ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರಾಯೇ: ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಗದಗ, ಸೆಪ್ಟೆಂಬರ್ 03: ರಾಜ್ಯ ರಾಜಕಾರಣದಲ್ಲಿ ಧಗಧಗಿಸ್ತಿರೋ ಮುಡಾ ಹಗರಣದ ಜ್ವಾಲೆ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲೂ ಸಾಕಷ್ಟು ಸದ್ದು ಮಾಡುತ್ತಿದೆ. ಮುಡಾ ಕದನವನ್ನ ಗಂಭೀರವಾಗಿ ಪರಿಗಣಿಸಿರೋ ರಾಜ್ಯ ಕಾಂಗ್ರೆಸ್ ರಾಜ್ಯಪಾಲರ ವಿರುದ್ಧ ತೊಡೆ ತಟ್ಟಿ ನಿಂತಿದೆ. ಮುಡಾ ಹಗರಣದಿಂದ ಸಿದ್ದರಾಮಯ್ಯ ಅವರು ಜೈಲಿಗೆ ಹೋಗುತ್ತಾರೆ ಎಂದು ಕೆಲ ಬಿಜೆಪಿ ನಾಯಕರು ಭವಿಷ್ಯ ನುಡಿದಿರುವುದು ಅಚ್ಚರಿಗೆ ಕಾರಣವಾಗಿದೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರಾಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಮಾತನಾಡಿ, ನಾನು ಜವಾಬ್ದಾರಿ ಇರುವ ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ನಾನು ಭವಿಷ್ಯ ಹೇಳುವುದಿಲ್ಲ. ಕಾನೂನು ತನ್ನ ಪ್ರಕ್ರಿಯೆ ನಡೆಸುತ್ತದೆ ಎಂದು ಹೇಳಿದರು.

ಶಾಸಕ ಆರ್. ವಿ. ದೇಶಪಾಂಡೆ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ನಾನು ಅವರ ಹೇಳಿಕೆ ಬಗ್ಗೆ ವ್ಯಾಖ್ಯಾನ ಮಾಡುವುದಿಲ್ಲ. ನಾನು ಸಣ್ಣವನು. ದೇಶಪಾಂಡೆ ಅವರ ಹೇಳಿಕೆಗೆ ಕಾರಣ ಗೊತ್ತಿಲ್ಲ. ಅವರ ಹೇಳಿಕೆ ನಂತರ ಕಾಂಗ್ರೆಸ್ ನಲ್ಲಿ ಹಲವು ಪ್ರತಿಕ್ರಿಯೆ ಬಂದಿವೆ. ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನುವುದಕ್ಕೆ ಕೈ ನಾಯಕರ ಪ್ರತಿಕ್ರಿಯೆ ಸಾಕ್ಷಿ ಎಂದು ಹೇಳಿದರು.
ಕಳೆದ ವರ್ಷ ನಾವು ಆಡಳಿತ ಮಾಡುವಾಗ ಆರ್ಥಿಕ ಸುಭದ್ರತೆ ತಂದಿರುವುದರಿಂದ ಸರ್ಕಾರ ಅರ್ಧ ವರ್ಷದಿಂದ ಆಡಳಿತ ನಡೆಸಿಕೊಂಡು ಬಂದಿದ್ದರಿಂದ ಹೇಗೋ ನಡೆದುಕೊಂಡು ಹೋಯಿತು. ಈ ವರ್ಷ ಬಹಳ ಕಷ್ಟ ಇದೆ. ಅದರ ಜೊತೆಗೆ ಏಳನೇ ವೇತನ ಆಯೋಗದ ಶಿಫಾರಸ್ಸು ಈಡೇರಿಸಬೇಕು. ಹಕವಾರು ಖರ್ಚುಗಳು ಬರುತ್ತವೆ. ಇದೆಲ್ಲವನ್ನು ನೋಡಿದಾಗ ರಾಜ್ಯ ಸರ್ಕಾರ ಆರ್ಥಿಕವಾಗಿ ಕುಷಿಯುವ ಕಾಲ ಬಹಳ ದೂರವಿಲ್ಲ ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ ಈಗಲೂ ಹೇಳುತ್ತೇನೆ. ಈಗ ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಮೂರು ನಾಲ್ಕು ತಿಂಗಳಿಗೆ ನೀಡುತ್ತಿದ್ದಾರೆ. ಮುಂದೆ ಸರ್ಕಾರಿ ನೌಕರರ ಸಂಬಳಕ್ಕೂ ಕಷ್ಟವಾಗಲಿದೆ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ನಾಯಕರು ಮುಡಾದಲ್ಲಿ ಹಗರಣ ಆಗಿಲ್ಲ ಅಂತ ಹೇಳುತ್ತಾರೆ. ಈಗ ಆ ಕಾಲದಲ್ಲಿದ್ದ ಕಮಿಷನರ್ ಅವರನ್ನು ತಾಂತ್ರಿಕ ಸಮಿತಿ ರಿಪೋರ್ಟ್ ಆಧಾರದಲ್ಲಿ ಅಮಾನತು ಮಾಡಲಾಗಿದೆ. ತಾಂತ್ರಿಕ ಸಮಿತಿ ತಪ್ಪು ಕಂಡು ಹಿಡಿದಿದೆ. ಸರ್ಕಾರ ಕಮಿಷನರ್ ಅವರನ್ನ ಸಸ್ಪೆಂಡ್ ಮಾಡಿದೆ. ಹೀಗಾಗಿ ಎಲ್ಲವೂ ಕಾನೂನು ಬದ್ಧವಾಗಿ ನಡೆದಿಲ್ಲ ಅಂತಾ ಸರ್ಕಾರ ಒಪ್ಪಿಕೊಂಡಂತಾಗಿದೆ ಎಂದು ಹೇಳಿದರು.
ಕೊವಿಡ್ ವರದಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೊವಿಡ್ ಪ್ರಕರಣವನ್ನು ಯಾರೂ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಕೋವಿಡ್ ಪೂರ್ಣ ವರದಿ ಹೊರಗಡೆ ಬರಲಿ. ಈಗ ಮಧ್ಯಂತರ ವರದಿ ಬಂದಿದೆ. ಫೈನಲ್ ವರದಿ ಬರಲಿ. ಆಮೇಲೆ ಚರ್ಚೆ ಮಾಡೋಣ. ಏನೇ ತರಾತುರಿ ಮಾಡಿದರೂ ಸತ್ಯಕ್ಕೆ ಜಯ ಇದೆ ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ ಆಂತರಿಕವಾಗಿ ಗೊಂದಲ ಸೃಷ್ಟಿಯಾಗಿದೆ. ಮುಖ್ಯಮಂತ್ರಿಗಳ ಕುರ್ಚಿ ಅಲ್ಲಾಡುತ್ತಿದೆ ಅನ್ನುವ ಭಾವನೆ ಸೃಷ್ಟಿಯಾಗಿದೆ. ಸಿಎಂ ಕುರ್ಚಿ ಮೇಲೆ ಕೂರಬೇಕೆಂಬ ಆಸೆ ಈಗ ಹೊರ ಹೊಮ್ಮುತ್ತಿದೆ. ಇದು ಸಹಜ ಪ್ರಕ್ರಿಯೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಎಲ್ಲವೂ ಸರಿ ಇದೆ ಅಂತ ಹೇಳುತ್ತಲೇ ಒಳಗಡೆಯಿಂದ ದೋಣಿಗೆ ತೂತು ಕೊರೆಯುವುದು ರಾಜಕಾರಣ. ಕರ್ನಾಟಕದ ಇತಿಹಾಸ ನೋಡಿದಾಗ ಕಾಂಗ್ರೆಸ್ ನಲ್ಲಿ ವಿರೇಂದ್ರ ಪಾಟೀಲರು ಅತ್ಯಂತ ಬಲಿಷ್ಠ ಮುಖ್ಯಮಂತ್ರಿಗಳಾಗಿದ್ದರು, ಅವರ ಅವಧಿಯಲ್ಲಿ ರಾತ್ರೋ ರಾತ್ರಿ ಎಲ್ಲ ಶಾಸಕರು ಬದಲಾದರು. ಮುಂದೆ ದೇವರಾಜ್ ಅರಸು ಅವರನ್ನು ರಾತ್ರೋರಾತ್ರಿ ಬದಲಾವಣೆ ಮಾಡಿ ಆರ್. ಗುಂಡೂರಾವ್ ಅವರು ಮುಖ್ಯಮಂತ್ರಿಗಳಾದರು. ದೇವರಾಜ ಅರಸು ಅವರು ಎರಡನೇ ಬಾರಿ ಸ್ವಂತ ಶಕ್ತಿಯಲ್ಲಿ ಆರಿಸಿ ಸಿಎಂ ಆದವರು. ಎಸ್. ಬಂಗಾರಪ್ಪ ಅವರಿಗೆ 183 ಶಾಸಕರ ಬಲವಿತ್ತು. ಆಗಲೂ ಸಿಎಂ ಬದಲಾದರು. ಈ ರಾಜಕಾರಣ ನಡಿಯುತ್ತಾ ಇರುತ್ತದೆ ಎಂದರು.
ರಾಜ್ಯ ಸರ್ಕಾರ ಕಳೆದ ಒಂದು ವರ್ಷದಿಂರ ಏನೂ ಕೆಲಸ ಮಾಡಿಲ್ಲ. ಜನ ಭ್ರಮನಿರಸನರಾಗಿದ್ದಾರೆ, ಆಡಳಿತ ಪಕ್ಷದ ಶಾಸಕರೂ ಭ್ರಮನಿಸರನರಾಗಿದ್ದಾರೆ. ಇದೂ ಕೂಡ ಒಂದು ಪ್ರಮುಖ ಕಾರಣ. ಕಾಂಗ್ರೆಸ್ ನಲ್ಲಿ ಆಂತರಿಕವಾಗಿ ಗೊಂದಲ ಸೃಷ್ಟಿಯಾಗಿದೆ. ಮುಖ್ಯಮಂತ್ರಿಗಳ ಕುರ್ಚಿ ಅಲ್ಲಾಡುತ್ತಿದೆ ಅನ್ನುವ ಭಾವನೆ ಸೃಷ್ಟಿಯಾಗಿದೆ. ಸಿಎಂ ಕುರ್ಚಿ ಮೇಲೆ ಕೂರಬೇಕೆಂಬ ಆಸೆ ಈಗ ಹೊರ ಹೊಮ್ಮುತ್ತಿದೆ.












Click it and Unblock the Notifications