ದೇಶ ವಿಶ್ವಗುರುವಾಗುವ ಬದಲು ಪಾತಾಳದತ್ತ ಕುಸಿಯುತ್ತಿದೆ: ಸಿದ್ದರಾಮಯ್ಯ

ಬೆಂಗಳೂರು, ಜೂ. 3: ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಆಗಿದ್ದು 8 ವರ್ಷ. ಆದರೆ ದೇಶದ ಅಭಿವೃದ್ಧಿ ಮಾತ್ರ 20 ವರ್ಷ ಹಿಂದಕ್ಕೆ ಕುಸಿದಿದೆ. ದೇಶ ವಿಶ್ವಗುರುವಾಗುವ ಬದಲು ಪಾತಾಳದತ್ತ ಕುಸಿಯುತ್ತಿದೆ. ಇದನ್ನು ನಾನು ಸೃಷ್ಟಿಸಿಕೊಂಡು ಹೇಳುತ್ತಿಲ್ಲ. ಸರ್ಕಾರದ ದಾಖಲೆಗಳೇ ಹೇಳುತ್ತಿವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಅಮೇರಿಕಾದಂತಹ ದೇಶಗಳಿಗೆ ಆರ್ಥಿಕತೆಯನ್ನು ನಿಭಾಯಿಸುವುದು ಹೇಗೆ ಎಂದು ಹೇಳಿಕೊಟ್ಟು ಮಾದರಿಯಾಗಿದ್ದ ಮನಮೋಹನಸಿಂಗರು ರೂಪಿಸಿ ತಲೆ ಎತ್ತಿ ನಿಲ್ಲವಂತೆ ಮಾಡಿದ್ದ ಭಾರತದ ಆರ್ಥಿಕತೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ದುರಾಡಳಿತವು ನೆಲ ಕಚ್ಚುವಂತೆ ಮಾಡಿದೆ. ಇದೇ ಅವರ ಎಂಟು ವರ್ಷಗಳ ಸಾಧನೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

ಮೋದಿಯವರು ಪ್ರಧಾನಿಯಾಗಿ ಎಂಟು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ ಅವರು, ದೇಶಕ್ಕೆ ಮುಂದೆ ಇನ್ನೂ ಕರಾಳ ದಿನಗಳು ಕಾದಿವೆ ಎಂದು ಹೇಳಿದ್ದಾರೆ. ಮೋದಿ ಸರ್ಕಾರದ 8 ಮಹಾ ಡಿಸಾಸ್ಟರುಗಳನ್ನು ಪಟ್ಟಿ ಮಾಡಿದ್ದಾರೆ.

ದೇಶ ಹಿಂದೆಂದೂ ಇಲ್ಲದಷ್ಟು ಸಾಲದ ಸುಳಿಗೆ ಸಿಲುಕಿದೆ. ರೂಪಾಯಿಯ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ. ಬೆಲೆ ಏರಿಕೆಯು ಹಿಂದೆಂದೂ ಇಲ್ಲದ ಮಟ್ಟಕ್ಕೆ ಮುಟ್ಟಿದೆ. ಹಣದುಬ್ಬರ ಕಳೆದ 17 ವರ್ಷಗಳಲ್ಲಿ ತೀವ್ರಗತಿಗೆ ಮುಟ್ಟಿದೆ. ನಿರುದ್ಯೋಗ ತಾರಕಕ್ಕೇರಿದೆ. ರಾಜ್ಯಗಳ ಆರ್ಥಿಕತೆ ಕುಸಿದು ಹೋಗುತ್ತಿದೆ. ಒಕ್ಕೂಟ ವ್ಯವಸ್ಥೆ ಶಿಥಿಲವಾಗುತ್ತಿದೆ. ಇದರ ಜೊತೆಯಲ್ಲಿ ದೇಶದ ಪ್ರಜಾತಾಂತ್ರಿಕೆಯೂ ಭಯಭೀತವಾಗಿದೆ.ಡಿ ಮಾನಿಟೈಸೇಷನ್- ಜಿಎಸ್‍ಟಿ ವ್ಯವಸ್ಥೆ, ಕೊರೋನ ಸಾಂಕ್ರಾಮಿಕದ ಎಡಬಿಡಂಗಿ ನಿರ್ವಹಣೆಗಳು ದೇಶದ ಬೆನ್ನುಮೂಳೆಯನ್ನು ಟೊಳ್ಳು ಮಾಡಿವೆ. ದೇಶದ ಜನರು ಕಷ್ಟಪಟ್ಟು ಕಟ್ಟಿದ್ದ ಲಾಭದಾಯಕ ಸಂಸ್ಥೆ/ಕಂಪೆನಿ/ಕಾರ್ಖಾನೆಗಳನ್ನು ಖಾಸಗಿಯವರಿಗೆ ಬಿಡಿಗಾಸಿಗೆ ಮಾರಾಟ ಮಾಡಲಾಗುತ್ತಿದೆ.ರೈತ, ಕಾರ್ಮಿಕ, ಮಹಿಳೆ, ಯುವಜನರ ವಿರೋಧಿಯಾದ ಕಾನೂನುಗಳನ್ನು ಜಾರಿಗೆ ತಂದು ಮೂಲಕ ಜನರನ್ನು ಶತ್ರುಗಳಂತೆ ಭಾವಿಸಿ ದಮನಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜನರನ್ನು ಬಡತನದ ದವಡೆಗೆ ತಳ್ಳಲಾಗುತ್ತಿದೆ. ಅಂಬಾನಿ, ಅದಾನಿಗಳಂಥ ಕಾರ್ಪೊರೇಟ್ ಬಂಡವಾಳಿಗರನ್ನು ಕೊಬ್ಬಿಸಿ ಮೆರೆಸಲಾಗುತ್ತಿದೆ. ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಈ ಎಂಟು ವರ್ಷಗಳಲ್ಲಿ ಮಾಡಿದ್ದೇನು ಹಾಗಿದ್ದರೆ? ಎಂದರೆ ತಮ್ಮ ಸ್ನೇಹಿತರಾದ ಬಂಡವಾಳಿಗರ ಸಂಪತ್ತು ಹೆಚ್ಚಿಸುವಂತೆ ನೋಡಿಕೊಂಡಿದ್ದು ಮತ್ತು ಜನರಿಗೆ ಸುಳ್ಳು ಹೇಳುತ್ತಾ ಬಂದಿದ್ದಷ್ಟೆ ಇವರ ಕೆಲಸ. ಕೆಲವು ಬಿಜೆಪಿ ವಕ್ತಾರ ಮೀಡಿಯಾಗಳು ಆರ್ಥಿಕತೆ ಉತ್ತಮವಾಗಿದೆ ಎಂದು ತುತ್ತೂರಿ ಊದುತ್ತಿವೆ. ಆರ್ಥಿಕತೆಯ ವಾಸ್ತವವನ್ನು ಅರ್ಥ ಮಾಡಿಕೊಂಡರೆ ಮಾತ್ರ ಎದೆ ಒಡೆದು ಹೋದಂತಾಗುತ್ತದೆ.

ಕೆಲವರ ಸಂಪತ್ತು ಮಾತ್ರು ಹೆಚ್ಚಿದೆ

ಕೆಲವರ ಸಂಪತ್ತು ಮಾತ್ರು ಹೆಚ್ಚಿದೆ

ಭಾರತದಲ್ಲಿ ಕೆಲವರ ಸಂಪತ್ತು ಮಾತ್ರ ಹೆಚ್ಚುತ್ತಿದೆ. ಜನರ ತಲೆಯ ಮೇಲೆ ಸಾಲದ ಶೂಲವನ್ನು ಏರಿಸಲಾಗಿದೆ. ದೇಶದ ಸಾಲವನ್ನು ಯಾವ ಮಟ್ಟಕ್ಕೆ ಏರಿಸಲಾಗಿದೆಯೆಂದರೆ ಸರ್ಕಾರದ ದಾಖಲೆಗಳ ಪ್ರಕಾರ 2014 ರ ಮಾರ್ಚ್ ವೇಳೆಗೆ ಕೇಂದ್ರ ಸರ್ಕಾರ ಮಾಡಿರುವ ಸಾಲ 53.11 ಲಕ್ಷ ಕೋಟಿ ರೂಗಳಷ್ಟಿತ್ತು. ಇದು ದೇಶವು ಸ್ವಾತಂತ್ರ್ಯ ಗಳಿಸಿಕೊಂಡಾಗಿನಿಂದ ಮಾಡಿದ್ದ ಸಾಲ. ಈ ಸಾಲವು 2019-20 ರ ವೇಳೆಗೆ 106.45 ಲಕ್ಷ ಕೋಟಿಗೆ ಏರಿಕೆಯಾಯಿತು. 2022 ರ ಮಾರ್ಚ್-31 ರ ವೇಳೆಗೆ 139.57 ಲಕ್ಷ ಕೋಟಿಗಳಿಗೆ ತಲುಪಿದೆ. 2023 ರ ಮಾರ್ಚ್ ಅಂತ್ಯದ ವೇಳೆಗೆ 155 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿದೆ. ಇದೇ ಸಂದರ್ಭದಲ್ಲಿ ದೇಶದ ರಾಜ್ಯಗಳ ಸಾಲವೂ ಆತಂಕಕಾರಿಯಾಗುವಂತೆ ಏರಿಕೆಯಾಗಿದೆ. 2013-14 ರಲ್ಲಿ ಎಲ್ಲ ರಾಜ್ಯಗಳ ಒಟ್ಟು ಸಾಲ 22.12 ಲಕ್ಷ ಕೋಟಿಗಳಷ್ಟಿತ್ತು. ಅದು ಇದೇ ಮಾರ್ಚ್ ಅಂತ್ಯಕ್ಕೆ 70 ಲಕ್ಷ ಕೋಟಿಗೆ ಮುಟ್ಟಿದೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಇದು 80 ಲಕ್ಷ ಕೋಟಿಗೆ ತಲುಪುತ್ತಿದೆ. ಇದರಿಂದಾಗಿ ದೇಶದ ಒಟ್ಟಾರೆ ಸಾಲ 235 ಲಕ್ಷ ಕೋಟಿಗಳಾಗಬಹುದು. ಇದು 2014 ರ ಮಾರ್ಚ್ 31 ರಂದು 75.23 ಲಕ್ಷ ಕೋಟಿಗಳಷ್ಟಿತ್ತು. ಇದರಿಂದಾಗಿ ದೇಶದ ಪ್ರತಿ ಪ್ರಜೆಯ ತಲೆಯ ಮೇಲೆ 1,70,290 ರೂಪಾಯಿಗಳಷ್ಟು ಸಾಲ ಹೇರಿದಂತಾಗುತ್ತದೆ.

ಸಾಲ ಹೆಚ್ಚಿಸಿದ್ದು ಮೋದಿಯವರ ಸಾಧನೆ

ಸಾಲ ಹೆಚ್ಚಿಸಿದ್ದು ಮೋದಿಯವರ ಸಾಧನೆ

2014 ರಲ್ಲಿ ದೇಶದ ಜನಸಂಖ್ಯೆ 130 ಕೋಟಿಯಷ್ಟಿತ್ತು. ಆಗ ಪ್ರತಿಯೊಬ್ಬರ ತಲೆಯ ಮೇಲಿದ್ದ ಸಾಲದ ಪ್ರಮಾಣ 57692 ರೂ ಗಳಷ್ಟಿತ್ತು. ಇದು ಮೋದಿಯವರ ಮೊದಲ ಬೃಹತ್ ಸಾಧನೆ. ಜನರ ತಲೆಯ ಮೇಲಿನ ಸಾಲವನ್ನು ಸುಮಾರು 3 ಪಟ್ಟು ಅಥವಾ ಶೇ. 300 ರಷ್ಟು ಹೆಚ್ಚಿಸಿದ್ದು ಮೋದಿಯವರ ಸಾಧನೆ. ಭಾರತದ ಹೊರಗಿನ ಸಾಲಗಳನ್ನು ಸಹ ತೀರಿಸಿ ಸುಭಿಕ್ಷವಾಗಿದೆ ಎಂದು ಕೆಲವು ಮಾಧ್ಯಮಗಳು ಹೇಳಿದವು. ಬಿಜೆಪಿಯ ಕೆಲವು ಅಂಧ ಹಿಂಬಾಲಕರು ಬಾಯಿಗೆ ಬಂದದ್ದನ್ನು ಹೇಳಿಕೊಂಡು ಓಡಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ದಾಖಲೆಗಳ ಪ್ರಕಾರ ನೋಡಿದರೂ ಸಹ ದೇಶದ ಬಾಹ್ಯ ಸಾಲ 2013-14 ರಲ್ಲಿ 374483 ಕೋಟಿ ರೂಪಾಯಿಗಳಷ್ಟಿತ್ತು. ಅದು 2022 ರ ಮಾರ್ಚ್ ವೇಳೆಗೆ 657455 ಕೋಟಿಗಳಷ್ಟಾಗಿದೆ. ಇದು ಸರಿ ಸುಮಾರಾಗಿ ದುಪ್ಪಟ್ಟಾಗಿದೆ. ಪರಿಸ್ಥಿತಿ ಹೀಗಿರುವಾಗ ಕೇವಲ ಸುಳ್ಳು ನಿರೂಪಣೆಗಳನ್ನು ಮಾಡಿಕೊಂಡು ಜನರ ಕಣ್ಣಿಗೆ ಮಂಕು ಬೂದಿ ಎರಚುವುದನ್ನು ಬಿಟ್ಟು ಬೇರೇನೂ ನಡೆಯುತ್ತಿಲ್ಲ.

ಸಾಲ ಎಷ್ಟಿರಬೇಕು ನಿಯಂತ್ರಣ ಮಾಡುವುದಕ್ಕಾಗಿಯೆ ಸರ್ಕಾರಗಳು ನಿಯಮಗಳನ್ನು ಮಾಡಿಕೊಂಡಿವೆ. ಅದರಲ್ಲಿ ಮುಖ್ಯವಾಗಿ ರಾಜ್ಯಗಳ ಸಾಲ ಅವುಗಳ ಒಟ್ಟು ಆಂತರಿಕ ಉತ್ಪನ್ನ[ ಜಿಎಸ್‍ಡಿಪಿ] ದ ಶೇ.25 ನ್ನು ಮೀರಬಾರದು. ಆದರೆ ಮಾರ್ಚ್ 31-2022 ಕ್ಕೆ ರಾಜ್ಯಗಳ ಸಾಲದ ಪ್ರಮಾಣ ಶೇ. 31.2 ಕ್ಕೆ ಏರಿಕೆಯಾಗಿದೆ. ಹಾಗೆಯೇ ದೇಶದ ಒಟ್ಟಾರೆ ಸಾಲ ಜಿಡಿಪಿಯ ಶೇ.60 ನ್ನು ಯಾವ ಕಾರಣಕ್ಕೂ ಮೀರಬಾರದು. ಆದರೆ 23 ರ ಮಾರ್ಚ್ ಅಂತ್ಯದ ವೇಳೆಗೆ ಈ ಪ್ರಮಾಣವು ಶೇ.89.6 ರಷ್ಟಕ್ಕೆ ಏರಿಕೆಯಾಗುತ್ತಿದೆ.

ಉದಾಹರಣೆಗೆ ದೇಶದ ಒಟ್ಟಾರೆ ದುಡಿಮೆಯಲ್ಲಿ 100 ರೂಪಾಯಿಗೆ 90 ರೂಪಾಯಿಯಷ್ಟು ಸಾಲವಿದೆ ಎಂದು ಅರ್ಥ. ಕಳೆದ ವರ್ಷದ ಲೆಕ್ಕ ನೋಡಿದರೆ ದೇಶವು ದುಡಿದ 100 ರೂಪಾಯಿಯಲ್ಲಿ 44 ರೂಪಾಯಿ ಕೇವಲ ಬಡ್ಡಿ ಮುಂತಾದವಕ್ಕೆ ಖರ್ಚಾಗುತ್ತಿತ್ತು.

ದೇಶದ ಒಟ್ಟು ದುಡಿಮೆಯನ್ನು ಮೀರಿ ಸಾಲ ಬೆಳೆದಿದೆ

ದೇಶದ ಒಟ್ಟು ದುಡಿಮೆಯನ್ನು ಮೀರಿ ಸಾಲ ಬೆಳೆದಿದೆ

ಮೋದಿಯವರ ಸರ್ಕಾರ ಜಿಡಿಪಿಯ ಗಾತ್ರದ ಲೆಕ್ಕವನ್ನೂ ಸಹ ಸರಿಯಾಗಿ ಹೇಳುತ್ತಿಲ್ಲ. ಅದು 230 ರಿಂದ 270 ಲಕ್ಷ ಕೋಟಿಯವರೆಗೂ ಇರಬಹುದೆಂದು ಅಂದಾಜು ಮಾಡಲಾಗುತ್ತಿದೆ. ಈ ಲೆಕ್ಕದಲ್ಲಿ ನೋಡಿದರೂ ದೇಶದ ಒಟ್ಟು ದುಡಿಮೆಯನ್ನು ಮೀರಿ ಸಾಲ ಬೆಳೆದಿದೆ ಎಂದು ಅಂದಾಜಿಸಲಾಗಿದೆ. ಶ್ರೀಲಂಕಾ ದಿವಾಳಿ ಎದ್ದಿದ್ದು ಕೂಡ ಹೀಗೆಯೆ. ಯಾವುದೆ ದೇಶದಲ್ಲಾಗಬಹುದು ಅಥವಾ ಮನೆಯಲ್ಲಾಗಬಹುದು ದುಡಿಮೆಗಿಂತ ಸಾಲವೆ ಹೆಚ್ಚಾದರೆ ಅದನ್ನು ಎಂದಾದರೂ ಒಳ್ಳೆಯ ಆರ್ಥಿಕತೆಯ ನಿರ್ವಹಣೆ ಎನ್ನಲು ಸಾಧ್ಯವೆ? ಅಥವಾ ದಿವಾಳಿ ಆರ್ಥಿಕತೆ ಎನ್ನಬೇಕೆ? ಎಂಬುದು ಸಾಮಾನ್ಯ ಜ್ಞಾನ ಇರುವವರಿಗೆಲ್ಲ ಅರ್ಥವಾಗುತ್ತದೆ.

ಕರ್ನಾಟಕದ ಸಾಲ ಸಹ ಅಪಾಯಕಾರಿ ಹಂತಕ್ಕೆ ಮುಟ್ಟಿದೆ

ಕರ್ನಾಟಕದ ಸಾಲ ಸಹ ಅಪಾಯಕಾರಿ ಹಂತಕ್ಕೆ ಮುಟ್ಟಿದೆ

ರಾಜ್ಯದ ಸಾಲ ಕೂಡ ಅಪಾಯಕಾರಿಯಾದ ಹಂತಕ್ಕೆ ಮುಟ್ಟಿದೆ. ಸರ್ಕಾರದ ದಾಖಲೆಗಳ ಪ್ರಕಾರ 2025-26 ರ ವೇಳೆಗೆ ಎಲ್ಲವೂ ನಿಯಂತ್ರಣದಲ್ಲಿದ್ದರೆ ರಾಜ್ಯದ ಸಾಲದ ಪ್ರಮಾಣ 7.38 ಲಕ್ಷ ಕೋಟಿಗಳಷ್ಟಾಗಲಿದೆ. ಸರ್ಕಾರದ ಈ ಅಂದಾಜು 2022-23 ರಲ್ಲೆ ಭಂಗವಾಗುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿಯವರು ಮಾಧ್ಯಮಗಳ ಮುಂದೆ, ಸದನದಲ್ಲಿ ಹತ್ತಾರು ಬಾರಿ 'ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ 67 ಸಾವಿರ ಕೋಟಿ ಸಾಲ ಮಾಡುತ್ತೇವೆ ಎಂದಿದ್ದರು, ಆದರೆ ಹಣಕಾಸು ಪರಿಸ್ಥಿತಿ ಸುಧಾರಿಸಿದ ಕಾರಣ ನಾವು ಸಾಲದ ಪ್ರಮಾಣವನ್ನು 63 ಸಾವಿರ ಕೋಟಿಗೆ ಇಳಿಸುತ್ತೇವೆ ಎಂದಿದ್ದರು. ಆದರೆ ರಾಜ್ಯದ ಆರ್ಥಿಕ ಇಲಾಖೆಯು ನೀಡಿರುವ ದಾಖಲೆ ನೋಡಿದರೆ, ಸರ್ಕಾರವು ಈ ವರ್ಷ ಸಾಲದ ಪ್ರಮಾಣವನ್ನು ಇಳಿಸುವುದಿರಲಿ, ಯಡಿಯೂರಪ್ಪನವರು ಬಜೆಟ್ ನಲ್ಲಿ ಘೋಷಿಸಿದ್ದಕ್ಕಿಂತ 13000 ಕೊಟಿಗಳಷ್ಟು ಹೆಚ್ಚು ಅಂದರೆ 80.4 ಸಾವಿರ ಕೋಟಿಗಳಷ್ಟು ಸಾಲ ಮಾಡಿದ್ದಾರೆ. ಹಾಗಾಗಿ ಈ ವರ್ಷದ ಕಡೆಯ ಹೊತ್ತಿಗೆ ರಾಜ್ಯದ ಸಾಲದ ಪ್ರಮಾಣ 5 ಲಕ್ಷದ 40 ಸಾವಿರ ಕೋಟಿಗಳಿಗೆ ಏರಿಕೆಯಾಗುತ್ತಿದೆ. 2018 ರ ಮಾರ್ಚ್‍ನಲ್ಲಿ ರಾಜ್ಯದ ಸಾಲದ ಪ್ರಮಾಣ 2.42 ಲಕ್ಷ ಕೋಟಿಗಳಷ್ಟಿತ್ತು. ಅಲ್ಲಿಂದ ಈಚೆಗೆ 3 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಲಾಗಿದೆ. ರಾಜ್ಯದ ಜನರ ತಲೆಯ ಮೇಲೆ ಸಾಲದ ಶೂಲ ಇರಿಯುತ್ತಿದೆ. ಇದು ಸರ್ಕಾರ ಮಾಡಿರುವ ಸಾಲ.

ಜನ ಖಾಸಗಿ ಸಾಲದ ಮೊರೆ

ಜನ ಖಾಸಗಿ ಸಾಲದ ಮೊರೆ

ರಾಜ್ಯದ ಜನರು ಎಂಥ ಬಿಕ್ಕಟ್ಟಿನಲ್ಲಿದ್ದಾರೆಂದರೆ, ತಮ್ಮ ಮನೆಗಳಲ್ಲಿದ್ದ ಚಿನ್ನವನ್ನು ಒತ್ತೆ ಇಟ್ಟು ಸುಮಾರು 4.5 ಲಕ್ಷ ಕೋಟಿ ಸಾಲವನ್ನು ಮುತ್ತುಟ್, ಮಣಪ್ಪುರಂ ಮುಂತಾದ 4 ಕಂಪೆನಿಗಳಿಂದಲೆ ಪಡೆದಿದ್ದಾರೆ. ನಮ್ಮ ರಾಜ್ಯದ ರೈತರು ಕೃಷಿಗಾಗಿ ಮಾಡಿರುವ ಸಾಲದ ಪ್ರಮಾಣ 2022 ರ ಜನವರಿ ವೇಳೆಗೆ 1.60 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪೆನಿಗಳ ಪರವಾದ ನಿಲುವು ತಾಳಿರುವುದರಿಂದ, ಜನಪರ ಆರ್ಥಿಕ ನೀತಿ ಇಲ್ಲದಿರುವುದರಿಂದ ದೇಶವನ್ನು ಸಾಲದ ಸುನಾಮಿಗೆ ಸಿಲುಕಿಸಿದ್ದಾರೆ. ರಾಜ್ಯಕ್ಕೆ ನ್ಯಾಯಯುತವಾಗಿ ಕೊಡಬೇಕಾದಷ್ಟು ಅನುದಾನಗಳನ್ನು, ತೆರಿಗೆ ಹಂಚಿಕೆಯನ್ನು ಮಾಡದಿರುವುದರಿಂದ ನಮ್ಮ ರಾಜ್ಯವು ಸಾಲದ ಸುಳಿಗೆ ಸಿಲುಕಿಕೊಂಡಿದೆ. 15 ನೇ ಹಣಕಾಸು ಆಯೋಗವು ನಮ್ಮ ರಾಜ್ಯಕ್ಕೆ ಹೆಚ್ಚುವರಿಯಾಗಿ 5495 ಕೋಟಿ ರೂ ಗಳನ್ನು ಶಿಫಾರಸ್ಸು ಮಾಡಿದ್ದರೂ ಅದನ್ನು ಕೊಡುವುದಿಲ್ಲವೆಂದು ಹೇಳಿ ರಾಜ್ಯದ ಜನರ ಬೆನ್ನಿಗೆ ಇರಿದ ನಿರ್ಮಲಾ ಸೀತಾರಾಮನ್ ಅವರನ್ನು ಮತ್ತೆ ರಾಜ್ಯದಿಂದ ರಾಜ್ಯಸಭೆಗೆ ಆರಿಸಲು ಬಿಜೆಪಿ ಟಿಕೆಟ್ ನೀಡಿ ನಮ್ಮ ಜನರಿಗೆ ಅವಮಾನ ಮಾಡಿದೆ.

ಕೇಂದ್ರ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ಜನಪರವಾದ ನೀತಿ ಹೊಂದಿಲ್ಲದ ಕಾರಣ ರಾಜ್ಯದ ಜನರು ಸಾಲದ ಸಂಕೋಲೆಗೆ ಸಿಲುಕುತ್ತಿದ್ದಾರೆ. 3-4 ವರ್ಷಗಳ ಹಿಂದೆ ದೇಶದಲ್ಲಿ ಆರ್ಥಿಕ ಶಿಸ್ತಿಗೆ ಹೆಸರಾಗಿದ್ದ ನಮ್ಮ ರಾಜ್ಯ ಇಂದು ದಿವಾಳಿಯಂಚಿಗೆ ಬಂದು ನಿಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+