E-khata: ಇ-ಖಾತಾ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ, ಏನದು?
ಪರಿವರ್ತಿತ ಹಾಗೂ ಅಭಿವೃದ್ಧಿಗೊಳ್ಳದ ಭೂಮಿಯನ್ನು ಆರ್ಟಿಸಿ ಆಧಾರದಲ್ಲಿ ನೋಂದಣಿ ಮಾಡುವ ಹಾಗೂ ಸಂಬಂಧಿತ ಯೋಜನಾ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳಲ್ಲಿನ ರಸ್ತೆ, ಉದ್ಯಾನವನ ಹಾಗೂ ಆಟದ ಮೈದಾನಗಳಿಗೂ ಇ-ಖಾತಾ ಮಾಡಿಕೊಳ್ಳುವ ಸಂಬಂಧ ಇದ್ದ ಕೆಲ ಗೊಂದಲಗಳಿಂದ ಕಂದಾಯ ಇಲಾಖೆ ರಿಲೀಫ್ ನೀಡಿದೆ.
ಕಂದಾಯ ಇಲಾಖೆ, ಗ್ರಾಮೀಣ ಅಭಿವೃದ್ಧಿ-ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಾಭಿವೃದ್ಧಿ-ಪೌರಾಡಳಿತ ಇಲಾಖೆ ಒಟ್ಟಾಗಿ ಕೆಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ನಗರ ಅಭಿವೃದ್ಧಿಗೆ ಸಂಬಂಧಿಸಿದ ಇ-ಖಾತಾ ಹಾಗೂ ನೋಂದಣಿಗೆ ಸಂಬಂಧಿಸಿದ ಕೆಲ ಪ್ರಮುಖ ಗೊಂದಲಗಳಿಗೂ ತೆರೆ ಎಳೆದಿದೆ.

ಭೂಪರಿವರ್ತನೆಯ ನಂತರದಲ್ಲಿ ಭೂಪರಿವರ್ತಿತ ಜಮೀನುಗಳ ಪಹಣಿಗಳಿಗೆ ಭೂಕಂದಾಯ ಕಡಿತಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು ಆಸ್ತಿ ಗುರುತಿನ ಸಂಖ್ಯೆಯನ್ನು (ಇ-ಖಾತಾ) ನೀಡಬೇಕು ಎಂದು ಹೇಳಿದೆ.
ಆದರೆ ಭೂಪರಿವರ್ತನೆ ನಂತರ ಆಸ್ತಿ ಗುರುತಿನ ಸಂಖ್ಯೆ (ಇ-ಖಾತಾ) ನೀಡಲು ಕಾಲಾವಕಾಶ ಬೇಕು. ಕೆಲವೊಮ್ಮೆ ಸಾರ್ವಜನಿಕರು ಇ-ಖಾತಾ ಮಾಡಲು ಕೋರಿ ಅರ್ಜಿ ಸಲ್ಲಿಸದೇ ಹಾಗೆಯೇ ಮುಂದುವರಿಸುವ ಸಂದರ್ಭಗಳಲ್ಲಿ ಸಾರ್ವಜನಿಕರು ಪಹಣಿ ಅಥವಾ ಇ-ಖಾತಾ ಆಧಾರದ ಮೇಲೆ ಯಾವುದೇ ವಹಿವಾಟು ಮಾಡಲು ಸಾಧ್ಯವಿಲ್ಲ. ಇಂತಹ ಜಮೀನುಗಳನ್ನು ಭೂಪರಿವರ್ತಿತ ಅಭಿವೃದ್ಧಿಯಾಗದೇ ಇರುವ ಜಮೀನುಗಳೆಂದು ಪರಿಗಣಿಸುವುದಾಗಿ ತಿಳಿಸಿದೆ.

ಇನ್ನು ಮುಂದೆ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೊಂಡು ಅಭಿವೃದ್ಧಿಯಾಗದೇ ಇರುವ ಜಮೀನುಗಳ ಪಹಣಿಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಸಲು ಅನುಕೂಲವಾಗುವಂತೆ ಸದರಿ ಮಾಹಿತಿ ಲಭ್ಯವಾಗುವಂತೆ ಭೂಮಿ ತಂತ್ರಾಂಶದಲ್ಲಿ ಅಗತ್ಯ ತಾಂತ್ರಿಕ ಮಾರ್ಪಾಡು ಮಾಡಲಾಗಿದೆ. ಆದರೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಿಕೊಳ್ಳುವ ಸಂದರ್ಭದಲ್ಲಿ ಕೃಷಿ ಜಮೀನೆಂದು ಪರಿಗಣಿಸದೇ ಕೃಷಿಯೇತರ ಅಭಿವೃದ್ಧಿಯಾಗದ ಜಮೀನುಗಳಿಗೆ ನಿರ್ಧಿರಿಸುವ ಮಾರುಕಟ್ಟೆ ಮೌಲ್ಯವನ್ನೇ ವಿಧಿಸುವುದಾಗಿ ಹೇಳಿದೆ.
ಭೂಮಿ, ಇ-ಸ್ವತ್ತು, ಇ-ಆಸ್ತಿ ತಂತ್ರಾಂಶಗಳ ಸಂಯೋಜನೆಯು ಅಭಿವೃದ್ಧಿ ಹಂತದಲ್ಲಿದ್ದು ಯಾವುದೇ ಒಂದು ಸರ್ವೆ ನಂಬರ್ನಲ್ಲಿ ಭೂಪರಿವರ್ತನೆಯಾದ ನಂತರ ಆ ಸರ್ವೆ ನಂಬರ್ ಮೇಲೆ ಇ-ಸ್ವತ್ತು ಹಾಗೂ ಇ-ಆಸ್ತಿ ಗುರುತಿನ ಸಂಖ್ಯೆ ಸೃಜನೆಯಾಗಿದ್ದಲ್ಲಿ, ಅಂತಹ ಆಸ್ತಿ ಗುರುತಿನ ಸಂಖ್ಯೆಯ ಮಾಹಿತಿಯನ್ನು ಭೂಮಿ ತಂತ್ರಾಂಶಕ್ಕೆ ರವಾನಿಸಲಾಗುತ್ತದೆ.
ಇಂತಹ ಜಮೀನುಗಳಿಗೆ ಇ-ಖಾತಾ ಆಧಾರದ ಮೇಲೆ ನೋಂದಣಿ ವಹಿವಾಟು ನಡೆಸಬೇಕಾಗಿದ್ದು, ಭೂಮಿ ತಂತ್ರಾಂಶದ ಪಹಣಿ ಆಧಾರದ ಮೇಲೆ ನೋಂದಣಿ ವಹಿವಾಟು ನಡೆಸಲು ತಂತ್ರಾಂಶದಲ್ಲಿ ಅನುಮತಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಆಗಿರುವ ಬಡಾವಣೆಗಳಲ್ಲಿ ರಸ್ತೆ, ಆಟದ ಮೈದಾನ, ಪಾರ್ಕ್ಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಪರಿತ್ಯಾಜ ಮಾಡುವುದು ಅವಶ್ಯಕವಾಗಿದೆ. ಆದರೆ ಇವುಗಳಿಗೆ ಖಾತೆ ನೀಡುವ ಬಗ್ಗೆ ಗೊಂದಲವಿದ್ದರಿಂದ ಈ ಪ್ರಕ್ರಿಯೆ ಸ್ಥಗಿತವಾಗಿ, ಅನುಮೋದನೆಗೊಂಡಿರುವ ಬಡಾವಣೆಗಳಲ್ಲಿ ನಿವೇಶನಗಳ ಮಾರಾಟಕ್ಕೆ ಹಿನ್ನಡೆಯಾಗಿದ್ದನ್ನು ಸರ್ಕಾರ ಆದ್ಯತೆಯ ಮೇಲೆ ಪರಿಗಣಿಸಿ ಈ ಸಮಸ್ಯೆಗೆ ಪರಿಹಾರ ನೀಡುತ್ತಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.












Click it and Unblock the Notifications