂಗ್ರೆಸ್ ದಿವಾಲಿಯಾಗಿದೆ ಎಂದು ಇದರಿಂದಾಗಿ ಸ್ಪಷ್ಟವಾಗುತ್ತದೆ ಎಂದರು.
ಈಗಾಗಲೇ ಕಾಂಗ್ರೆಸ್ 124 ಕ್ಷೇತ್ರದ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, 100 ಕ್ಷೇತ್ರದ ಅಭ್ಯರ್ಥಿಗಳನ್ನ ಏಪ್ರಿಲ್ ಮೊದಲ ವಾರದಂದು ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತು ಹಲವು ಸಭೆಯನ್ನ ನಡೆಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಪಣತೊಟ್ಟ ಕಾಂಗ್ರೆಸ್ ಅನ್ಯ ಪಕ್ಷದ ನಾಯಕರಿಗೆ ಗಾಳ ಹಾಕುತ್ತಿದೆ.
ಇನ್ನೂ ಅನ್ಯ ಪಕ್ಷದ ನಾಯಕರನ್ನ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಹಲವು ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನ ಸಂಪರ್ಕಿಸುತ್ತಿದ್ದು, ಅನ್ಯ ಪಕ್ಷದ ನಾಯಕರಿಗಾಗಿಯೇ 25 ರಿಂದ 30 ಕ್ಷೇತ್ರವನ್ನ ಕಾಯ್ದಿರಿಸಲಾಗಿದೆ.
ಈಗಾಗಲೇ ಕೆ ಅರ್ ಪೇಟೆ ಶಾಸಕ ಹಾಗೂ ಹಾಲಿ ಸಚಿವರಾಗಿರುವ ನಾರಾಯಣ ಗೌಡರು ಕಾಂಗ್ರೆಸ್ ಪಕ್ಷವನ್ನ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ಇದೀಗ ಸಚಿವ ಹಾಗೂ ಕೆ ಆರ್ ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜ ಹಾಗೂ ಯಶವಂತಪುರ ಶಾಸಕ ಹಾಗೂ ಸಚಿವರಾದ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.












Click it and Unblock the Notifications